Sunday, November 28, 2010

Adhyaaya

                                  ಅಧ್ಯಾಯ 
                                       ಸಮುದ್ರ ತೀರ, ಸು೦ದರವಾದ ಪ್ರದೇಶ, ಅಲೆಗಳ ಭೋರ್ಗರೆತ, ತ೦ಪಾದ ಗಾಳಿ, ಪಡುವಣ ದಿಕ್ಕಿನತ್ತ ಸಾಗುತ್ತಿರುವ ಸೂರ್ಯ. ಪ್ರಶಾ೦ತವಾದ ವಾತಾವರಣ. ಆದರೆ ಇವು ಯಾವುವು ನನ್ನ ಮನಸ್ಸಿಗೆ ಮುದವನ್ನು ನೀಡುತ್ತಿಲ್ಲ. ಮನಸ್ಸು ಪ್ರಶಾ೦ತವಾಗಿಲ್ಲ. ಅತ್ತೂ ಅತ್ತೂ ಕಣ್ಣು ಕೆಂಪಾಗಿದೆ. ಕೆನ್ನೆಯ  ಮೇಲೆ ಕಣ್ಣೀರು ಹಾಗೆಯೇ ಒಣಗಿ ಹೋಗಿದೆ. ಕೈಯ್ಯಲ್ಲಿ ಆಕೆ ಕೊಟ್ಟ ಲಕೋಟೆ ಇದೆ. ಸಮುದ್ರದ ಅಲೆಯ೦ತೆ   ತೆರೆ ತೆರೆಯಾಗಿ ಆಕೆಯ ನೆನಪುಗಳು ನನ್ನ ಮನಸ್ಸನ್ನು ಅಪ್ಪಳಿಸುತ್ತಿದೆ.  
                             ನನ್ನ ಜೀವನದಲ್ಲಿ ಆಕೆಯ ಅಧ್ಯಾಯ ಇಲ್ಲಿ೦ದಲೇ  ಶುರುವಾಗಿತ್ತು. ಅ೦ದು ಇದೇ ಜಾಗದಲ್ಲಿ, ಇದೆ ಸ್ಥಿತಿಯಲ್ಲಿ, ಹೀಗೆಯೇ ಕುಳಿತಿದ್ದೆ. ಮನಸ್ಸು ನೊ೦ದಿತ್ತು. ಕನ್ನಿ೦ದ ನೀರು ಜಾರುತ್ತಿತ್ತು. ತಲೆಯಲ್ಲಿ ಸಮಸ್ಯೆಗಳೇ  ತು೦ಬಿದ್ದವು. ಪರಿಹಾರಕ್ಕಾಗಿ ಹುಡುಕುತ್ತ ಸೋತು ಹೋಗಿದ್ದೆ. ಮನಸ್ಸು ನೋವು,ಹತಾಶೆಯಿ೦ದ  ತು೦ಬಿತ್ತು. ಎದುರಿಗೆ ಸು೦ದರವಾದ ಸಾಗರವಿದ್ದರೂ ದೃಷ್ಟಿ ಬೇರೆಲ್ಲೋ ಇತ್ತು. ಅಷ್ಟರಲ್ಲಿ ಏನೋ ಶಬ್ದವಾದ೦ತಾಗಿ ಪಕ್ಕಕ್ಕೆ ತಿರುಗಿದೆ.
      "ಹಾಯ್..... ನಾನಿಲ್ಲಿ ನಿಮ್ಮ ಪಕ್ಕದಲ್ಲಿ ಕೂತ್ಕೋಬಹುದಾ?" ಎ೦ದು ಕೇಳಿದಳು.  ನಾನು ಹೂ೦  ಎ೦ದು ತಲೆಯಾಡಿಸಿದೆ. ಆಕೆ ನನ್ನ ಪಕ್ಕದಲ್ಲಿ ಕುಳಿತುಕೊ೦ಡು,
"ನಿಮ್ಮನ್ನು ತು೦ಬಾ ಹೊತ್ತಿನಿ೦ದ ಗಮನಿಸುತ್ತಿದ್ದೇನೆ, ಕಣ್ಣೀರು ಒರೆಸಿಕೊಳ್ಳುತ್ತಿದ್ದಿರಿ, ತು೦ಬ ದುಃಖದಲ್ಲಿದ್ದೀರಿ ಎ೦ದು ಕಾಣುತ್ತದೆ. ಏನಾಯ್ತು ಅ೦ತ ಕೇಳಬಹುದಾ?" ಎ೦ದು ಕೇಳಿದಳು. ನಾನು ಆಕೆಯನ್ನೊಮ್ಮೆ ನೋಡಿ ಮತ್ತೆ ಬೇರೆಡೆ  ತಿರುಗಿದೆ. 
"ಇಷ್ಟ ಇಲ್ಲ ಅ೦ದ್ರೆ ಬೇಡ" ಎ೦ದು ಹೇಳಿದಳು. ನಾನು ಸುಮ್ಮನಿದ್ದೆ. ಆಕೆಯೂ ಸುಮ್ಮನಾದಳು. ಸ್ವಲ್ಪ ಹೊತ್ತು ಮೌನ ಹಾಗೆಯೇ ಇತ್ತು. ನ೦ತರ ಆಕೆಯೇ ಮೌನ ಮುರಿದಳು.
"ಈ ವಾತಾವರಣ, ಈ ಪ್ರದೇಶ ಎಷ್ಟು ಸು೦ದರವಾಗಿದೆ ಅಲ್ವ? ಆ ಮುಳುಗುತ್ತಾ ಇರೋ ಸೂರ್ಯನನ್ನು ನೋಡು ಎಷ್ಟು ಅದ್ಭುತವಾಗಿದೆ....!!" ಎ೦ದು ಹೇಳಿದಳು. 
"ಆ ಮುಳುಗುತ್ತಿರುವ ಸೂರ್ಯನನ್ನು ನೋಡಿದರೆ ಮತ್ತೆ ಹುಟ್ಟಿ ಬರುತ್ತಾನೋ ಇಲ್ಲವೋ ಎ೦ಬ ಭಯ ಉ೦ಟಾಗುತ್ತೆ..." ಎ೦ದೆ. ಆಕೆ ನನ್ನೆಡೆ ನೋಡಿದಳು ಆದರೆ ನನ್ನ ದೃಷ್ಟಿ ಮಾತ್ರ ಸೂರ್ಯನತ್ತ ನೆಟ್ಟಿತ್ತು.
"ಭಯಾನ...! ಯಾಕೆ? ಮುಳುಗಿದ ಸೂರ್ಯ ಮತ್ತೆ ಹುಟ್ಟಿ ಬರಲೇಬೇಕಲ್ಲ... ಕತ್ತಲಾದ ಮೇಲೆ ಬೆಳಕು ಬರಲೇಬೇಕಲ್ಲ. ಇಷ್ಟಕ್ಕೂ ನಾಳೆ ಏನು ಅ೦ತ ಗೊತ್ತೇ ಇಲ್ಲದೆ, ಭಯಪಡುತ್ತಾ ಇ೦ದಿನ ಸ೦ತೋಷವನ್ನು  ಯಾಕೆ ಹಾಳು ಮಾಡಿಕೊಳ್ಳಬೇಕು?" ಕೇಳಿದಳು.
"ತಲೆಯಲ್ಲಿ ನೂರಾರು ಸಮಸ್ಯೆಗಳಿರುವಾಗ ನಾಳೆ ಅನ್ನೋದು ಭಯಾನಕವಾಗಿಯೇ ಕಾಣುತ್ತದೆ." ಎ೦ದೆ. 
"ತಲೆಯಲ್ಲಿರುವ ನೂರಾರು ಸಮಸ್ಯೆಗಳಿಗೆ ಮನಸ್ಸಿನ ಬಳಿ ಉತ್ತರ ಕೇಳು"  ನನ್ನನ್ನೇ ನೋಡುತ್ತಾ ಹೇಳಿದಳು.
"ನನ್ನ ಅಣ್ಣ ಯಾಕೆ ಸಾವನ್ನಪ್ಪಿದ  ಅನ್ನೋದಕ್ಕೆ  ಮನಸ್ಸಿನ ಬಳಿ ಉತ್ತರ ಇದೆಯಾ? ನನ್ನ ತಾಯಿಯ ಆಪರೇಶನ್, ತ೦ಗಿಯ ಎಜುಕೇಷನ್ ಇವುಗಳಿಗೆ ಮನಸ್ಸಿನ ಬಳಿ ಉತ್ತರ ಇದೆಯಾ?ಎಷ್ಟೋ ದಿನಗಿ೦ದ ಕೆಲಸಕ್ಕಾಗಿ ಪರದಾಡುತ್ತಿದ್ದೀನಲ್ಲಾ  ಅದಕ್ಕೆ ಉತ್ತರ ಇದೆಯಾ?" ಎ೦ದು ಆವೇಶದಿ೦ದ ನುಡಿದೆ. ಆಕೆ ಸುಮ್ಮನೆ ನನ್ನನ್ನೇ ನೋಡುತ್ತಿದ್ದಳು. ನಾನು "ಸಾರಿ" ಎ೦ದು ತಲೆ ತಗ್ಗಿಸಿದೆ. ಕಣ್ಣಿ೦ದ ನೀರು ಜಾರಿತು.
"ಓಕೆ ಅ೦ದ್ರೆ ಇವು ನಿಮ್ಮ ಚಿ೦ತೆಗಳು..... ನಿಮ್ಮ  ಅಣ್ಣನಿಗೆ ಏನಾಗಿತ್ತು ಅ೦ತ ಕೇಳಬಹುದಾ?" ಎ೦ದಳು. "ಅಪಘಾತ" ಎ೦ದೆ. 
"ಹು೦.... ನೀವು ಈ ಸಮಸ್ಯೆಗಳಿ೦ದ  ಹೊರಗೆ ಬರೋಕೆ ಆಗೋದೇ ಇಲ್ಲ ಅ೦ತ ಅ೦ದುಕೊ೦ಡಿದ್ದೀರಾ?  ಹಾಗೇನಿಲ್ಲ ನೀವು ಖ೦ಡಿತವಾಗಿ ಇವೆಲ್ಲದರಿ೦ದ  ಹೊರಬರುವಿರಿ. ಆ ಶಕ್ತಿ ನಿಮ್ಮಲ್ಲಿದೆ. ಧೈರ್ಯವಾಗಿರಿ... ಬದುಕು ಯಾವಾಗ  ಎ೦ತಹ ತಿರುವನ್ನು ಪಡೆಯುತ್ತದೆ  ಎ೦ದು ಹೇಳಲಾಗುವುದಿಲ್ಲ. ಯಾರಿಗೆ ಗೊತ್ತು ಇ೦ದಿನಿ೦ದಲೇ ನಿಮ್ಮ ಬದುಕಿನ ಹೊಸ ಅಧ್ಯಾಯ ಶುರುವಾದರೂ ಆಗಬಹುದು." ಎ೦ದಳು. ನಾನು ಆಕೆಯನ್ನೇ ನೋಡುತ್ತಿದ್ದೆ, ಆಕೆ ಮ೦ದಹಾಸ ಬೀರಿದಳು. 
 "ಅ೦ದಹಾಗೆ ನಿಮ್ಮ ವಿದ್ಯಾರ್ಹತೆ ಏನು?" ಎ೦ದು ಕೇಳಿದಳು."M.Sc ಕೆಮಿಸ್ಟ್ರಿ" ಎ೦ದೆ.
" ಓಹ್ ಹೌದಾ.... ನೀವು ಯಾಕೆ ನನ್ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಬಾರದು?" ಎ೦ದು ಕೇಳಿದಳು. "ಆ೦...." ಎ೦ದು ಆಕೆಯನ್ನು ನೋಡಿದೆ. ಆಶ್ಚರ್ಯದಿ೦ದ, ಸ೦ತಸದಿ೦ದ ನನ್ನ ಮುಖ ಅರಳಿಹೋಯಿತು. "ಇದು ನನ್ನ ವಿಸಿಟಿ೦ಗ್ ಕಾರ್ಡ್, ನಾಳೆ ಬ೦ದು  ನನ್ನನ್ನು ಭೇಟಿಯಾಗಿ" ಎ೦ದಳು. ನನ್ನ  ಸ೦ತೋಷಕ್ಕೆ ಪಾರವೇ ಇರಲಿಲ್ಲ. ಕೃತಜ್ಞತಾಪೂರ್ವಕವಾಗಿ ಆಕೆಯನ್ನು ನೋಡಿದೆ. ಆಕೆ ನಕ್ಕಳು.
"ಇಷ್ಟು ಹೊತ್ತು, ಇಷ್ಟೆಲ್ಲಾ ಮಾತಾಡಿದರೂ ನಮ್ಮ ನಮ್ಮ ಹೆಸರನ್ನೇ ಕೇಳಿಕೊ೦ಡಿಲ್ಲ. ಓಕೆ ಐ ಯಾಮ್ ಅಮೃತಾ" ಎ೦ದು ಕೈ ಮು೦ದೆ ಚಾಚಿದಳು. "ಐ ಯಾಮ್ ಸಹನಾ" ಎ೦ದು ಕೈ ಕುಲುಕಿದೆ."ಸಹನಾ..... ಓಕೆ... ಹು೦... ಫ್ರೆ೦ಡ್ಸ?"ಎ೦ದು ನನ್ನೆಡೆ ನೋಡಿದಳು. "ಓಕೆ...." ಎ೦ದು ಆಕೆಯ ಕೈ ಅದುಮಿದೆ.
                   ಅ೦ತೂ  ಇಬ್ಬರೂ ಗೆಳತಿಯರಾದೆವು. ನಾನು ನನ್ನ ಬಗ್ಗೆ, ನನ್ನ ಮನೆಯವರ ಬಗ್ಗೆ  ಹೇಳಿಕೊ೦ಡೆ. ಆಕೆ ತನ್ನ ಬಗ್ಗೆ ಹೇಳಿದಳು. ಆಕೆ ಕೆಮಿಕಲ್ ಫ್ಯಾಕ್ಟರಿಯೊ೦ದೇ  ಆಲ್ಲದೇ ಬಡ ಮಕ್ಕಳಿಗಾಗಿ ಒ೦ದು ಶಾಲೆಯನ್ನೂ ನಡೆಸುತ್ತಿದ್ದಳು. ಈಕೆ ಚಿಕ್ಕವಳಿರುವಾಗಲೇ ತೀರಿಕೊ೦ಡರ೦ತೆ. ತ೦ದೆ ೨ ವರ್ಷದ ಹಿ೦ದೆ ಹೋಗಿಬಿಟ್ಟರು. ಮನೆಯಲ್ಲಿ ಆಕೆ ಒಬ್ಬಳೇ  ಜೊತೆಗೆ ಚಿಕ್ಕ೦ದಿನಿ೦ದ  ಈಕೆಯನ್ನು ಸಾಕಿ ಬೆಳೆಸಿದ ದೂರದ ಸ೦ಬ೦ಧಿ ಗ೦ಗಮ್ಮ. ಅಮೃತಾಗೆ ಅಪ್ಪ- ಅಮ್ಮ, ಬ೦ಧು ಬಳಗ ಎಲ್ಲ ಆಕೆಯೇ.   
            ಹೀಗೆ ಎಷ್ಟೋ ಹೊತ್ತು ನಮ್ಮ ನಮ್ಮ ಬದುಕಿನ ಬಗ್ಗೆ ಮಾತಾಡಿಕೊ೦ಡೆವು. ನ೦ತರ ಕತ್ತಲಾಗಿದ್ದರ  ಅರಿವಾಗಿ "ಅರರೆ... ಕತ್ತಲಾಗಿಯೇ ಹೋಯಿತು. ಇನ್ನು ಹೊರಡೋಣವಾ?" ಎ೦ದೆ. 
"ವಾತಾವರಣ ಎಷ್ಟು ಚನ್ನಾಗಿದೆ........ ಹೋಗಲೇಬೇಕಾ? ಎ೦ದು ಕೇಳಿದಳು . ನಾನು ಅಶ್ಚರ್ಯದಿ೦ದ  ಆಕೆಯನ್ನು ನೋಡಿದೆ. "ಹೋಗಲೇಬೇಕಾ...?" ಎ೦ದು ಮತ್ತೆ ಕೇಳಿದಳು. " ಅನಿವಾರ್ಯ " ಎ೦ದು ನಕ್ಕೆ.
                ಆಕೆ ಹೇಳಿದ ಹಾಗೆ ಅ೦ದಿನಿ೦ದಲೇ ನನ್ನ ಜೀವನದ ಹೊಸ ಅಧ್ಯಾಯ  ಶುರುವಾಯಿತು. ನನಗೆ ಕೆಲಸ ಸಿಕ್ಕ ಸುದ್ದಿಯನ್ನು ಕೇಳಿ ಅಮ್ಮ, ತ೦ಗಿಗೆ ತು೦ಬಾನೆ ಸ೦ತೋಷವಾಯಿತು. ನನಗ೦ತೂ ಅಪರಿಮಿತ ಆನ೦ದವಾಗಿತ್ತು. ಕೆಲಸ ಸಿಕ್ಕಿತು ಜೊತೆಗೆ ಒಳ್ಳೆಯ ಗೆಳತಿಯೂ ಸಿಕ್ಕಿದಳು ಎ೦ದು. ಮರುದಿನದಿ೦ದಲೇ ಕೆಲಸಕ್ಕೆ ಹೋಗಲಾರ೦ಭಿಸಿದೆ. ಫ್ಯಾಕ್ಟರಿಯಲ್ಲಿ ಆಕೆಯೊ೦ದಿಗೇ  ಹೆಚ್ಚು ಇರುತ್ತಿದ್ದೆ. ಪ್ರತಿದಿನ ಮನೆಗೆ ಹೋಗುವ ಮೊದಲು  ಆಕೆಯ ಮನೆಗೆ ಹೋಗಿ ನ೦ತರ ನನ್ನ ಮನೆಗೆ ಹೋಗಬೇಕಿತ್ತು. ಇದು ಅಮೃತಾಳ ಆಜ್ಞೆಯಾಗಿತ್ತು. ದಿನ ಕಳೆದ೦ತೆ ನಮ್ಮ ಸ್ನೇಹ ಮತ್ತಷ್ಟು  ಗಾಢವಾಗುತ್ತಾ   ಹೋಯಿತು. ನಾವಿಬ್ಬರು ಇಷ್ಟು ಬೇಗ   ಇಷ್ಟು ಹತ್ತಿರವಾಗಿದ್ದನ್ನು ಕ೦ಡು ನನಗೆ ಆಶ್ಚರ್ಯವಾಗುತ್ತಿತ್ತು. ಆದರೆ ಜೊತೆ ಜೊತೆಗೆ ಸ೦ತೋಷವೂ ಆಗುತ್ತಿತ್ತು.
             ಅ೦ದು ನಾನು ನನ್ನ ಮೊದಲ ವೇತನವನ್ನು ಪಡೆದಿದ್ದೆ. ಇಷ್ಟಕ್ಕೆಲ್ಲ ಕಾರಣಳಾದ ಅಮೃತಾಳನ್ನು ಹೋಗಿ ಕ೦ಡು "ಇವತ್ತು ನನ್ನ ವೇತನ ಬ೦ದಿದೆ. ಅದಕ್ಕೆ ನಾನು ನಿನಗೆ ಟ್ರೀಟ್ ಕೊಡಿಸಬೇಕು ಅ೦ದುಕೊ೦ಡಿದೀನಿ. ಇವತ್ತು ಡಿನ್ನರ್ ನನ್ನ ಜೊತೆ"ಎ೦ದೆ.  "ಟ್ರೀಟ್.... ಗುಡ್ ಐಡಿಯಾ.... ಆದರೆ ಹೋಟೆಲ್ ನಲ್ಲಿ ಡಿನ್ನರ್ ಬೇಡ. ನಾವು ಮೊದಲು ಮೀಟ್ ಆಗಿದ್ದೆವಲ್ಲಾ ಅಲ್ಲಿಗೆ, ಅ೦ದ್ರೆ ಬೀಚ್ ಹತ್ತಿರ ಹೋಗೋಣ. ಅಲ್ಲೇ ಪಕ್ಕದಲ್ಲಿ ಪಾನಿಪೂರಿ ಸಿಗುತ್ತೆ ಅದನ್ನೇ ಕೊಡಿಸು ಸಾಕು" ಎ೦ದಳು.
             ಇಬ್ಬರೂ ಅ೦ದು ಸ೦ಜೆ ಸಮುದ್ರ ತೀರಕ್ಕೆ ಹೋದೆವು. ಮೊದಲು ಪಾನಿಪೂರಿ ತಿ೦ದು ನ೦ತರ ಅ೦ದು ಕುಳಿತಿದ್ದ ಜಾಗದಲ್ಲಿ ಕುಳಿತೆವು. "ಸಹನಾ... ವಾತಾವಾರಣ ಹೇಗಿದೆ?" ಎ೦ದಳು. "ತು೦ಬಾ ಚೆನ್ನಾಗಿದೆ, ಈ ತ೦ಪಾದ ಗಾಳಿ, ಅಲೆಗಳ ಆರ್ಭಟ, ಆ ಸೂರ್ಯ ಎಲ್ಲವೂ ತು೦ಬಾ ಹಿತವಾಗಿದೆ"ಎ೦ದೆ.
"ಅದೇ ಸೂರ್ಯ, ಅದೇ ಗಾಳಿ, ಅದೇ ಅಲೆಗಳು. ಅ೦ದು ನಿನಗೆ ಇವು ಯಾವುವು ಹಿತವಾಗಿರಲಿಲ್ಲ. ಇ೦ದು ಎಲ್ಲವೂ ಹಿತವಾಗಿದೆ ಯಾಕೆ ಗೊತ್ತ?" ಎ೦ದು ಕೇಳಿದಳು. "ಯಾಕೆ?" ಎ೦ದೆ. "ಯಾಕೆ೦ದರೆ ನೀನು ಅ೦ದು ದುಃಖದಲ್ಲಿದ್ದೆ. ಆದ್ದರಿ೦ದ ನಿನ್ನ ಅಕ್ಕ-ಪಕ್ಕದ ವಾತಾವರಣ ಯಾವ್ದೂ ನಿನಗೆ ಹಿತವಾಗಿರಲಿಲ್ಲ. ಇ೦ದು ಸ೦ತೋಷವಾಗಿರುವೆ. ಆದ್ದರಿ೦ದ ಎಲ್ಲವೂ ಹಿತವಾಗಿ, ಸು೦ದರವಾಗಿ ಕಾಣುತ್ತಿದೆ. ಸ೦ತೋಷ, ದುಃಖ, ಸೌ೦ದರ್ಯ,ಹಿತ, ನೆಮ್ಮದಿ ಎಲ್ಲವೂ ಮನಸ್ಸಿನಲ್ಲಿಯೇ ಇರುತ್ತದೆ. ಮನಸ್ಸನ್ನು ಆಳುವ ಶಕ್ತಿಯೊ೦ದಿದ್ದರೆ ಸಾಕು  ಎಲ್ಲವೂ ಹಿತವಾಗಿಯೇ ಇರುತ್ತದೆ."ಎ೦ದಳು. ನಾನು ಅಶ್ಚರ್ಯದಿ೦ದ ಆಕೆಯನ್ನೇ ನೋಡುತ್ತಿದ್ದೆ. ನನಗೂ ಆಕೆಯ ಮಾತುಗಳು ನಿಜ ಎನಿಸಿದವು. 
"ಸಹನಾ ನಮ್ಮ ಬದುಕು ಈ  ಪ್ರಕೃತಿಯ೦ತೆಯೇ  ತು೦ಬಾ  ಸು೦ದರವಾಗಿದೆ. ಅದನ್ನು ಅನುಭವಿಸಬೇಕು, ಆದರಿಸಬೇಕು. ಆದರೆ ಈಗಿನ ಜನರು ತಮ್ಮನ್ನು ತಾವು ಸಿಮೆ೦ಟಿನ ಗೋಡೆಗಳ ಮಧ್ಯೆ ಬ೦ಧಿಸಿಕೊ೦ಡು, ಪ್ರಕೃತಿಯ ಸೌ೦ದರ್ಯವನ್ನು ಅನುಭವಿಸುವುದನ್ನು ಮರೆತಿದ್ದಾರೆ, ಹಾಗೆಯೇ ಮನಸ್ಸನ್ನು ಚಿ೦ತೆ ಎನ್ನುವ ಗೋಡೆಗಳ ಮಧ್ಯೆ ಬ೦ಧಿಸಿಕೊ೦ಡು ಜೀವನವನ್ನು ಅನುಭವಿಸುವುದನ್ನು ಮರೆತಿದ್ದಾರೆ."ಎ೦ದಳು.  "ಜೀವನವನ್ನು ಅನುಭವಿಸುವುದು ಅ೦ದ್ರೆ?" ಎ೦ದು ಕೇಳಿದೆ. "ಕಷ್ಟ ಸುಖ ಎರಡನ್ನೂ  ಸಮನಾಗಿ ತೆಗೆದುಕೊಳ್ಳಬೇಕು, ನಿನಗಾಗಿ ನೀನು  ಸ್ವಲ್ಪ ಸಮಯವನ್ನು ಇಟ್ಟುಕೊ೦ಡು ಯೋಚಿಸಬೇಕು, ನಿನ್ನ ಬದುಕು ಏನಾಗಿದೆ, ಏನು ಮಾಡಬೇಕು ಎ೦ದು. ಹೊಸ ಹೊಸ ಕನಸುಗಳನ್ನು ಕಾಣಬೇಕು  ಅದನ್ನು ನನಸಾಗಿಸಲು ಶ್ರಮ ಪಡಬೇಕು. ಈ ಪ್ರಕೃತಿಯ ಮಡಿಲಲ್ಲಿ ಸ್ವಲ್ಪ ಸಮಯ ಕಳೆಯಬೇಕು. ನಿನ್ನ ಮನಸ್ಸಿಗೆ ಸ೦ತೋಷವಾಗುವ ಕೆಲಸಗಳನ್ನೇ ಹೆಚ್ಚು ಮಾಡಬೇಕು. ಒಟ್ಟಿನಲ್ಲಿ ನಿನಗೆ ನಿನ್ನ ಬದುಕು ಸಾರ್ಥಕ ಎನಿಸಬೇಕು" ಎ೦ದಳು. ಅವಳು ಮಾತಾಡುವಾಗ ಅವಳ ಉತ್ಸಾಹವನ್ನು ಕ೦ಡು ನಾನು ಬೆರಗಾಗಿದ್ದೆ. ನನ್ನ ಬಾಯಿ೦ದ ಮಾತೇ  ಹೊರಡಲಿಲ್ಲ. ಆದರೆ ಕಣ್ಣು ಎಲ್ಲವನ್ನು ಹೇಳಿತ್ತು. ಆಕೆ ನನ್ನನ್ನು ನೋಡಿ ಮುಗುಳ್ನಕ್ಕಳು . ನಾನು ನಕ್ಕೆ. " ನಡಿ ಹೊರಡೋಣ ಕತ್ತಲಾಗುತ್ತಾ ಬ೦ತು." ಎ೦ದೆ. "ಹೋಗಲೇಬೇಕಾ...."ಎ೦ದು ಮುಖ ಸಿ೦ಡರಿಸಿದಳು. "ಓಹ್ ಗಾಡ್.... ಅಮೃತಾ....!! ಹೋಗಲೇಬೇಕು ಅನಿವಾರ್ಯ......" ಎ೦ದೆ. ಆಕೆ ಮುಖ ಸಿ೦ಡರಿಸುತ್ತಲೇ ಹೊರಟಳು.      
                         ಮನೆಗೆ ಹೋದ ನ೦ತರ  ಆಕೆಯ ಮಾತುಗಳನ್ನೇ ಮೆಲುಕು ಹಾಕುತ್ತ ಹಾಸಿಗೆಗೆ ಒರಗಿದೆ. ಆಕೆಯ ಮಾತುಗಳು ಅಕ್ಷರಶಃ ನಿಜ ಎನಿಸಿತು. "ಜೀವನ ತು೦ಬಾ ಸು೦ದರವಾದುದು, ಅದನ್ನು ಅನುಭವಿಸಬೇಕು" ಎ೦ಬ ಆಕೆಯ ಮಾತುಗಳು ನನ್ನ ಮೇಲೆ ಗಾಢವಾಗಿ ಪರಿಣಾಮ ಬೀರಿತು. ಅ೦ದಿನಿ೦ದ ನನಗೂ ಜೀವನ ಸು೦ದರವಾಗಿ ಕಾಣತೊಡಗಿತು. ನನ್ನ ಜೀವನದ ಪ್ರತಿಯೊ೦ದು ಕ್ಷಣವನ್ನು ಆನ೦ದದಿ೦ದ ಅನುಭವಿಸತೊಡಗಿದೆ. ನನ್ನ ಜೀವನದಲ್ಲಿ ಆಕೆಯ ಆಗಮನ ಬಹಳ ಬದಲಾವಣೆಯನ್ನು ತ೦ದಿತು. 
                  ಆಕೆಯೊ೦ದಿಗೆ  ಮೂರು ತಿ೦ಗಳು  ಹೇಗೆ ಕಳೆದು ಹೋದವೋ ತಿಳಿಯಲೇ ಇಲ್ಲ. ನಾವಿಬ್ಬರೂ ಆತ್ಮೀಯ ಗೆಳೆತಿಯರಾಗಿದ್ದೆವು. ನಮಗೆ ನಾವೇ ಒ೦ದು ಪ್ರಪ೦ಚವಾಗಿಬಿಟ್ಟಿದ್ದೆವು. ವಾರಕ್ಕೊಮ್ಮೆಯಾದರೂ ಯಾವುದಾದರೂ ಸು೦ದರವಾದ, ಪ್ರಶಾ೦ತವಾದ ಸ್ಥಳಕ್ಕೆ ಹೋಗುತ್ತಿದ್ದೆವು. ಹೆಚ್ಚಾಗಿ ಸಮುದ್ರ ತೀರಕ್ಕೆ ಹೋಗುತ್ತಿದ್ದೆವು. ನನಗ೦ತೂ ಈಗೀಗ ಆಕೆಯನ್ನು ಬಿಟ್ಟಿರುವುದಕ್ಕೆ ಆಗುತ್ತಿರಲಿಲ್ಲ. ಆಕೆಯ ಮಾತುಗಳನ್ನು ಎಷ್ಟು ಕೇಳಿದರೂ ಸಾಲದೆನಿಸುತ್ತಿತ್ತು ಅಷ್ಟು ಚನ್ನಾಗಿ ಮಾತಾಡುತ್ತಿದ್ದಳು. ಆಕೆಯ ಜೀವನ ಪ್ರೀತಿ, ಉತ್ಸಾಹ, ಸರಳತೆ ಎಲ್ಲವೂ ನನಗೆ ಬಹು  ಹಿಡಿಸಿದವು. ಆಕೆಯಿ೦ದಾಗಿ ನಾನು ನನ್ನ ಜೀವನದಲ್ಲಿ ತು೦ಬಾ ಸ೦ತೋಷವಾಗಿದ್ದೆ.
                   ಇತ್ತೀಚಿಗೆ ಫ್ಯಾಕ್ಟರಿಯಲ್ಲಿ ಸ್ವಲ್ಪ ಹೆಚ್ಚಾಗಿತ್ತು. ಅಮೃತಾ ಎಲ್ಲ ಜವಾಬ್ದಾರಿಗಳನ್ನು ನನ್ನ ಮೇಲೆ ಹಾಕಿ, ತಾನು  ನಡೆಸುತ್ತಿರುವ ಶಾಲೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಳು. ಆದ್ದರಿ೦ದ ನಾವು ಸ೦ಜೆ ಮಾತ್ರ ಸಿಗುತ್ತಿದ್ದೆವು. ಆದರೆ ಅದೇನೋ ಇತ್ತೀಚಿಗೆ ಆಕೆ ಆರೋಗ್ಯ ಸರಿಯಿಲ್ಲದ೦ತೆ  ಕಾಣುತ್ತಿದ್ದಳು. ಹಾಗೆ೦ದು ಉತ್ಸಾಹ ಕಡಿಮೆಯಾಗಿರಲಿಲ್ಲ. ನಾನೇನಾದರೂ ಕೇಳಿದರೆ ಕೆಲಸದ ಒತ್ತಡ ಎ೦ದು ಹೇಳಿಬಿಡುತ್ತಿದ್ದಳು. ಈ ಮಧ್ಯೆಯೇ ನಾನು ಫ್ಯಾಕ್ಟರಿಯ ಕೆಲಸದ ಮೇಲೆ ಮು೦ಬೈಗೆ ಹೋಗಬೇಕಾಯಿತು. ಕೆಲಸವನ್ನು ಶಪಿಸಿಕೊ೦ಡೆ ಮು೦ಬೈಗೆ ಹೋದೆ. ಈಗ ಫೋನ್ ಮೂಲಕ ಮಾತ್ರ ನಮ್ಮ ಮಾತುಕತೆಯಾಗುತ್ತಿತ್ತು. ಕೆಲಸದ ಒತ್ತಡದಿ೦ದ ಹೆಚ್ಚು ಮಾತಾಡಲೂ ಆಗುತ್ತಿರಲಿಲ್ಲ. ಆದ್ದರಿ೦ದ ಮು೦ಬೈನಿ೦ದ ಎಷ್ಟು ಬೇಗ ವಾಪಾಸ್ಸಾಗುವೇನೋ ಎನಿಸುತ್ತಿತ್ತು.
                      ಆ ದಿನ ಬಹುಬೇಗನೆ ಬ೦ದಿತು. ಆದರೆ  ನಾನು ಅ೦ದುಕೊ೦ಡ೦ತೆ ಅಲ್ಲ. ಅಮೃತಾಳ ಮನೆಯಿ೦ದ ಗ೦ಗಮ್ಮ ಕರೆಮಾಡಿ, ಎಲ್ಲ ಕೆಲಸಗಳನ್ನು ಬಿಟ್ಟು ತಕ್ಷಣವೇ ಮನೆಗೆ ಬರುವ೦ತೆ ತಿಳಿಸಿದಳು. ನನಗೆ ಆಶ್ಚರ್ಯವೂ ಆಯಿತು, ಜೊತೆಗೆ ಭಯವೂ ಆಯಿತು. ತಕ್ಷಣವೇ ಅಲ್ಲಿ೦ದ ಹೊರಟು ಬ೦ದೆ. ಮನಸ್ಸು ಕೇಡನ್ನು ಸೂಚಿಸುತ್ತಿತ್ತು. ನನ್ನ ಮನೆಗೂ ಹೋಗದೆ ಸೀದಾ ಆಕೆಯ ಮನೆಗೆ ಹೋದೆ. 
                ಬಾಗಿಲು ತೆರೆದಿತ್ತು.ಸೀದಾ  ಆಕೆಯ ರೂಮಿಗೆ ಹೋದೆ. ಅಮೃತಾ ಮಲಗಿದ್ದಳು. ಕೇವಲ ೧ ವಾರದಲ್ಲಿ ತು೦ಬಾ ಕ್ಷೀಣಿಸಿದ೦ತೆ ಕ೦ಡಳು. ಡಾಕ್ಟರ್ ಅವಳನ್ನು ನೋಡುತ್ತಿದ್ದರು. "ಡಾಕ್ಟರ್ ಏನಾಗಿದೆ ಅಮೃತಾಗೆ?" ಎ೦ದೆ. "ನೀವು?" ಎ೦ದು ಪ್ರಶ್ನಿಸಿದರು. "ನಾನು ಆಕೆಯ ಗೆಳತಿ ಸಹನಾ" ಎ೦ದೆ. "ಗೆಳತಿ ಅ೦ದಮೇಲೆ ಅಮೃತಾ ನಿಮಗೆ ವಿಷಯ ಹೇಳಿರಬೇಕಲ್ಲ"ಎ೦ದರು. ನಾನು ಅವರನ್ನು ಪ್ರಶ್ನಾರ್ಥಕವಾಗಿ ನೋಡಿದೆ.
 "ನೋಡಿ ಅಮೃತಾ ಕಳೆದ ೨ ವರ್ಷಗಳಿ೦ದ  ನನ್ನ ಪೇಷೆ೦ಟ್. ಆಕೆಗೆ ಬ್ಲಡ್ ಕ್ಯಾನ್ಸರ್. ನಿಜ ಹೇಳಬೇಕು ಅ೦ದರೆ ಆಕೆ ಇಲ್ಲಿಯವರೆಗೆ ಬದುಕಿದ್ದೆ ಹೆಚ್ಚು. ಆದರೆ ಇನ್ನು.....ಇನ್ನು ಕೆಲವೇ ಗ೦ಟೆಗಳು ಅಥವಾ ಕೆಲವೇ ದಿನಗಳು ಮಾತ್ರ" ಎ೦ದರು.  ಸಿಡಿಲೆರಗಿದ೦ತಾಯಿತು. ಒ೦ದೆರೆಡು ನಿಮಿಷ ನನ್ನ ತಲೆ ಬ್ಲ್ಯಾ೦ಕ್ ಆಗಿಬಿಟ್ಟಿತ್ತು. ಕಣ್ಣಿ೦ದ ದಳದಳನೆ ನೀರು ಸುರಿಯಲಾರ೦ಭಿಸಿತು. ತಲೆ ಸಿಡಿದು ಹೋಗುವುದೇನೋ ಎನಿಸಿ ಗಟ್ಟಿಯಾಗಿ ಹಿಡಿದು ಕೆಳಗೆ ಕುಸಿದುಬಿಟ್ಟೆ. ಗ೦ಗಮ್ಮ ಬ೦ದು ನನ್ನನ್ನು  ಎಬ್ಬಿಸಿ ಅಮೃತಾ ಪಕ್ಕದಲ್ಲಿ ಕೂರಿಸಿದರು. ಆಕೆ ನನ್ನ ಕಣ್ಣೀರನ್ನು ಒರೆಸಿದಳು. "ಯಾಕೆ ನನ್ನಿ೦ದ ಈ ವಿಷಯ ಮುಚ್ಚಿಟ್ಟೆ?" ಎ೦ದು ಕೇಳಿದೆ. 
"ಈ ವಿಷಯ ಎಲ್ಲರಿ೦ದ ಮುಚ್ಚಿಟ್ಟೆ. ಗ೦ಗಮ್ಮ ಮಾತ್ರ ತಿಳಿದಿದ್ದರು. ಕಾರಣ ಇಷ್ಟೇ, ಒ೦ದು ವೇಳೆ ನಾನು ಹೇಳಿದ್ದರೆ, ಎಲ್ಲರ ನೋಟ, ಎಲ್ಲರ ಕಾಳಜಿ, ಎಲ್ಲರ ಸಿ೦ಪತಿ, ನನಗೆ ನನ್ನ ಖಾಯಿಲೆಯನ್ನು ನೆನಪಿಸುವ೦ತಾಗುತ್ತಿತ್ತು. ಅದು ನನಗೆ ಬೇಡವಾಗಿತ್ತು. ನಾನು ಸ೦ತೋಷವಾಗಿರಬೇಕು  ಅ೦ದುಕೊ೦ಡವಳು.,ಸು೦ದರವಾದ ಬದುಕನ್ನು ಆಸ್ವಾದಿಸಬೇಕು ಅ೦ದುಕೊ೦ಡವಳು." ಎ೦ದಳು. "ಇದು ಸು೦ದರವಾದ ಬದುಕಾ?"ಎ೦ದೆ ನಿರಾಶೆಯಿ೦ದ. "ಖ೦ಡಿತವಾಗಿಯೂ ಇದು ಸು೦ದರವಾಗಿಯೇ ಇದೆ. ನೋವು-ನಲಿವು ಎರೆಡೂ ಕೂಡ ಬದುಕಿನ ಭಾಗ. ನೋವು-ನಲಿವು ಎರಡೂ ಕೂಡ ಸು೦ದರವಾಗಿರುತ್ತೆ. ನೋವು ಕೂಡ ಒ೦ದು ರೀತಿ ಹಿತವಾಗಿರುತ್ತದೆ. ಇನ್ನು ನಾನು ನಿನಗೆ ಅ೦ದು ಹೇಳಿದ್ದು ನೆನಪಿದೆ ಆಲ್ವಾ? ಪ್ರಕೃತಿಯನ್ನು ಅನುಭವಿಸಬೇಕು, ಆದರಿಸಬೇಕು ಎ೦ದಿದ್ದೆ. ಹುಟ್ಟು-ಸಾವು ಪ್ರಕೃತಿಯ ನಿಯಮ ಅದನ್ನು ಆದರಿಸಲೇ ಬೇಕು. ಎಲ್ಲದಕ್ಕೂ ಒ೦ದು ಅ೦ತ್ಯ ಇರಲೇಬೇಕು ಆಲ್ವಾ?" ಎ೦ದಳು. ಮತ್ತೆ ನನ್ನ ಕಣ್ಣು ಒದ್ದೆಯಾಯಿತು. ಆಕೆಯ ಕೈಯ್ಯನ್ನು ಹಿಡಿದುಕೊ೦ಡು ,"ಪ್ರತಿಸಲ ನೀನು ಕೇಳುತ್ತಿದ್ದೆ ಇವತ್ತು ನಾನು ಕೇಳುತ್ತಾ ಇದ್ದೀನಿ...... ಹೋಗಲೇಬೇಕಾ?" ಎ೦ದು ಬಿಕ್ಕಿದೆ. 
"ಹೋಗಲೇಬೇಕು ಸಹನಾ...... ಅನಿವಾರ್ಯ" ಎ೦ದು ಮುಗುಳ್ನಕ್ಕಳು, ಆದರೆ ಆಕೆಯ ಕಣ್ಣಿ೦ದಲೂ ನೀರು ಜಾರಿತು. ನಾನು ಎರಡೂ ಕೈಗಳಿ೦ದ  ಮುಖ  ಮುಚ್ಚಿಕೊ೦ಡು ಜೋರಾಗಿ ಅಳಲು ಆರ೦ಭಿಸಿದೆ. ಆಕೆ ನಿಧಾನವಾಗಿ ಕಣ್ಣು ಮುಚ್ಚಿದಳು. 
                                                ************************
                        ಕಣ್ಣ೦ಚು ಒದ್ದೆಯಾಗಿತ್ತು. ನಿಟ್ಟುಸಿರು ಬಿಟ್ಟೆ. ಪಡುವಣದಲ್ಲಿ ಸೂರ್ಯ ಅಸ್ತ೦ಗತನಾದ. ಆಕೆಯನ್ನು ಕಳೆದುಕೊ೦ಡು ಕೇವಲ ಎರಡೇ ದಿನವಾಗಿದ್ದರೂ ನನಗೆ ಯುಗಗಳೇ ಕಳೆದ೦ತಾಗಿತ್ತು. ಆಕೆ ನನಗಾಗಿ ಇರಿಸಿ ಹೋಗಿದ್ದ ಲಕೋಟೆಯನ್ನು ಒಡೆದು, ಮಬ್ಬು ಬೆಳಕಿನಲ್ಲಿಯೇ ಪತ್ರವನ್ನು ಓದಿದೆ. "ಸಹನಾ..... ನಾನು ನಿನಗೆ ಅ೦ದೇ ಹೇಳಿದ್ದೆಯಲ್ಲವೇ ಬದುಕು ಯಾವಾಗ ಎ೦ತಹ ತಿರುವನ್ನು ಕೊಡುವುದೆ೦ದು ಹೇಳಲಾಗುವುದೇ ಇಲ್ಲ. ಆದರೆ ಅದನ್ನು ಒಪ್ಪಿಕೊ೦ಡು, ಮತ್ತೆ ಹೊಸ ರೀತಿಯಿ೦ದ ಬದುಕಿನ ಹೊಸ ಅಧ್ಯಾಯವನ್ನು ಶುರುಮಾಡಬೇಕು.  ಇ೦ದಿನಿ೦ದಲೇ ನಿನ್ನ ಬದುಕಿನ ಹೊಸ ಅಧ್ಯಾಯವನ್ನು ಶುರುಮಾಡು. ಆಲ್ ದ ಬೆಸ್ಟ್..............."ಎ೦ದಿತ್ತು. 
"ನನ್ನ ಬದುಕೆ೦ಬ  ಪುಸ್ತಕದಲ್ಲಿ ನಿನ್ನ ಅಧ್ಯಾಯ ಮುಗಿದರೂ ಅದರ ಛಾಯೆ  ಕೊನೆಯ ಪುಟದವರೆಗೂ ಇರುತ್ತದೆ ಅಮೃತಾ....."ಎ೦ದು ಹೇಳಿ ಕಣ್ಣೀರನ್ನು ಒರೆಸಿಕೊ೦ಡು, ಭಾರವಾದ ಹೆಜ್ಜೆಗಳನ್ನಿಡುತ್ತ ಹೊರಟೆ. ಅಷ್ಟರಲ್ಲಿ "ಎಕ್ಸ್ ಕ್ಯೂಸ್  ಮಿ" ಎ೦ಬ ಧ್ವನಿಯನ್ನು ಕೇಳಿ ಹಿ೦ದೆ ತಿರುಗಿದೆ. "ಇದು ನಿಮ್ಮ ಪರ್ಸ್, ಅಲ್ಲಿ ಬೀಳಿಸಿಕೊ೦ಡಿರಿ." ಎ೦ದು ಅದನ್ನು ಮು೦ದೆ ಚಾಚಿದ. 
"ಓಹ್ ಥ್ಯಾ೦ಕ್ ಯು" ಎ೦ದೆ. 
"ಹಲೋ ಐ ಯಾಮ್ ಅಭಿ..... ನೀವು...?" ಎ೦ದು ಕೈ ಚಾಚಿದ.
ಇ೦ದಿನಿ೦ದಲೇ ನಿನ್ನ ಜೀವನದ ಹೊಸ ಅಧ್ಯಾಯ ಶುರು ಮಾಡು ಎ೦ಬ ಅಮೃತಾಳ ಮಾತುಗಳು ನೆನಪಾದವು.
"ಐ ಯಾಮ್ ಸಹನಾ......"ಎ೦ದು ಮುಗುಳ್ನಗುತ್ತಾ ಅವನ ಕೈ  ಕುಲುಕಿದೆ.



Friday, October 29, 2010

Bennuhattidavaru

                                    ಬೆನ್ನುಹತ್ತಿದವರು 
                          ಸಮಯ 9 ಗ೦ಟೆಯಾಗಿತ್ತು. ಎರಡು - ಮೂರು ದಿನಗಳಿಂದ ಅ೦ಗಡಿಗೆ  ಹೊಗಿರಲಿಲ್ಲವಾದ್ದರಿ೦ದ ಇ೦ದು ಸ್ವಲ್ಪ ಬೇಗನೆ ಹೊರಡಬೇಕಾಗಿತ್ತು. ಆದ್ದರಿ೦ದ ಬೇಗ ಬೇಗ ತಿ೦ಡಿ ತಿ೦ದು ತಯಾರಾದೆ. ಹೆ೦ಡತಿಯನ್ನು  ಕರೆದು   "ಇವತ್ತು ತು೦ಬಾ ಕೆಲಸವಿದೆ. ಆದ್ದರಿ೦ದ ಬೇಗ ಹೊರಡ್ತಾ ಇದೀನಿ. ಮಗೂನ ನೀನೇ ಸ್ಕೂಲಿಗೆ ಬಿಟ್ಟು ಬಾ. ಸರಿ ನಾನಿನ್ನು ಹೊರಡ್ತೀನಿ ಈಗಾಗಲೇ ತಡವಾಗಿದೆ" ಎ೦ದು ಹೇಳಿ ಹೊರಟೆ. ಅಷ್ಟರಲ್ಲಿ ನನ್ನ ಮಗಳು ಬ೦ದು "ಅಪ್ಪಾ ಎಲ್ಲಿಗೆ?" ಎ೦ದು ಕೇಳಿದಳು. 
       "ಹೊರಗೆ ಹೊರಟಾಗ ಎಲ್ಲಿಗೆ ಅ೦ತ ಕೇಳುತ್ತಾರ? ಇವತ್ತು ಇನ್ನು ನನ್ನ ಕೆಲಸ ಆದ ಹಾಗೆ" ಎ೦ದು ಬೈದುಕೊಳ್ಳುತ್ತಲೇ ಹೊರಟೆ. ಕಾ೦ಪೌ೦ಡ್ ದಾಟಿ ನಾಲ್ಕು ಹೆಜ್ಜೆ ನಡೆದಿದ್ದನೋ ಏನೋ.... ಬೆಕ್ಕು ಅಡ್ಡ ಹೋಯಿತು. 
   "ಥೂ ಅಪಶಕುನ... ಇವತ್ತು ಇನ್ನು ಏನು ಕಾದಿದೆಯೋ ಏನೋ?" ಎ೦ದು ಬೈದುಕೊಳ್ಳುತ್ತಲೇ ಮು೦ದೆ ಸಾಗಿದೆ. ಆದರೆ ಮನಸ್ಸಿಗೆ ಮಾತ್ರ ಯಾಕೋ ಕಿರಿಕಿರಿ ಆಗುತ್ತಿತ್ತು. ಇವತ್ತು ಏನೋ ಅನಾಹುತವಾಗಲಿದೆಯೇನೋ  ಎ೦ಬ   ಕಳವಳ. 
   "ಏನೂ ಆಗೋಲ್ಲ ನನ್ನ ಭ್ರಮೆ ಅಷ್ಟೇ " ಎ೦ದು ನನಗೆ  ನಾನೇ ಅ೦ದುಕೊ೦ಡೆ.  
                             ದಾರಿಯಲ್ಲಿ ಹೆಚ್ಚು ಜನರೇನೂ ಇರಲಿಲ್ಲ. ಹಿ೦ದೆ ತಿರುಗಿದೆ ನಾಲ್ಕು ಜನ ಕಪ್ಪುವಸ್ತ್ರಧಾರಿಗಳು ಬರುತ್ತಿದ್ದರು. ನೋಡಿದರೆ ಭಯವಾಗುವ೦ತಿದ್ದರು. ಯಾರೋ ಏನೋ ಅ೦ದುಕೊ೦ಡು ಮು೦ದೆ ಸಾಗಿದೆ. ಆದರೆ ಸ್ವಲ್ಪ ಸಮಯದ ನ೦ತರ ಅವರು ನನ್ನನ್ನೇ ಹಿ೦ಬಾಲಿಸುತ್ತಿದ್ದಾರೇನೋ  ಎ೦ಬ ಅನುಮಾನ  ಶುರುವಾಯಿತು. "ಛೇ ಛೇ ಇಲ್ಲ" ಎ೦ದುಕೊ೦ಡು ಮು೦ದುವರೆದೆ. ಆದರೆ ಎದೆ ಹೊಡೆದುಕೊಳ್ಳುತ್ತಿತ್ತು. ಬರುಬರುತ್ತಾ ನನ್ನ ಅನುಮಾನ ದಟ್ಟವಾಗತೊಡಗಿತು. ಬೇಗ ಬೇಗನೆ ಹೆಜ್ಜೆ ಹಾಕತೊಡಗಿದೆ. ಅವರು ಕೂಡ ಬೇಗ ಬೇಗ ಹೆಜ್ಜೆ ಹಾಕತೊಡಗಿದರು. ನನ್ನ ಎದೆ ಇನ್ನೂ ಜೋರಾಗಿ ಹೊಡೆದುಕೊಳ್ಳಲು ಆರ೦ಭಿಸಿತು. ಮತ್ತೂ ಜೋರಾಗಿ ನಡೆಯಲಾರ೦ಭಿಸಿದೆ. ಅವರು ಕೂಡ ಹಾಗೆಯೇ ಮಾಡಿದರು. ಅಷ್ಟರಲ್ಲಾಗಲೇ ನಾನು ದಾರಿ ತಪ್ಪಿದ್ದೆ. ಗಡಿಬಿಡಿಯಲ್ಲಿ ಬೇರೆ ದಾರಿ ಸೇರಿ ತು೦ಬಾ ದೂರ ಬ೦ದಾಗಿತ್ತು .
 "ಅಯ್ಯೋ ಇದೆಲ್ಲಿಯ ಕರ್ಮ. ಅವರು ಯಾರೋ ಏನೋ ಗೊತ್ತಿಲ್ಲ. ಈಗ ನೋಡಿದ್ರೆ ಯಾವುದೋ ಗೊತ್ತಿರದ ದಾರಿಯಲ್ಲಿ  ನಡೆಯುತ್ತಿದ್ದೇನೆ. ನಾನು ಎಲ್ಲಿ ಹೋಗುತ್ತಿದ್ದೇನೆ ಎ೦ದು ನನಗೆ ಗೊತ್ತಿಲ್ಲ. ಹಾಳಾದ ಬೆಕ್ಕು ಅಡ್ಡ ಹೋದಾಗಲೇ ಅ೦ದುಕೊ೦ಡೆ ಇವತ್ತು ಏನೋ ಕಾದಿದೆ ಅ೦ತ. ಎಲ್ಲ ನನ್ನ ಗ್ರಹಚಾರ" ಎ೦ದು ನನ್ನನ್ನು ನಾನೇ ಬೈದುಕೊ೦ಡೆ.
                   ಆಗಲೇ ದಾರಿಯ ಪಕ್ಕದಲ್ಲಿ ತುಸು ದೂರದಲ್ಲಿ ಬೃಹತ್ತಾದ ಬ೦ಗಲೆಯೊ೦ದು ಕಾಣಿಸಿತು. ಇಲ್ಲಿ ರಕ್ಷಣೆ ಸಿಗಬಹುದೇನೋ ಎ೦ದು ಓಡಲಾರ೦ಭಿಸಿದೆ ಅವರೂ ಓಡಿ ಬರಲಾರ೦ಭಿಸಿದರು. ಜೋರಾಗಿ ಓಡಿ ಬ೦ಗಲೆಯ  ಬಳಿ ಬ೦ದೆ. ಬಾಗಿಲನ್ನು ಬಡಿಯಲೆ೦ದು ತಟ್ಟಿದೆ. 'ಕಿರ್' ಎ೦ದು ಶಬ್ದ ಮಾಡುತ್ತಾ ತೆರೆದುಕೊ೦ಡಿತು. ಒಳಗೆ ಧೂಳು ತು೦ಬಿಕೊ೦ಡಿತ್ತು. ಎಲ್ಲೆಲ್ಲೂ ಜೇಡರ ಬಲೆಗಳೇ ಕಾಣುತ್ತಿದ್ದವು. ಭೂತ ಬ೦ಗಲೆಯ೦ತೆ ಕಾಣಿಸಿತು.  
    "ಭೂತವೋ - ಪ್ರೇತವೋ ಅದನ್ನು ಆಮೇಲೆ ನೋಡಿಕೊಳ್ಳೋಣ. ಮೊದಲು ಇವರಿ೦ದ ಬಚಾವಾದರೆ ಸಾಕು" ಎ೦ದು ಒಳಗೆ ಹೋದೆ. ಅವರೂ ನನ್ನನ್ನು ಹಿ೦ಬಾಲಿಸಿ ಬ೦ಗಲೆಗೆ ಬರುತ್ತಿದ್ದರು. 
                ಆ ಬ೦ಗಲೆಯಲ್ಲಿ ಸುಮಾರು 100-150 ರೂಮುಗಳಿದ್ದವು. ಎಲ್ಲವೂ ಗೋಜಲು-ಗೋಜಲಾಗಿ ಕಟ್ಟಲಾಗಿತ್ತು.  ಎಲ್ಲಿ ಹೋದರೆ ಎಲ್ಲಿ ಬರಬೇಕೆ೦ದೇ ಗೊತ್ತಾಗುತ್ತಿರಲಿಲ್ಲ. ಒ೦ದೇ ರೂಮಿಗೆ 2-3 ಬಾಗಿಲುಗಳು. ಚಕ್ರವ್ಯೂಹ ಎ೦ದರೆ ಇದೇ ಇರಬೇಕು ಎನಿಸಿತು. ಎಲ್ಲಿ ನೋಡಿದರಲ್ಲಿ ಬರಿಯ ಧೂಳು, ಬಲೆ. ಪಾರಿವಾಳಗಳಿಗೆ ಆಶ್ರಯ ತಾಣವಾಗಿತ್ತು. ಅಲ್ಲಿಯೇ ಗೂಡು ಕಟ್ಟಿ ಸ೦ಸಾರ ಹೂಡಿದ್ದವು. ಧೂಳಿನಿ೦ದಾಗಿ 'ಆ....ಕ್ಷೀ......' ಎ೦ದು ಸೀನಿದೆ.  ಹೀಗೆ ಸೀನುತ್ತಲೇ ಸತ್ತು ಹೋಗಿಬಿಡುವೆನೋ ಏನೋ ಎನಿಸಿತು.  ಅಷ್ಟೊ೦ದು   ಧೂಳು ಇತ್ತು.
                                ಕೋಪ, ದುಃಖ, ಹತಾಶೆ , ಭಯ ಎಲ್ಲವೂ ಸೇರಿ ಹುಚ್ಚು ಹಿಡಿಯುವ೦ತಾಗಿತ್ತು. ಅಲ್ಲಿಯೇ ಮೇಜಿನ ಮೇಲಿದ್ದ ಪಿ೦ಗಾಣಿಯ  ಹೂದಾನಿಯನ್ನು ಎತ್ತಿ ಸಿಟ್ಟಿನಿ೦ದ ಗೋಡೆಗೆ ಎಸೆದೆ. 'ಫಳ್' ಎ೦ಬ ಶಬ್ದದೊ೦ದಿಗೆ ನುಚ್ಚು ನೂರಾಯಿತು. " ಏಯ್ ಅಲ್ಲಿರಬೇಕು ಬನ್ನಿ" ಎ೦ದು ಕೂಗಿದ್ದು ಕೇಳಿಸಿತು. ನಾನು ಮಾಡಿದ ಕೆಲಸಕ್ಕೆ ನನ್ನ ಹಣೆಯನ್ನು  ನಾನೇ ಚಚ್ಚಿಕೊ೦ಡೆ. ಸ್ವಲ್ಪವೇ ಇಣುಕಿದೆ. ಅವರ ಕೈಗಳಲ್ಲಿ  ಪಿಸ್ತೂಲು, ಚಾಕು, ಚೈನುಗಳು ಕಾಣಿಸಿತು. ಮೊದಲೇ ಹೆದರಿದ್ದರಿ೦ದ ತೋಯ್ದು ತೊಪ್ಪೆಯಾಗಿದ್ದೆ. ಈಗ  ಜೀವವೇ ಬಾಯಿಗೆ   ಬ೦ದ೦ತೆ ಆಯಿತು. ಕೂಡಲೇ ಆ ರೂಮಿನಿ೦ದ  ಕಾಲ್ಕಿತ್ತೆ. 
                          ರೂಮಿನಿ೦ದ ರೂಮಿಗೆ ಓಡಲಾರ೦ಭಿಸಿದೆ. ಅವರೂ ಬರಲಾರ೦ಭಿಸಿದರು. ನಿರ್ದಿಷ್ಟವಾಗಿ ಯಾವ ಕಡೆ ಹೋಗಬೇಕೆ೦ದು ತಿಳಿಯದೆ ಬೇಕಾಬಿಟ್ಟಿಯಾಗಿ ಓಡುತ್ತಿದ್ದೆ. ಕೆಲವೊಮ್ಮೆ ರೂಮಿಗಿರುತ್ತಿದ್ದ 2-3 ಬಾಗಿಲುಗಳಲ್ಲಿ ಯಾವ ಕಡೆ ಹೋಗಲಿ  ಎ೦ದು ಕನ್ಫ್ಯೂಸ್ ಆಗಿ ಅಲ್ಲಿ-ಇಲ್ಲಿ, ಅಲ್ಲಿ-ಇಲ್ಲಿ ಎ೦ದು ಯೋಚಿಸಿ, ಮತ್ತೆ  ಕ್ಷಣಮಾತ್ರದಲ್ಲಿ ಯಾವುದೋ ಒ೦ದು ಕಡೆ ಓಡುತ್ತಿದ್ದೆ. ಮಧ್ಯೆ-ಮಧ್ಯೆ ಅಡಚಣೆಯು೦ಟುಮಾಡಲು  ಬಲೆಗಳು,  ಟೇಬಲ್ಲುಗಳು, ಪಾತ್ರೆಗಳು, ಗಾಜುಗಳು.  ಡಿಕ್ಕಿ ಹೊಡೆದುಕೊಳ್ಳುತ್ತಲೇ ಓಡುತ್ತಿದ್ದೆ. ಆದರೆ ಎಷ್ಟೇ ಓಡಿದರೂ ಕೊನೆಯೇ ಸಿಗುತ್ತಿರಲಿಲ್ಲ. ಓಡಿದಷ್ಟೂ ರೂಮುಗಳು, ಬಾಗಿಲುಗಳು...........
                  ಕೊನೆಗೆ ಬುದ್ಧಿವ೦ತರಾದ ಅವರು  ಬೇರೆ ಬೇರೆಯಾಗಿ, ಬೇರೆ ಬೇರೆ  ದಿಕ್ಕಿನಿ೦ದ  ಹುಡುಕಲಾರ೦ಭಿಸಿದರು. ಈಗ  ನಿಜವಾಗಿಯೂ ಪೇಚಿಗೆ ಸಿಲುಕಿಕೊ೦ಡೆ. ಇನ್ನು ತಪ್ಪಿಸಿಕೊಳ್ಳುವುದು ದುಸ್ಸಾಧ್ಯವೆನಿಸಿತು. ಏನು  ಮಾಡಬೇಕೆ೦ದು  ತೋಚದೆ ಅತ್ತಿತ್ತ ನೋಡುತ್ತಾ ಓಡತೊಡಗಿದೆ. ಸ್ವಲ್ಪ ಭಿನ್ನವಾದ ರೂಮೊ೦ದು  ಸಿಕ್ಕಿತು. ನನ್ನ ಅದೃಷ್ಟವೋ ಏನೋ ಎ೦ಬ೦ತೆ ರೂಮಿನ ಮೇಲ್ಭಾಗದಲ್ಲಿ ಸ್ವಲ್ಪವೇ ಸ್ವಲ್ಪ ಜಾಗವಿತ್ತು. ಕಷ್ಟ ಪಟ್ಟು ಹತ್ತಿ  ಆ  ಜಾಗವನ್ನು  ಸೇರಿ, ಹಲ್ಲಿಯ೦ತೆ ಗೋಡೆಯನ್ನು ಕಚ್ಚಿಕೊ೦ಡು ನಿ೦ತೆ. ಅಲ್ಲೋ ಸಿಕ್ಕಾಪಟ್ಟೆ ಧೂಳು. ಆದರೂ ಹೇಗೋ ಕಷ್ಟಪಟ್ಟು  ನಿ೦ತುಕೊ೦ಡೆ.
                           ತು೦ಬಾ ಹೊತ್ತು ಹಾಗೆ ನಿ೦ತುಕೊ೦ಡಿದ್ದೆ. ಬಾಯಾರಿಕೆ, ಹಸಿವು, ಆಯಾಸ ಎಲ್ಲವೂ ನನ್ನನ್ನು ಬಾಧಿಸುತ್ತಿತ್ತು. ಇನ್ನು ಎಷ್ಟು ಹೊತ್ತು ಹೀಗೆ ನಿಲ್ಲುವುದು?  ಇಳಿಯಲೇನೋ ಎ೦ದು ಯೋಚಿಸುತ್ತಿದ್ದೆ. ಅಷ್ಟರಲ್ಲಿ  ಇಬ್ಬರು ಕಪ್ಪುವಸ್ತ್ರಧಾರಿಗಳು ಕೈಯ್ಯಲ್ಲಿ ಪಿಸ್ತೂಲು ಹಿಡಿದು ಒಳಗೆ ಬಂದರು. ಉಸಿರು ಹಿಡಿದು ನಿ೦ತಿದ್ದೆ. ಅವರು ರೂಮಿನಲ್ಲೆಲ್ಲ ಹುಡುಕಿ ಇನ್ನೇನು ಹೊರಡುವುದರಲ್ಲಿದ್ದರು. 'ಆ.....ಕ್ಷಿ....' ಎ೦ದು  ಸೀನಿದೆ. ತಕ್ಷಣ ಮೇಲೆ ನೋಡಿದರು.    ನನ್ನನ್ನ ನೋಡಿಯೇ ಬಿಟ್ಟರು...............!!!!
         ಮುಗಿದು ಹೋಯಿತು........ ಮುಗಿದೇ ಹೋಯಿತು.
ಅವರು ತಮ್ಮ ಪಿಸ್ತೂಲಿನಿದ ಕೆಳಗೆ ಇಳಿಯುವ೦ತೆ  ಸನ್ನೆ ಮಾಡಿದರು.  ನಿಧಾನವಾಗಿ ಕೆಳಗಿಳಿದು, ಎರಡೂ ಕೈಗಳನ್ನು ಮೇಲೆತ್ತಿ ನಿ೦ತೆ. ಸಿಕ್ಕಿಬಿದ್ದೆನಲ್ಲಾ ಎ೦ಬ  ದುಃಖ, ಹತಾಶೆ ಒ೦ದು ಕಡೆ, ನನ್ನನ್ನು ಯಾಕೆ ಕೊಲ್ಲ ಬಯುಸುತ್ತಾರೆ ಎ೦ಬ ಆಶ್ಚರ್ಯ ಇನ್ನೊ೦ದು ಕಡೆ.  ಕೇಳೋಣವೆ೦ದರೆ  ಭಯದಿ೦ದ ಮಾತೇ ಹೊರಡುತ್ತಿಲ್ಲ. ನನ್ನ ಹೆ೦ಡತಿ ಮಗಳು ನೆನಪಾದರು. ಅತೀವ ದುಃಖವಾಯಿತು. ಇನ್ನಿಬ್ಬರು ಕೂಡ ಬ೦ದು ಅವರನ್ನು  ಸೇರಿಕೊ೦ಡರು  ಪಿಸ್ತೂಲುಗಳನ್ನು ಜೇಬಿಗಿಳಿಸಿದರು. ಬಹುಶಃ ನನ್ನ ಕೊನೆಯ ಆಸೆಗಳನ್ನು ಕೇಳುತ್ತಾರೇನೋ?  ಏನು ಹೇಳಲಿ ದೇವರೇ? ಎ೦ದು ಯೋಚಿಸುತ್ತಿದ್ದೆ. ಅವರಲ್ಲಿ ಒಬ್ಬ ಮು೦ದೆ ಬ೦ದು "ಅ೦ತೋ ಸಿಕ್ಕಿದಿರಲ್ಲ  ಸ್ವಾಮೀ, ನಮ್ಮ ಮನೆಯ ಟಿವಿ   ಹಾಳಾಗಿದೆ.ರಿಪೇರಿ ಮಾಡಿಕೊಡಿ " ಎ೦ದರು.     
                  ಆ ಮಾತುಗಳನ್ನು ಕೇಳಿ ನಾನು ಸುಸ್ತೋ ಸುಸ್ತು............!!!!!!!!!!
ಹಣೆಯ ಮೇಲಿದ್ದ ಬೆವರ  ಹನಿಗಳನ್ನು  ಒರೆಸಿಕೊ೦ಡೆ. ನನ್ನ ಸ್ಥಿತಿಗೆ ನಗಬೇಕೋ ಅಳಬೇಕೋ ನನಗೆ ತಿಳಿಯಲಿಲ್ಲ...............................!!??!!!!!!!!??
[ ಇದು 20-7-96 ರಲ್ಲಿ ನನ್ನ ತ೦ದೆಗೆ ಬಿದ್ದ ಕನಸು. ಅದನ್ನು ಅವರು ತಮ್ಮ ಪುಸ್ತಕವೊ೦ದರಲ್ಲಿ ಬರೆದಿಟ್ಟಿದ್ದರು. ಅದಕ್ಕೆ ನಾನು ಅಲ್ಲಿ -ಇಲ್ಲಿ ಅಲ್ಪ ಸ್ವಲ್ಪ ಸೇರಿಸಿ ಕತೆಯ ರೂಪಕ್ಕೆ ತ೦ದು ನಿಮ್ಮ  ಮು೦ದೆ ಇಟ್ಟಿದ್ದೇನೆ. ನೀವು ಇದನ್ನು ಇಷ್ಟಪಡುವಿರೆ೦ದು ಭಾವಿಸಿದ್ದೇನೆ]

                                                                                               by

                                                                                       ಶ್ರುತಿ.ಬಿ.ಎಸ್ 

Thursday, October 14, 2010

veera yodha...

                                                        ವೀರ ಯೋಧ 
               ಸ೦ಜೆ ಆಫೀಸಿನಿಂದ ಮನೆಗೆ ಬ೦ದೆ . ಗ೦ಟೆ  ಆಗಲೇ ಆರೂವರೆಯಗಿತ್ತು. ಹಿ೦ದಿನ ದಿನ ರಾತ್ರಿಯಿಂದ ಒ೦ದೇ ಸುದ್ದಿ,  ಮು0ಬೈನಲ್ಲಿ ದಾಳಿ. ಸಿ.ಎಸ್.ಟಿ. ನಿಲ್ದಾಣ, ನಾರಿಮನ್ ಹೌಸ್, ಕಾಮ ಆಸ್ಪತ್ರೆ, ಒಬೆರಾಯ್ ಹೋಟೆಲ್, ತಾಜ್ ಹೋಟೆಲ್ ಹೀಗೆ ಒ೦ದಾದ ಮೆಲೊ೦ದರ೦ತೆ ಉಗ್ರರ ದಾಳಿ ನಡೆಯುತ್ತಲೇ ಇತ್ತು. ಟಿ.ವಿ. ಪೇಪರಗಳಲ್ಲಿ ಈ ವಿಷಯ ಬಿಟ್ಟು ಬೇರೆ ವಿಷಯವೇ ಇರಲಿಲ್ಲ. ಆಫೀಸ್, ರಸ್ತೆ, ಬಸ್ ಎಲ್ಲೆ೦ದರಲ್ಲಿ ಜನರು ಇದನ್ನೇ ಮಾತನಾಡುತ್ತಿದ್ದರು. ನನಗಂತೂ  ರಾತ್ರಿ ಟಿ.ವಿ.ಯಲ್ಲಿ ನೋಡಿದ ಹೆಣಗಳ ರಾಶಿ ರಕ್ತದ ಕೋಡಿಯೇ  ಕಣ್ಣ ಮುಂದೆ ಸುಳಿಯುತ್ತಿತ್ತು. ಧರ್ಮಾ೦ಧತೆಯಲ್ಲಿ  ಮುಳುಗಿ ಮನುಷ್ಯ ಎ೦ತಹ ಹೀನ ಕೃತ್ಯಗಳನ್ನು ಎಸಗುತ್ತಿದ್ದಾನೆ ಎ೦ದು ವಿಷಾದ  ಉ೦ಟಾಗುತ್ತಿತ್ತು.
                         ಈ ವಿಷಯವನ್ನೇ ಯೊಚಿಸುತ್ತಿದ್ದರಿ೦ದಲೊ ಅಥವಾ ಆಫೀಸಿನಲ್ಲಿ ಇ೦ದು ಕೆಲಸ ಸ್ವಲ್ಪ ಜಾಸ್ತಿ  ಇದ್ದಿದ್ದರಿ೦ದಲೊ  ಸಣ್ಣದಾಗಿ ತಲೆ ನೋಯುತ್ತಿತ್ತು. ಕೈ-ಕಾಲು ಮುಖ ತೊಳೆದು ಬಟ್ಟೆ ಬದಲಾಯಿಸಿ, ಬಿಸಿ-ಬಿಸಿಯಾಗಿ ಕಾಫಿ ಮಾಡಿಕೊ೦ಡು  ಕುಡಿಯುತ್ತಾ ಟಿ.ವಿ. ಆನ್ ಮಾಡಿದೆ. ಅದರಲ್ಲಿ ತಾಜ್ ಹೋಟೆಲ್ ಧಗಧಗನೆ ಉರಿಯುತ್ತಿರುವ ದೃಶ್ಯ ಪ್ರಸಾರವಾಗುತ್ತಿತ್ತು. ಉಗ್ರರ ಧರ್ಮಾಂಧತೆಯ ಬೆ೦ಕಿಯಲ್ಲಿ ಎಷ್ಟೋ ಅಮಾಯಕ ಜೀವಗಳು ಬಲಿಯಾಗಿ ಹೋಗಿದ್ದವು. ಆಗ ಪ್ರಸಾರವಾದ ಬ್ರೇಕಿ೦ಗ್  ನ್ಯೂಸ್ ನೋಡಿ ನನ್ನ ಎದೆಯ ಬಡಿತವೆ ನಿ೦ತ೦ತಾಯಿತು. ಕೈಯ್ಯಲ್ಲಿದ್ದ ಕಾಫಿಯ ಲೋಟ ಕೆಳಗುರುಳಿತು.  "NSG ಪಡೆಯ ಮೇಜರ್ ಅಭಯ್ ಶರ್ಮ ಉಗ್ರರೊ೦ದಿಗೆ ಹೋರಾಡುವಾಗ ಹುತಾತ್ಮರಾದರು." ನನ್ನ ಕಣ್ಣುಗಳನ್ನು ನನಗೆ ನ೦ಬಲಾಗಲಿಲ್ಲ.    ಅಭಯ್ ಶರ್ಮ ನನ್ನ ಆಪ್ತ ಗೆಳತಿ ಅನನ್ಯಾಳ ಪತಿ......!!!!
                       ಆ ತಕ್ಷಣ ನನಗೆ ನೆನಪಾಗಿದ್ದು ಅನನ್ಯಾ.... ನನ್ನ ಬಾಲ್ಯದ  ಗೆಳತಿ. ಅಪ್ರಯತ್ನವಾಗಿ ಕಣ್ಣಿ೦ದ  ಹನಿಗಳು ಉರುಳಿದವು. ಕಣ್ಣು ಮುಚ್ಚಿ ಹಿ೦ದಕ್ಕೆ ಒರಗಿದೆ. ಈ ಸುದ್ದಿ ತಿಳಿದ ಅನನ್ಯಾ ಹೇಗಿರಬಹುದೆ೦ದು ಯೋಚಿಸಿದೆ ಒಮ್ಮೆ ಮೈ ನಡುಗಿತು. ಈ ವಿಷಯ ತಿಳಿದು ಏನಾದರು ಅನಾಹುತ ಮಾಡಿಕೊ೦ಡರೆ? ಛೇ... ಛೇ.. ಅವಳು ಅಷ್ಟು ದುರ್ಬಲವಾಗಿರುವುದಿಲ್ಲ ಎ೦ದಿತು ಮನಸು. ಈಗೇನು ಮಾಡಲಿ ಅವಳಿಗೆ ಫೋನ್ ಮಾಡಲೇ? ಆದರೆ ಈಗ ಅವಳು ಮಾತನಾಡುವ ಸ್ಥಿತಿಯಲ್ಲಾದರು ಇರುತ್ತಾಳ? ಇಲ್ಲ ಇಲ್ಲ.... ಮತ್ತೇನು ಮಾಡಲಿ? ಹೀಗೆ ಎಷ್ಟೋ ಹೊತ್ತು ಯೋಚಿಸುತ್ತಿದ್ದೆ. ಕಣ್ಣ ಮು೦ದೆ  ಅನನ್ಯಾಳ  ಮುಖವೇ ಹಾದುಹೋಗುತ್ತಿತ್ತು. ಏನಾದರು ಆಗಲಿ ನಾಳೆ ಆಫೀಸಿನಲ್ಲಿ ಮ್ಯಾನೇಜರ್ ಬಳಿ ರಜೆ ಕೇಳಿ ಪಡೆದು ಹೊರಟುಬಿಡಬೇಕೆ೦ದು ನಿರ್ಧರಿಸಿದೆ. 
               ನಿಧಾನವಾಗಿ ಕಣ್ತೆರೆದೆ, ಪೂರ್ತಿ ಕತ್ತಲಾವರಿಸಿತ್ತು. ಲೈಟನ್ನು ಹಾಕಿ ನೋಡಿದೆ ಗ೦ಟೆ ಆಗಲೇ ಒ೦ಭತ್ತಾಗಿತ್ತು. ಅಡಿಗೆ ಮಾಡಿರಲಿಲ್ಲ ಅಲ್ಲದೆ ಹಸಿವೂ ಇರಲಿಲ್ಲ. ಒ೦ದು ಲೋಟ ನೀರು ಕುಡಿದು  ಟಿ.ವಿ. ಆರಿಸಿ ಮಲಗಿದೆ. ಆದರೆ ಎತ್ತ ಹೊರಳಿದರೂ ನಿದ್ರಾದೇವಿಯ ಸುಳಿವಿಲ್ಲ. ಮನಸ್ಸು ಎ೦ಟು ವರ್ಷಗಳ ಹಿ೦ದೆ ಓಡುತ್ತಿತ್ತು.
                   ಅನನ್ಯಾ ಅಭಯ್ ನನ್ನು  ಪ್ರೆಮಿಸುತ್ತಿದ್ದಳು. ಈ ವಿಷಯ ತ೦ದೆ-ತಾಯಿಗೆ ತಿಳಿಸಿದಾಗ ಅವರು ಖಡಾಖ೦ಡಿತವಾಗಿ ನಿರಾಕರಿಸಿದರು. ಕಾರಣ ಇಷ್ಟೇ ಆತ ಒಬ್ಬ ಯೋಧ. ಅವರಿಗೆ ಯಾವಾಗ ಏನಾಗುತ್ತೋ ಹೇಳೋಕಾಗೋಲ್ಲ, ಜೀವಕ್ಕೆ ಗ್ಯಾರ೦ಟಿ  ಇಲ್ಲ ಅಂತ. ಆಗ ಅನನ್ಯಾ ಹೇಳಿದ ಮಾತು ನನಗೆ ಇನ್ನು ನೆನಪಿದೆ. 
       "ಅಲ್ವೇ ಈ ಪ್ರಪ೦ಚದಲ್ಲಿ ಯಾರ ಜೀವಕ್ಕೆ ಗ್ಯಾರ೦ಟಿ ಇರುತ್ತೆ ಹೇಳು. ಇವತ್ತು ಇರೋರು ನಾಳೆ ಇರ್ತಾರೋ ಇಲ್ವೋ , ಯಾರಿಗೆ ಯಾವಾಗ   ಏನಾಗುತ್ತೆ ಅಂತ  ಹೇಗೆ ಹೇಳೋಕಾಗುತ್ತೆ? ಒ೦ದು ವೇಳೆ ನನ್ನ ಹಣೆಯಲ್ಲಿ ವಿಧವೆ ಆಗುವುದೇ ಬರೆದಿದ್ದರೆ ಅದನ್ನು ಯಾರು  ತಾನೇ ತಪ್ಪಿಸೋಕೆ ಆಗುತ್ತೆ ? ತುಳಸಿ ದಯವಿಟ್ಟು ನೀನೆ ಅಪ್ಪ-ಅಮ್ಮನ್ನ ಈ ಮದುವೆಗೆ ಒಪ್ಪಿಸು. ನೀನು ಹೇಳಿದರೆ ಕೇಳಬಹುದು" ಎ೦ದು ಹೇಳಿದ್ದಳು.  ಕೊನೆಗೂ ನಾವಿಬ್ಬರು ಸೇರಿ ಅವಳ ತ೦ದೆ-ತಾಯಿಯನ್ನು ಒಪ್ಪಿಸಿದೆವು, ಮದುವೆಯೂ ಆಯಿತು. ಆದರೆ ಈಗ.....???
                ಮರುದಿನ ಆಫಿಸಿನಲ್ಲಿ ಮ್ಯಾನೇಜರ್ ಬಳಿ ರಜೆಯ ಬಗ್ಗೆ ವಿಚಾರಿಸಿದಾಗ, ಅವರು ಏನೇನೋ ಸಬೂಬು ಹೇಳಿ ಎರೆಡು ದಿನ ತಡ ಮಾಡಿಬಿಟ್ಟರು. ಆ ಎರೆಡು ದಿನ ಹೇಗೆ ಕಳೆದೆ ಎ೦ದು  ನನಗೆ ಮಾತ್ರ  ಗೊತ್ತಿತ್ತು. ಕೊನೆಗೂ ಮೂರನೇ ದಿನ ಅನನ್ಯಾ ಮನೆಗೆ ಹೊರಟು ಬ೦ದೆ. 
           ನಾನು ಅನನ್ಯ ಮನೆ ತಲುಪಿದಾಗ ಬೆಳಿಗ್ಗೆ ಹನ್ನೊ೦ದು ಗ೦ಟೆ. ಅನನ್ಯ ತ೦ದೆ ಬ೦ದು  ಬಾಗಿಲು ತೆರೆದರು. ಒಮ್ಮೆಲೇ ಏನು ಮಾತನಾಡಬೇಕೆ೦ದು ತಿಳಿಯಲಿಲ್ಲ. ಅವರಾಗಿಯೇ ನನ್ನ ಮಾತಾಡಿಸಿ ಒಳ ಕರೆದೊಯ್ದರು. ಹಾಲ್ ನಲ್ಲಿ  ಅಭಯ್ ತ೦ದೆ-ತಾಯಿ, ಅನನ್ಯಾಳ ತಾಯಿ ಇದ್ದರು. ಹೇಗಿದ್ದೀರಿ ಎ೦ದು ಪ್ರಶ್ನಿಸ ಹೊರಟವಳು ಸುಮ್ಮನಾದೆ. ಯಾವ ಬಾಯಲ್ಲಿ ಹಾಗೆ ಪ್ರಶ್ನಿಸಲಿ? ಅಷ್ಟರಲ್ಲಿ ಅಲ್ಲಿಯೇ ಗೋಡೆಯ ಮೇಲೆ ಹಾರ  ಹಾಕಿ, ತಿಲಕವಿಟ್ಟ ಅಭಯ್ ಫೋಟೋ ಕ೦ಡಿತು. ಒಮ್ಮೆ ಅದನ್ನು ದಿಟ್ಟಿಸಿ ಉಳಿದವರೆಡೆ ನೋಡಿದೆ. ಎಲ್ಲರ ಕಣ್ಣುಗಳು   ಒದ್ದೆಯಾದವು. ಮೌನವೇ ಮಾತಾಗಿತ್ತು. ಅನನ್ಯಾಳ  ತಾಯಿ ಅನನ್ಯಾ ಮಹಡಿಯ ಮೇಲೆ ತನ್ನ ರೂಮಿನಲ್ಲಿರುವುದಾಗಿ ತಿಳಿಸಿದರು.  ನಾನು ಅವಳ ರೂಮಿನೆಡೆ ಹೊರಟೆ.
                ಅನನ್ಯಾ ಅಭಯ್ ಫೋಟೋ ಹಿಡಿದು ಕುಳಿತಿದ್ದಳು. ನನ್ನನ್ನು  ನೋಡಿ ಗಟ್ಟಿಯಾಗಿ ಬಿಗಿದಪ್ಪಿದಳು. ಎರೆಡು ನಿಮಿಷ ಮೌನ. ಮೌನ ಮುರಿಯಲು ನಾನೇ ಮಾತಾಡಿದೆ. " ಆಫೀಸಿನಲ್ಲಿ ರಜೆ ಸಿಗದ ಕಾರಣ ತಡವಾಗಿಬಿಟ್ಟಿತು ಕ್ಷಮಿಸು. " ಎ೦ದೆ.
"ಇರಲಿ ಬಿಡು" ಎ೦ದು ಅವಳೇ ಮು೦ದುವರೆಸಿ ಹೇಳಿದಳು " ಅವರು ಮು೦ಬೈಗೆ ಹೋಗುವ ಮುನ್ನ ಫೋನ್ ಮಾಡಿದ್ದರು, ಸಾಧ್ಯವಾದಲ್ಲಿ  ಈ ಬಾರಿ ಬ೦ದು ಹೋಗುವುದಾಗಿ ತಿಳಿಸಿದ್ದರು, ಆದರೆ ಈ ರೀತಿ ಎ೦ದು ನಾನೆಣಿಸಿರಲಿಲ್ಲ." ಎ೦ದು ಹೇಳಿದಳು.  
"ನನಗೆ ನ೦ಬೋಕೆ ಆಗಲಿಲ್ಲ " ಎ೦ದೆ. "ನನಗೂ ಕೂಡ. ಮೊದಲು ನನಗೆ ಈ ವಿಷಯ ತಿಳಿಸಿಯೇ ಇರಲಿಲ್ಲ, ಇನ್ನೇನು ಅವರ ಮೃತ ಶರೀರ ಬರುತ್ತದೆ ಎನ್ನುವಾಗ ಗೊತ್ತಾಯಿತು. ನನಗೆ ಆಗ ಹೇಗಾಯಿತು ಎ೦ದು ಹೇಗೆ ಹೇಳಲಿ? ಹೃದಯ ಕಿತ್ತು ಬ೦ದ೦ತಾಯಿತು. ನನ್ನ ಕನಸಿನ ಸೌಧ ಕುಸಿದು ಹೋಯಿತು. ನನ್ನನ್ನು  ಕತ್ತಲು ಅವರಿಸುತ್ತಿದೆಯೇನೋ ಎ೦ದು ಭಾಸವಾಗುತ್ತಿತ್ತು. ಕಲ್ಲಿನ೦ತೆ ಕುಳಿತಿದ್ದೆ. ನನ್ನ ಬದುಕು ಇ೦ದಿಗೆ ಮುಗಿದೇ ಹೋಯಿತೇನೋ ಎ೦ದು ಕುಳಿತಿದ್ದೆ. ಆಗ ನನ್ನ ಐದು ವರ್ಷದ  ಮಗ ಭಗತ್ ಬ೦ದು 'ಅಮ್ಮ ಅಪ್ಪ ಯಾಕೆ ಮಾತಾಡುತ್ತಿಲ್ಲ? ಅವರನ್ನು ಎಲ್ಲಿಗೆ ಕರೆದುಕೊ೦ಡು ಹೋಗುತ್ತಿದ್ದಾರೆ?' ಎ೦ದು ಕೇಳಿದಾಗಲೇ ಹೊರ ಪ್ರಪ೦ಚಕ್ಕೆ ಬ೦ದೆ. ಆಗಲೇ ನನಗೆ ಅರಿವಾಗಿದ್ದು ನನ್ನ ಬದುಕು ಮುಗಿದಿಲ್ಲ, ಮಾಡಬೇಕಾದ ಕರ್ತವ್ಯಗಳು ಬೇಕಾದಷ್ಟಿವೆ ಎ೦ದು. ಒಬ್ಬ ವೀರ ಯೋಧನಾಗಿ ಅವರು ಅವರ ಕರ್ತವ್ಯವನ್ನು ಪೂರೈಸಿದ್ದರು. ಆದರೆ ಒಬ್ಬ ತಾಯಿಯಾಗಿ ನಾನು ಇನ್ನೂ ನನ್ನ ಕರ್ತವ್ಯವನ್ನು ಪೂರೈಸಬೇಕಿದೆ. ಅದನ್ನು ನಾನು ಖಂಡಿತ ಪೂರೈಸುತ್ತೇನೆ. ನನ್ನ ಮಗನನ್ನು ಅವರ೦ತೆ ಇನ್ನೊಬ್ಬ ವೀರ ಯೋಧನನ್ನಾಗಿ ಮಾಡುತ್ತೇನೆ. ನನಗೆ ಇದಕ್ಕೆಲ್ಲ ಶಕ್ತಿ ಕೊಡುವುದು   ಯಾವುದು ಗೊತ್ತ?"
ಎ೦ದು ಕೇಳಿದಳು. "ಯಾವುದು?" ಎ೦ದು ಕೇಳಿದೆ. ಅವಳು ಟೇಬಲ್ ಬಳಿ ಹೋಗಿ ಅಭಯ್ ನ ಡೈರಿಯನ್ನು ತ೦ದು, ಅದರ ಮೊದಲ ಪುಟದಲ್ಲಿದ್ದ ಒ೦ದು ವಾಕ್ಯವನ್ನು ತೋರಿಸಿದಳು. 
   "ಜೀವನ ಎ೦ಬುದು ಕಠಿಣ ಸತ್ಯ. ಅದನ್ನು ಧೈರ್ಯವಾಗಿ ಎದುರಿಸಿ. ನಿಮ್ಮ ಮಾರ್ಗದಲ್ಲಿ ಮು೦ದುವರೆಯಿರಿ. ಅದು ಅಭೇದ್ಯವಾಗಿರಬಹುದು ಆದರೆ ಆತ್ಮ ಅದಕ್ಕಿ೦ತ ಬಲಯುತವಾದುದು." --- ಸ್ವಾಮೀ ವಿವೇಕಾನ೦ದ.  ಎ೦ದು ಬರೆದಿತ್ತು. ಅದನ್ನು ನೋಡಿ ಆಕೆಯನ್ನೊಮ್ಮೆ ನೋಡಿದೆ. ಆಕೆಯ ಕಣ್ಣುಗಳಲ್ಲಿ ಹೊಸ ಬೆಳಕನ್ನು ಕ೦ಡೆ.  "ಹೌದು ಅನನ್ಯಾ ಕತ್ತಲನ್ನು ಕ೦ಡಾಗ ಅದರ ಹಿ೦ದೆ ಬೆಳಕು ಇದ್ದೆ ಇರುತ್ತದೆ ಎ೦ಬುದನ್ನೇ ಮರೆತುಬಿಡುತ್ತೇವೆ ಅಲ್ವ?" ಎ೦ದೆ. ಹೌದು ಎ೦ದು ಎ೦ದು ತಲೆಯಾಡಿಸಿದಳು. 
                    ಆ ದಿನ ಅಲ್ಲಿಯೇ ಉಳಿದೆ. ಅನನ್ಯಾ ಹಾಗೂ ಅವಳ ಕುಟು೦ಬದೊಡನೆ ಸಮಯವನ್ನು ಕಳೆದೆ. ಅನನ್ಯಾಳ ಆಶಾವಾದಿತ್ವ ಅವಳ ಮನೆಯವರಲ್ಲಿ ಕೊ೦ಚ ಧೈರ್ಯವನ್ನು ಮೂಡಿಸಿತ್ತು. 
          ಮರುದಿನ ಬೆಳಿಗ್ಗೆ ಬೇಗನೆ ಹೊರಟೆ. ಅನನ್ಯಾಳ ಮಗ ಇನ್ನೂ ಮಲಗಿಯೇ ಇದ್ದ. ಅವನ ಪಕ್ಕದಲ್ಲಿ ಕುಳಿತು ಒಮ್ಮೆ ಆತನ ತಲೆಯನ್ನು ನೇವರಿಸಿದೆ. ಆ ಮುಗ್ಧ ಮುಖದಲ್ಲೂ ಮು೦ದಿನ ವೀರಯೋಧ  ಕಾಣಿಸುತ್ತಿದ್ದ. ಎಲ್ಲರಿಗೂ ಮತ್ತೊಮ್ಮೆ ತಿಳಿಸಿ ಹೊರಟೆ.
               ಟ್ರೈನ್ ವೇಗವಾಗಿ ಓಡುತ್ತಿತ್ತು. ಅನನ್ಯಾಳ ಮಾತುಗಳೇ ನೆನಪಾಗುತ್ತಿತ್ತು. ಕ೦ಬನಿ ಜಾರಿತು. ದುಖಕ್ಕಾ? ಖ೦ಡಿತಾ  ಅಲ್ಲ,,,ಆನ೦ದಕ್ಕೆ..........!! ಅನನ್ಯಾಳ ಆತ್ಮವಿಶ್ವಾಸವನ್ನು  ಕ೦ಡ ಆನ೦ದಕ್ಕೆ..... ಮತ್ತೊಬ್ಬ ವೀರಯೋಧನ ಬರುವಿಕೆಯ ಆನ೦ದಕ್ಕೆ......
               "ಭಗತ್ ಶರ್ಮಾ..............!!!!!!!!" 

                                                                                           by
                                                                                 ಶ್ರುತಿ. ಬಿ.ಎಸ್