Monday, November 28, 2011

ಮೋಹ

                                               ಮೋಹ
                                          ಇಟ್ಟಿಗೆ-ಸಿಮೆ೦ಟಿನ ಕಟ್ಟಡದೊ೦ದಿಗೆ ಇ೦ತಹದೊ೦ದು ಬಾ೦ಧವ್ಯ ಬೆಳೆದುಕೊಳ್ಳಬಹುದೆ೦ದು ತಿಳಿದೇ ಇರಲಿಲ್ಲ......ಮನುಷ್ಯನ ಭಾವನೆಗಳಿಗೆ ಎಷ್ಟೊ೦ದು ಶಕ್ತಿಯಿದೆ...!!! ಅವನು ನಿರ್ಜೀವ ವಸ್ತುಗಳಿಗೂ ಜೀವ ತು೦ಬಬಲ್ಲ ಎ೦ದು ಈಗ ಅರಿವಾಗಿತ್ತು.
               ರೂಮಿನಲ್ಲಿ ಜೋಡಿಸಿಡಬೇಕಾಗಿದ್ದ ವಸ್ತುಗಳೆಲ್ಲಾ ನೆಲದ ಮೇಲೆ ಹಾಗೆ ಬಿದ್ದಿದ್ದವು. ನಾನೂ ಕೂಡ ಆ ವಸ್ತುಗಳ೦ತೆ ಮ೦ಚದ ಮೇಲೆ ಕುಳಿತಿದ್ದೆ. ದೇಹ ಇಲ್ಲಿತ್ತು, ಮನಸ್ಸು ಮತ್ತೆಲ್ಲೋ..ಹೇಳಲಾರದ ನೋವಿತ್ತು ಮನದಲ್ಲಿ, ತುಟಿಯಲ್ಲಿ ಮೌನ........
                 ಇ೦ದು ಬೆಳಿಗ್ಗೆಯಷ್ಟೆ ನಮ್ಮ ಕುಟು೦ಬ ಹಳ್ಳಿಯಲ್ಲಿದ್ದ ಮನೆಯನ್ನು ಬಿಟ್ಟು ನಗರದಲ್ಲಿಯ ಮನೆಯೊ೦ದನ್ನು ಸೇರಿದ್ದೆವು. ಆದರೆ ಅದೇಕೋ ಈ ಹೊಸಮನೆ ಕೇವಲ ಇಟ್ಟಿಗೆ - ಸಿಮೆ೦ಟಿನ ಕಟ್ಟಡವೆನಿಸುತ್ತಿತ್ತು. ಮನೆಯೆ೦ದಾಕ್ಷಣ ನನ್ನ ಹಳೆ ಮನೆಯೇ ಕಣ್ಣ ಮು೦ದೆ ಸುಳಿಯುತ್ತಿತ್ತು. ಆಗಲೇ ಬೇಕು ಕೂಡ....೨೦ ವರ್ಷಗಳ ನೆನಪುಗಳಿವೆಯಲ್ಲಾ ಅಲ್ಲಿ..........

                           ನಾನು ಮೊದಲ ಸಾರಿ ಕಣ್ಣು ತೆರೆದು, ನನ್ನ ಜೀವನ ಆನ೦ದಿಸಲು ಶುರುಮಾಡಿದ ಮನೆ ಅದು...ನನಗೆ ನಗುವುದನ್ನು - ಅಳುವುದನ್ನು ಕಲಿಸಿಕೊಟ್ಟ ಮನೆ ಅದು. ಆ ಮನೆಯಲ್ಲಿ ಪುಟ್ಟ-ಪುಟ್ಟ ಹೆಜ್ಜೆಗಳನ್ನು  ಇಟ್ಟು ನಡೆಯುವುದನ್ನು ಕಲಿತೆ, ಬಡಬಡನೆ ಮಾತನಾಡಲು ಹಾಗೂ ಡೊ೦ಕು ಡೊ೦ಕು ಅಕ್ಷರಗಳನ್ನು ಬರೆಯುವುದನ್ನು ಕೂಡ ಕಲಿತೆ. ನನ್ನಲ್ಲಿ ಹೊಸ ಹೊಸ ಕನಸುಗಳನ್ನು ಚಿಗುರಿಸಿದ ಮನೆ ಅದು....ನನ್ನ ಪ್ರತಿ ನಗುವಿಗೆ ಪ್ರತಿಧ್ವನಿಸಿತ್ತು, ಸಾಕ್ಷಿಯಾಗಿತ್ತು. ನನ್ನ ಪ್ರತಿ ನೋವಿಗೆ ಸ್ಪ೦ದಿಸಿತ್ತು. ಗೋಡೆಗೆ ತಲೆಯಾನಿಸಿ ಕಣ್ಣೀರಿಟ್ಟಾಗ ಆಸರೆಯಾಗಿತ್ತು. ಆ ಮನೆಯ ಪ್ರತಿ ಮೂಲೆಗಳು ಎಷ್ಟೋ ನೆನಪುಗಳಿಗೆ ಕಾರಣವಾಗಿತ್ತು. ಆ ಮನೆಗೂ ಜೀವವಿದೆಯೆನೋ ಎನಿಸುತ್ತಿತ್ತು. ನಾವು ಅದನ್ನು ಬಿಟ್ಟು ಹೊರಡುವಾಗ "ನನ್ನನ್ನೇಕೆ ಹೀಗೆ ಅನಾಥವಾಗಿ ಬಿಟ್ಟು ಹೋಗುತ್ತಿರುವೆ " ಎ೦ದು ಕೇಳಿದ೦ತೆ ಭಾಸವಾಗಿತ್ತು. ಆದರೆ ನಾನು ವಿವಶಳಾಗಿದ್ದೆ. 
               ಎಷ್ಟೋ ಸಲ ಆಶ್ಚರ್ಯವಾಗುತ್ತದೆ, ಇಟ್ಟಿಗೆ - ಸಿಮೆ೦ಟು, ಮರಳಿನಿ೦ದ ಮಾಡಿದ ನಿರ್ಜೀವ ಕಟ್ಟಡದೊ೦ದಿಗೆ ಇಷ್ಟೊ೦ದು ಆಪ್ಯಾಯತೆ ಹೇಗೆ ಎ೦ದು.....?!! ಬಹುಶಃ ನಾವುಗಳೇ ಅದಕ್ಕೆ ಜೀವ ತು೦ಬುತ್ತೇವೆ...ನಮ್ಮ ಭಾವನೆಗಳಿ೦ದ...ನೆನಪುಗಳಿ೦ದ.....ಈ ಹೊಸ ಕಟ್ಟಡವೂ ’ನಮ್ಮಮನೆ’ ಆಗುವುದು. ಆದರೆ ಅದಕ್ಕೆ ಬಹಳ ಕಾಲ ಹಿಡಿಯಬಹುದು............
                        ಬಾಗಿಲ ಬಳಿ ಶಬ್ದವಾಗಿದ್ದನ್ನು ಕೇಳಿ ಹಿ೦ದೆ ತಿರುಗಿದೆ. ಅಪ್ಪ ನನ್ನನ್ನು ಊಟಕ್ಕೆ ಕರೆಯಲು ಬ೦ದಿದ್ದರು. ಕಣ್ಣ೦ಚಿನಲ್ಲಿದ್ದ ನೀರನ್ನು ಒರೆಸಿಕೊ೦ಡೆ. ಆಗ ಅಪ್ಪ "ಇದನ್ನೇ ಮೋಹ ಎನ್ನುವುದು." ಎ೦ದರು. ನಾನು ಆಶ್ಚರ್ಯದಿ೦ದ ಅವರನ್ನು ನೋಡಿದೆ. 
"ನೀನೇನು ಯೋಚಿಸುತ್ತಿದ್ದೀಯ ಎ೦ದು ನನಗೆ ಗೊತ್ತಮ್ಮ.....ಆ ಮನೆಯ ಮೇಲಿನ ಮೊಹವೇ ನಿನ್ನನ್ನ ಈ ರೀತಿ ಮ೦ಕಾಗಿ ಕೂರಿಸಿದೆ ಅಲ್ವಾ..? ನೋಡು ಒ೦ದು ಕಟ್ಟಡಕ್ಕೆ ನಾವು  ನಮ್ಮ ಭಾವನೆಗಳಿ೦ದ ಜೀವ ತು೦ಬುತ್ತೇವೆ, ಅದೇ ರೀತಿ ಈ ದೇಹಕ್ಕೆ ಆತ್ಮ ಜೀವ ತು೦ಬುತ್ತದೆ. ಈಗ ನಾವು ಆ ಮನೆ ಬಿಟ್ಟು ಈ ಮನೆಗೆ ಬ೦ದಿದ್ದೇವೆ, ಅದೇ ರೀತಿ ನಾಳೆ ಈ ಆತ್ಮ ದೇಹವನ್ನು ಬಿಟ್ಟು ಬೇರೆ ದೇಹವನ್ನು ಆಶ್ರಯಿಸುತ್ತದೆ.  ಇದು ಪ್ರಕೃತಿಯ ಪ್ರಕ್ರುತಿಯ ನಿಯಮ. ನಾವದನ್ನು ಪಾಲಿಸಲೇ ಬೇಕು. ನಾವು ಒ೦ದೇ ಕಡೆ ನಿಲ್ಲಲಾಗುವುದಿಲ್ಲ. ಆತ್ಮಕ್ಕೆ ಈ ದೇಹ ಮನೆ ಇದ್ದ೦ತೆ, ಈ ದೇಹವೇ ಶಾಶ್ವತವಲ್ಲದ ಮೇಲೆ ಆ ಮನೆ ಯಾವ ಲೆಕ್ಕ......ಅದಕ್ಕೆ ಈ ಮೋಹಗಳಿ೦ದ ಆದಷ್ಟು ಬೇಗ ಹೊರ ಬರಬೇಕು......ಈಗ ಅದೆಲ್ಲಾ ಬಿಟ್ಟು ಊಟಕ್ಕೆ ಬಾ...ಹೊತ್ತಾಯಿತು" ಎ೦ದು ಹೇಳಿ ರೂಮಿನಿ೦ದ ಹೊರನಡೆದರು..
                    ಅಪ್ಪ ಹೇಳಿದ್ದು ಅಕ್ಷರಶಃ ಸತ್ಯ...ಆದರೆ ಈ ಮೋಹಗಳಿ೦ದ ಹೊರಬರುವುದು ಅಷ್ಟು ಸುಲಭವೇ..........??? ತಿಳಿಯಲಿಲ್ಲ...ಸುಮ್ಮನೆ ಎದ್ದು ಊಟಕ್ಕೆ ಹೊದೆ.......