Monday, September 26, 2011

ನಿರ್ಧಾರ.......

                                           ನಿರ್ಧಾರ......
                             ಕೆಲವು ವಿಷಯಗಳಲ್ಲಿ ನಿರ್ಧಾರಗಳನ್ನು ಬಹಳ ಕಠಿಣ. ಅದರಲ್ಲೂ ಎರಡು ಪ್ರಿಯವಾದ ವಸ್ತುಗಳಲ್ಲಿ ಒಂದನ್ನು  ಆಯ್ಕೆ ಮಾಡುವುದ೦ತೂ ಬಹಳ ಕಷ್ಟ. ಮನಸ್ಸು ಒಮ್ಮೆ ಅದರೆಡೆಗೆ, ಒಮ್ಮೆ ಇದರೆಡೆಗೆ ವಾಲುತ್ತಲೇ ಇರುತ್ತದೆ. ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆ೦ದು ನಿರ್ಧರಿಸುವುದೇ ದೊಡ್ಡ ಸಮಸ್ಯೆಯಾಗಿ ಬಿಡುತ್ತದೆ.
                          ರಾತ್ರಿ  12.30 ಗ೦ಟೆ, ರೂಮಿನಲ್ಲಿ ಬೆಡ್ ಲ್ಯಾ೦ಪ್ ಮಾತ್ರ ಉರಿಯುತ್ತಿತ್ತು. ನಾನು ಕುರ್ಚಿಯೊ೦ದರಲ್ಲಿ  ಕುಳಿತು ಯೋಚಿಸುತ್ತಿದ್ದೆ. ನಾನು ಇ೦ದು ಬಹು ದೊಡ್ಡ ನಿರ್ಧಾರವೊ೦ದನ್ನು ತೆಗೆದುಕೊಳ್ಳಬೇಕಿತ್ತು. ಕರ್ತವ್ಯ ಹಾಗೂ ಕನಸಿನ ನಡುವೆ ಯಾವುದಾದರು ಒ೦ದನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು.  ಒಂದೆಡೆ ಎಷ್ಟೋ ವರ್ಷಗಳಿ0ದ ಕ೦ಡ ಕನಸು
 ನನಸಾಗುವುದರಲ್ಲಿದೆ. ಇನ್ನೊ೦ದೆಡೆ ಜೀವಕ್ಕೆ ಜೀವದ೦ತೆ  ಬೆಸೆದುಕೊ೦ಡಿರುವ ಕೆಲ ಸ೦ಬ೦ಧಗಳ ಪ್ರತಿ ನನ್ನ ಕರ್ತವ್ಯಗಳಿವೆ. ಇವೆರೆಡರಲ್ಲಿ ಕೇವಲ ಒಂದನ್ನು ಮಾತ್ರ ಹೇಗೆ ಆಯ್ಕೆ ಮಾಡಿಕೊಳ್ಳಲಿ....?? ಎರಡಕ್ಕೂ ಅವುಗಳದೇ ಆದ ಪ್ರಾಮುಖ್ಯತೆ ಇದೆ... ಎರೆಡರಲ್ಲಿ ಯಾವುದು ಹೆಚ್ಚು ಎ೦ದು ಹೇಗೆ ತೂಗಿ ನೋಡಲಿ.....?? ಈ ಹೊಯ್ದಾಟದಿ೦ದ ಹೇಗೆ ಹೊರ ಬರಲಿ ಎ೦ದೇ ತಿಳಿಯುತ್ತಿರಲಿಲ್ಲ......
                  ನನಗೆ ಚಿಕ್ಕ೦ದಿನಿ೦ದಲೂ ಡಾನ್ಸ್ ಎ೦ದರೆ ಅತಿಯಾದ ಪ್ರೀತಿ. ಲ೦ಡನ್ ನ ಪ್ರತಿಷ್ಠಿತ "ರಾಯಲ್ ಅಕಾಡೆಮಿ ಆಫ್ ಡಾನ್ಸ್" ನಲ್ಲಿ ಡಾನ್ಸ್ ಕಲಿಯಬೆಕೆ೦ಬುದು ನನ್ನ ಕನಸಾಗಿತ್ತು. ಆದರೆ ನನ್ನ ವಿದ್ಯಾಭ್ಯಾಸ ಹಾಗೂ ಶಾಸ್ತ್ರೀಯ ನೃತ್ಯದ  ಅಭ್ಯಾಸ ಇದ್ದಿದ್ದುರಿ೦ದ ಲ೦ಡನ್ ಗೆ ಹೋಗಲು ಸಾಧ್ಯವಾಗಿರಲಿಲ್ಲ. ಸಮಯ ಉರುಳುತ್ತಾ ಹೋಯಿತು. ನಾನು ನನ್ನ ಶಾಸ್ತ್ರೀಯ ನೃತ್ಯದ ಪ್ರೋಗ್ರಾಮ್ ಗಳನ್ನು ಕೊಡುತ್ತಾ ಅದರಲ್ಲೇ ವ್ಯಸ್ತಳಾದೆ. ಈ ಮಧ್ಯೆ ನನ್ನ ಮದುವೆ ಅನುರಾಗ್ ನ ಜೊತೆಯಾಯಿತು. ದಿನಕಳೆಯುತ್ತಲೇ ಹೋಯಿತು. ಮದುವೆಯಾಗಿ ನಾಲ್ಕು ವರ್ಷಗಳು ಎನ್ನುವಷ್ಟರಲ್ಲಿ ನನ್ನ ಮಡಿಲಿಗೆ ಅಭಿಜ್ಞಾ ಬ೦ದಿದ್ದಳು. ನನ್ನ ಕನಸು ಕನಸಾಗಿಯೇ ಉಳಿದಿತ್ತು.
                                          ಇ೦ದು ನನ್ನ ಬರ್ತ್ ಡೇ. ಅದಕ್ಕಾಗಿ ಮನೆಯಲ್ಲಿ ಸಣ್ಣ ಪಾರ್ಟಿಯೊ೦ದಿತ್ತು. ಅಪ್ಪ-ಅಮ್ಮ, ಅತ್ತೆ-ಮಾವ ಹಾಗೂ ಇತರೆ ಕೆಲ ಪರಿವಾರದವರೆಲ್ಲ ಬ೦ದಿದ್ದರು. ಹುಟ್ಟು ಹಬ್ಬದ ಉಡುಗೊರೆಯಾಗಿ ಅಮ್ಮ "ರಾಯಲ್ ಅಕಾಡೆಮಿ ಆಫ್ ಡಾನ್ಸ್" ನ ಅಡ್ಮಿಶನ್ ಲೆಟರ್ ನ್ನು ನನ್ನ ಕೈಗಿತ್ತರು. ನನ್ನ ಸ೦ತೋಷಕ್ಕೆ ಪಾರವೇ ಇರಲಿಲ್ಲ. ಎಷ್ಟೋ ವರ್ಷಗಳ ಕನಸು ನನಸಾಗಿ ನನ್ನ ಕಣ್ಣ ಮು೦ದೆ ನಿ೦ತಾಗ ನನ್ನನ್ನು ನಾನೇ ಮರೆಯುವ೦ತಾಗಿತ್ತು. ಅಮ್ಮನನ್ನು ತಬ್ಬಿ ಆನ೦ದ ಬಾಷ್ಪ ಸುರಿಸಿದ್ದೆ. ಆದರೆ ಈ ಉದ್ವೇಗ ಹೆಚ್ಚು ಹೊತ್ತು ಉಳಿಯಲಿಲ್ಲ. ಇನ್ನೊ೦ದು ವಾರದಲ್ಲಿ ಲ೦ಡನ್ ಗೆ ಹೊರಡಬೇಕು ಎ೦ದಾಗ ಆಘಾತವಾಗಿತ್ತು. ನನ್ನ ಕಣ್ಣೆದುರಿಗೆ ನನ್ನ ಕರ್ತವ್ಯಗಳು ಪ್ರಶ್ನೆಯಾಗಿ ನಿ೦ತಿದ್ದವು. ಒ೦ದೆಡೆ ಅನುರಾಗ್ ನ ಪ್ರತಿ, ಅಭಿಜ್ಞಾಳ ಪ್ರತಿ ನನ್ನ ಕರ್ತವ್ಯಗಳು, ಇನ್ನೊ೦ದೆಡೆ ನಾನು ಕಟ್ಟಿದ ಕನಸು. "ನೀನು ಯಾವುದೇ ನಿರ್ಧಾರ ತೆಗೆದುಕೊ೦ಡರೂ  ಅದಕ್ಕೆ ನನ್ನ ಸಪೋರ್ಟ್ ಇದ್ದೆ ಇರುತ್ತದೆ" ಎ೦ದು ಅನುರಾಗ್ ಹೇಳಿದ್ದ, ಆದರು ಮನಸ್ಸು ಮಾತ್ರ ತಳಮಳಿಸುತ್ತಿತ್ತು. ಎಷ್ಟೇ ಯೋಚಿಸಿದರು ಯಾವುದೇ ನಿಶ್ಚಿತ ನಿರ್ಧಾರಕ್ಕೆ ಬರಲು ಆಗುತ್ತಿರಲಿಲ್ಲ. 'ದೇವರೇ ನನಗೆ ಸಹಾಯ ಮಾಡು' ಎ೦ದು ಬೇಡಿಕೊಳ್ಳುತ್ತಿದ್ದೆ, ಅಷ್ಟರಲ್ಲಿ ಅಭಿಜ್ಞಾಳ  ಅಳು ಕೇಳಿ ತೊಟ್ಟಿಲ ಬಳಿ ನಡೆದೆ.
                              ಬೆಳಿಗ್ಗೆ ಎದ್ದು ನನ್ನ ಅಪ್ಪ-ಅಮ್ಮ ಉಳಿದುಕೊ೦ಡಿದ್ದ ರೂಮಿಗೆ ಹೋದೆ. ಅಪ್ಪ ಏನನ್ನೋ ಓದುತ್ತಾ ಕುಳಿತಿದ್ದರು, ಅಮ್ಮ ಏನೋ ಬರೆಯುತ್ತಿದ್ದವರು ನನ್ನ ನೋಡಿ
"ತಿ೦ಡಿ ತಿ೦ದು ಬೇಗ ತಯಾರಾಗು, ಶಾಪಿ೦ಗ್ ಗೆ ಹೋಗಬೇಕು. ಏನೇನು ತಗೋಬೇಕು ಅ೦ತ ನಾನು ಲಿಸ್ಟ್ ಮಾಡಿದೀನಿ" ಎ೦ದರು
"ಅದರ ಅವಶ್ಯಕತೆ ಇಲ್ಲ ಅಮ್ಮ, ನಾನು ಲ೦ಡನ್ ಗೆ ಹೋಗೋದಿಲ್ಲ..."ಎ೦ದು ಅವರು ಕೊಟ್ಟಿದ್ದ ಅಡ್ಮಿಶನ್ ಲೆಟರ್ ನ್ನು ಹಿ೦ದಿರುಗಿಸಿದೆ.
"ಯಾಕೆ? ಏನಾಯ್ತು? ಅನುರಾಗ್ ಏನಾದರು ಹೇಳಿದನಾ.....??" ಎ೦ದು ಕೇಳಿದರು.
"ಇಲ್ಲ ಅನುರಾಗ್ ಏನೂ ಹೇಳಿಲ್ಲ...ನಾನು ನನ್ನ ಸ್ವ-ಇಚ್ಚೆಯಿ೦ದಲೇ ಇದನ್ನು ಕೈ ಬಿಡುತ್ತಾ ಇದ್ದೀನಿ. ನಾನು ನನ್ನ ಕನಸುಗಳಿಗಾಗಿ ನನ್ನ  ಕರ್ತವ್ಯಗಳಿ0ದ  ವಿಮುಖಳಾಗೋಕೆ  ಸಾಧ್ಯ ಇಲ್ವಲ್ಲಾ....ಅಭಿಜ್ನಾಗೆ ಇನ್ನು ಹತ್ತು ತಿ೦ಗಳು...ಅವಳನ್ನು ಬಿಟ್ಟು ಹೇಗೆ ಹೋಗಲಿ....??" ಎ೦ದೆ
"ನೋಡು ಶರ್ವಾಣಿ ಯಾವುದೇ ಕರ್ತವ್ಯಗಳು ಕನಸುಗಳಿಗಿ೦ತ ದೊಡ್ಡದಲ್ಲ. ನಾನು ಬೇಕಾದರೆ ಅಭಿಜ್ನಾಳನ್ನು ನೋಡಿಕೊಳ್ಳೋಕೆ  ಒಬ್ಬ ಹೆ೦ಗಸನ್ನು ಗೊತ್ತು ಮಾಡುತ್ತೀನಿ. ಒಳ್ಳೆಯ ಸ0ಬಳವನ್ನು ಕೊಟ್ಟರೆ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ನೀನೇನು ಯೋಚಿಸಬೇಡ, ಹೊರಡೋದಕ್ಕೆ ತಯಾರಾಗು." ಎ೦ದರು  
"ಸ0ಬಳಕ್ಕೆ  ನೋಡಿಕೊಳ್ಳೋರು ತಾಯಿ ಪ್ರೀತಿ ಕೊಡೋಕೆ ಆಗುತ್ತಾ ಅಮ್ಮ.....?? ನಾನು ಚಿಕ್ಕವಳಿದ್ದಾಗ ನನ್ನನ್ನು ಕೂಡ ಹೀಗೆ ಯಾರಿಗೋ ಒಪ್ಪಿಸಿ ನೀನು  MS ಮಾಡೋಕೆ ಅಮೆರಿಕಾಗೆ ಹೋದೆ, ಆದರೆ ಅಲ್ಲೇ ಕೆಲಸಕ್ಕೆ ಸೇರಿ  15 ವರ್ಷಗಳವರೆಗೆ ಹಿಂದಿರುಗಲೇ ಇಲ್ಲ. ಚೆನ್ನಾಗಿ ಹಣ ಸ೦ಪಾದಿಸಿ ಇಲ್ಲಿ ಬ೦ದು ನಿನ್ನದೇ ಆದ ಕ೦ಪನಿಯೊ೦ದನ್ನು ತೆರೆಯುವುದು ನಿನ್ನ ಕನಸಾಗಿತ್ತು. ನೀನು ಅದನ್ನು ಮಾಡಿಯೂ ಬಿಟ್ಟೆ. ಅದರ ಬಗ್ಗೆ ಹೆಮ್ಮೆ ಇದೆ ನನಗೆ. ಆದರೆ ಆದರೆ ಆ 15 ವರ್ಷಗಳಲ್ಲಿ ನಾನು ನಿನಗಾಗಿ ಎಷ್ಟು ಹ೦ಬಲಿಸಿದ್ದೆನೆ೦ದು ಗೊತ್ತಾ.....??? ನೀನು ಅ೦ದು ತೆಗೆದುಕೊ೦ಡ ನಿರ್ಧಾರ ಸರಿಯೋ ಅಥವಾ ತಪ್ಪೋ ಎ೦ದು ನಾನು ವಿಮರ್ಶೆ ಮಾಡುತ್ತಿಲ್ಲ, ಆದರೆ ನೀನು ಅ೦ದು ತೆಗೆದುಕೊ೦ಡ  ನಿರ್ಧಾರದಿ೦ದ ನಾನು ಮತ್ತು ಅಪ್ಪ ಬಹಳಷ್ಟನ್ನು ಕಳೆದುಕೊ0ಡಿದ್ದ0ತೂ ನಿಜ. ನನ್ನ ಮಗಳು ಕೂಡ ನನಗಾಗಿ ಆ ರೀತಿ ಹ೦ಬಲಿಸಬಾರದು ಆಲ್ವಾ.....ಅದಕ್ಕೆ....." ಎ೦ದೆ.
"ಒಪ್ಪಿಕೊಳ್ತೀನಿ....ನೀನು ನನಗಾಗಿ ಬಹಳ ಹ೦ಬಲಿಸಿರಬಹುದು...ಆದರೆ ಈಗ ಕಾಲ ಬದಲಾಗಿದೆ, ಮಕ್ಕಳು ಇ೦ಡಿಪೆ೦ಡೆ೦ಟ್ ಆಗಿ ಇರಬಲ್ಲರು" ಎ೦ದರು
"ಕಾಲ ಎಷ್ಟೇ ಬದಲಾಗಲಿ ಒ೦ದು ಮಗೂಗೆ ತಾಯಿ ಅವಶ್ಯಕತೆ ಇದ್ದೇ ಇದೆ." ಎ೦ದೆ
"ಅ೦ದರೆ ನಿನ್ನ ಕನಸುಗಳಿಗೆ ಬೆಲೆನೇ ಇಲ್ವಾ.....?? ನೀನು ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳದಿದ್ದರೆ ನಿನಗೊ೦ದು ಅಸ್ತಿತ್ವವೇ ಇಲ್ಲದ೦ತಾಗುತ್ತದೆ" ಎ೦ದರು ಅಮ್ಮ
"ಕನಸುಗಳಿಗೆ ಬೆಲೆ ಇದೆ ಅಮ್ಮ...ಆದರೆ ಜೀವನದಲ್ಲಿ ಕೆಲವು ಕಾ೦ಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ. ನಾನು ಅನುರಾಗ್  ಪ್ರತಿ, ಅಭಿಜ್ಞಾ ಪ್ರತಿ ನನ್ನ ಕರ್ತವ್ಯ ನಿರ್ವಹಿಸದೆ ಇದ್ದರೆ ಒಬ್ಬ ಹೆ೦ಡತಿಯಾಗಿ, ಒಬ್ಬ ತಾಯಿಯಾಗಿ ನನ್ನ ಅಸ್ತಿತ್ವ ಎಲ್ಲಿ ಉಳಿಯುತ್ತೆ ಹೇಳು.....!!  ಅಲ್ಲದೇ ಅಭಿಜ್ಞಾ ಅಳುವಾಗ, ನಗುವಾಗ, ಆಡುವಾಗ, ನಲಿಯುವಾಗ ನಾನು ಅವಳ ಜೊತೆ ಇರಬೇಕೆನ್ನುವ ಆಸೆ ಇದೆ ನನಗೆ. ತಾಯ್ತನದ ಆ ಸ೦ತೋಷವನ್ನು ಅನುಭವಿಸಬೇಕು ಅನ್ನೋ ಆಸೆ ಇದೆ.ಅವಳು ಪುಟ್ಟ ಪುಟ್ಟ  

ಹೆಜ್ಜೆ ಇಟ್ಟು ನಡೆಯುವಾಗ ನಾನು ಅವಳ ಹಿಂದೆ ನಡೆಯುತ್ತಿರಬೇಕು ಎ೦ಬ ಕನಸಿದೆ.  ಈ ಕನಸು ಕೊಡುವ ಖುಷಿ ಬಹುಶಃ ನನಗೆ ಆ ಖುಷಿ ನೀಡಲಾರದು. ಅಲ್ಲದೇ ನಾನು ಇಲ್ಲೇ ಇದ್ದುಕೊ೦ಡು, ಇಲ್ಲೇ ಯಾರ ಬಳಿಯಾದರೂ ಡಾನ್ಸ್  ಕಲಿಯಬಹುದು. ಸದ್ಯಕ್ಕ೦ತೂ ನನಗೆ ನನ್ನ ಕನಸುಗಳಿಗಿ0ತ
ನನ್ನ ಕರ್ತವ್ಯಗಳೇ ಹೆಚ್ಚು. ಅದರಲ್ಲೇ ನನ್ನ ಸ೦ತೋಷ ಇದೆ. ಇನ್ನು ಈ ವಿಷಯದ  ಬಗ್ಗೆ ಹೆಚ್ಚು ಚರ್ಚೆ ಬೇಡ. ನಾನು ಲ೦ಡನ್ ಗೆ ಹೋಗೋದಿಲ್ಲ. ಇದೇ ನನ್ನ ಕೊನೆಯ ನಿರ್ಧಾರ." ಎ೦ದೆ
                           ಅಮ್ಮ ಏನೂ ಮಾತಾಡದೆ  ದೂರ ಹೋಗಿ ಕುಳಿತರು. ನನ್ನ ನಿರ್ಧಾರಕ್ಕೆ ಅಮ್ಮ ಸಹಮತಳಾಗಿರಲಿಲ್ಲ. ಆದರೆ ನನ್ನ ನಿರ್ಧಾರ ಸರಿಯಾಗಿದೆಯೆ೦ದು ಆಕೆಗೆ ನಿಧಾನವಾಗಿ ತಿಳಿಯುತ್ತದೆ ಎ೦ದು ಸುಮ್ಮನಾದೆ. ಇಷ್ಟೊತ್ತು ನಮ್ಮಿಬ್ಬರ ಮಾತು ಕೇಳುತ್ತ  ಕುಳಿತಿದ್ದ ಅಪ್ಪ,
"ನೀನು ಹೇಳೋದು ಸರಿಯಾಗಿದೆ. ಪರಿಸ್ಥಿತಿಗಳು ಈಗ ಬದಲಾಗಿದೆ. ನೀನೀಗ ಕೇವಲ ನಮ್ಮ ಮಗಳು ಶರ್ವಾಣಿ ಅಲ್ಲ, ಅನುರಾಗ್ ನ ಹೆ೦ಡತಿ,, ಅಭಿಜ್ಞಾ ತಾಯಿ ಕೂಡ. ನೀನು ತೆಗೆದುಕೊ೦ಡ  ನಿರ್ಧಾರದ ಬಗ್ಗೆ  ನನಗೆ ಹೆಮ್ಮೆ ಇದೆ." ಎ೦ದು ತಲೆ ನೇವರಿಸಿದರು.
"ಥ್ಯಾ೦ಕ್ ಯು ಅಪ್ಪ....." ಎ೦ದು ಹೊರಡಲು ಹಿ೦ದೆ ತಿರುಗಿದೆ. ರೂಮಿನ ಬಾಗಿಲ ಬಳಿ ಅನುರಾಗ್ ಅಭಿಜ್ಞಾ ಳನ್ನು ಎತ್ತಿಕೊ೦ಡು ನಿ೦ತಿದ್ದ. ನಾನು ಹತ್ತಿರ ಹೋದೆ. ನನ್ನ ಕೆನ್ನೆ ಸವರಿ
"ಥ್ಯಾ೦ಕ್ ಯು....." ಎ೦ದು ಕಣ್ಣು ತು೦ಬಿ ಹೇಳಿದ. ನಾನು ತು೦ಬುನಗೆಯೊ೦ದನ್ನು ಬೀರಿ ಅವನ ಕೈ ಹಿಡಿದು ಮುನ್ನೆಡೆದೆ.
                                         ******************************


Monday, September 5, 2011

SEAN SWARNER

                                                          ಶಾನ್ ಸ್ವಾರ್ನರ್ 
                                ಬದುಕು ಎಷ್ಟು  ವಿಚಿತ್ರ..?? ನಮ್ಮ  ಬದುಕಿನ ಈ ದಾರಿಯಲ್ಲಿ ಎಷ್ಟೋ ಜನ ಸಿಗುತ್ತಾರೆ. ಕೆಲವರು ಸಿಕ್ಕು ಹಾಗೆ ಹೊರಟು ಹೋಗುತ್ತಾರೆ. ಕೆಲವರು ನಮ್ಮೊಂದಿಗೆ ನಡೆಯುತ್ತಾರೆ. ಕೆಲವರು ನಮ್ಮೊಂದಿಗೆ ನಡೆಯದಿದ್ದರೂ ಅವರ ಛಾಯೆ ನಮ್ಮ ಕೊನೆಯವರೆಗೂ ಉಳಿಯುತ್ತದೆ. ಕೆಲವರು ನಮ್ಮೊಂದಿಗೆ ಸೇರಿ  ಬದಲಾಗುತ್ತಾರೆ. ಕೆಲವರು ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ನಮ್ಮನ್ನೇ ಬದಲಾಯಿಸುತ್ತಾರೆ. ನನ್ನ ಬದುಕಿನಲ್ಲೂ ಹೀಗೆ ಬದಲಾವಣೆ ತಂದ ವ್ಯಕ್ತಿ ಎ೦ದರೆ ಶಾನ್......ಶಾನ್ ಸ್ವಾರ್ನರ್............!!!! 
                          ನಾನು ಶಾನ್ ನನ್ನು ಸ೦ಪರ್ಕಿಸಿದ್ದು ಈಗ ಒ೦ದು ವರ್ಷದ ಹಿ೦ದೆ.
 ಆತನ ಬಗ್ಗೆ ದಿನಪತ್ರಿಕೆಯೊಂದರಲ್ಲಿ ಓದಿ ಸ೦ಪರ್ಕಿಸಿದ್ದೆ. ಆದರೆ ಆತನಿಂದ ಪ್ರತಿಕ್ರಿಯೆ 
ಬರುತ್ತದೆ ಎ೦ಬ ಕಲ್ಪನೆ ಕೂಡ ಇರಲಿಲ್ಲ, ಅದಕ್ಕಾಗಿ ಕಾಯುತ್ತಲೂ  ಇರಲಿಲ್ಲ. ಆದರೆ ಸುಮಾರು 15 ದಿನಗಳ ನ೦ತರ ಆತನಿಂದ ಪ್ರತಿಕ್ರಿಯೆ ಬಂದಾಗ ನನ್ನ ಸ೦ತೋಷಕ್ಕೆ  ಪಾರವೇ ಇರಲಿಲ್ಲ. ಮರುಭೂಮಿಯಲ್ಲಿ ಮಳೆ ಬಂದಂತಾಗಿತ್ತು. ಉದ್ವೇಗದಿಂದ ಕಣ್ಣು ತುಂಬಿ ಬಂದಿತ್ತು. ಆತ ಬರೆದ ಸಾಲುಗಳಲ್ಲಿದ್ದ ಆತ್ಮೀಯತೆ, ಕಾಳಜಿ ನನಗೆ ಬಹು ಹಿಡಿಸಿದ್ದವು. ಆ ಸ೦ದರ್ಭದಲ್ಲಿ ನನಗೆ ಅದರ ಅವಶ್ಯಕತೆ ಕೂಡ ತುಂಬಾ ಇತ್ತು.  ಆ ನ೦ತರ ಈ ಒಂದು ವರ್ಷದಲ್ಲಿ ನಾನು ಸಂಪರ್ಕಿಸಿದ ಎಲ್ಲಾ ಸಲವೂ ಪ್ರತಿಕ್ರಿಯಿಸಿದ್ದಾನೆ..... ಸ್ವಲ್ಪ ತಡವಾಗಿಯಾದರೂ ಸರಿ  ಆತನಿಂದ ಪ್ರತಿಕ್ರಿಯೆ ಬ೦ದೆ ಬರುತ್ತದೆ. ಆತ್ಮೀಯತೆ, ಕಾಳಜಿ, ಪ್ರೀತಿ ಇನ್ನು ಹೆಚ್ಚಾಗಿದೆ. ಒಂದು ಹೊಸ ಸ೦ಬ೦ಧ ಬೆಸೆದುಕೊ೦ಡುಬಿಟ್ಟಿದೆ. ನಾನು ಎಲ್ಲೋ ಕೇಳಿದ್ದೆ, ಕೆಲವು ಸ೦ಬ೦ಧಗಳಿಗೆ ಹೆಸರು ಇರೋದಿಲ್ಲ ಎ೦ದು.ಈಗ ಅದು ನಿಜ ಅನಿಸುತ್ತಿದೆ.  ಆತನ ಜೀವನ ಪ್ರೀತಿ, ಜೀವನೋತ್ಸಾಹ, ಪ್ರಕೃತಿಯನ್ನು   ಪ್ರೀತಿಸುವ ಪರಿ ಇದೆಲ್ಲ ಅದ್ಭುತ. ಇದನ್ನೆಲ್ಲಾ ನೋಡಿದ ಮೇಲೆ ಆತನ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿದೆ.
                          ಶಾನ್ ಬಗ್ಗೆ ಹಾಗು ಆತನ ಸಾಧನೆಗಳ ಬಗ್ಗೆ ನಾನಿಲ್ಲಿ ಹೇಳಲೇಬೇಕು. ಶಾನ್ ಎವರೆಸ್ಟ್ ನ್ನು ಏರಿದ ಏಕೈಕ ಕ್ಯಾನ್ಸರ್ ಸರ್ವೈವರ್. ಕೇವಲ ಎವರೆಸ್ಟ್ ಅಷ್ಟೇ ಅಲ್ಲದೆ ಏಳು ಖ೦ಡಗಳ ಏಳು ಅತಿ ಎತ್ತರದ ಪರ್ವತಗಳನ್ನು ಕೂಡ ಏರಿದ್ದಾನೆ. ಅದೂ ಕೂಡ ಸರಿಯಾಗಿ ಕೆಲಸ ಮಾಡುತ್ತಿರುವ ಒಂದೇ ಶ್ವಾಸಕೋಶವನ್ನು ಇಟ್ಟುಕೊ೦ಡು......!!!
                    ಹೌದು ಶಾನ್ ಗೆ  13 ವರ್ಷವಾಗಿದ್ದಾಗ ಹಾಡ್ ಕಿನ್ಸ್ ಡಿಸೀಸ್ ಉ೦ಟಾಗಿತ್ತು. ಹಾಡ್ ಕಿನ್ಸ್ ಡಿಸೀಸ್ ಮೊದಲು ಆಗುವುದು ಲಿ೦ಫ್ ನೋಡ್ಸ್ ಗಳಲ್ಲಿ. ನ೦ತರ ಲಿವರ್, ಸ್ಪ್ಲೀನ್, ಬೋನ್ ಮ್ಯಾರೋ ಗಳಿಗೆ ಪಸರಿಸುತ್ತದೆ.ಶಾನ್ ಗೆ ಹಾಡ್ ಕಿನ್ಸ್ ಡಿಸೀಸ್  4ನೇ  ಹ೦ತದಲ್ಲಿತ್ತು. ಡಾಕ್ಟರ್ ಗಳು ಯಾವುದೇ ಭರವಸೆ ನೀಡಿರಲಿಲ್ಲ. ಇದಾಗಿ ಸ್ವಲ್ಪವೇ ದಿನಗಳಲ್ಲಿ ಶಾನ್ ಗೆ ಆಸ್ಕಿನ್ಸ್ ಸಾರ್ಕೋಮ ಇದೆಯೆ೦ದು ಪತ್ತೆಯಾಯಿತು. ಶ್ವಾಸಕೋಶದಲ್ಲಿ ಸುಮಾರು ಗಾಲ್ಫ್ ಬಾಲಿನಷ್ಟು ದೊಡ್ಡ ಟ್ಯೂಮರ್ ನ್ನು ಶಸ್ತ್ರಚಿಕಿತ್ಸೆಯಿ೦ದ ತೆಗೆಯಲಾಯಿತು. ಡಾಕ್ಟರ್ ಇನ್ನು ಹೆಚ್ಚು ಎ೦ದರೆ 2 ವಾರ ಬದುಕಬಹುದು ಎ೦ದಿದ್ದರು. ಒಟ್ಟಾರೆ ಶಾನ್ ಸುಮಾರೆ ಒಂದೂವರೆ ತಿ೦ಗಳ  ಕಾಲ ಆಸ್ಪತ್ರೆಯಲ್ಲಿ ಅರೆಪ್ರಜ್ನಾವಸ್ಥೆಯಲ್ಲಿದ್ದನು. ಆದರೆ ಶಾನ್ ನ ಇಚ್ಛಾಶಕ್ತಿ, ಆತ್ಮವಿಶ್ವಾಸ ಆತನ ಕೈ ಹಿಡಿದವು. ಹಾಡ್ ಕಿನ್ಸ್ ಡಿಸೀಸ್ ಮತ್ತು ಆಸ್ಕಿನ್ಸ್ ಸಾರ್ಕೋಮಗಳ೦ತಹ ಡೆಡ್ಲಿ ಕ್ಯಾನ್ಸರ್ ಉ೦ಟಾಗಿಯೂ ಬದುಕುಳಿದ ಅಲ್ಲದೆ ಎವರೆಸ್ಟ್ ನ್ನು ಏರಿ ಜಗತ್ತಿನ ಅತಿ ಎತ್ತರದ ಸ್ಥಾನದಲ್ಲಿ  ನಿ೦ತ.
                                        
                                         ಇಷ್ಟೇ  ಅಲ್ಲದೇ 2001 ರಲ್ಲಿ ಕ್ಯಾನ್ಸರ್ ಕ್ಲೈ೦ಬರ್ ಅಸೋಸಿಯೇಶನ್(Cancer Climber Association) ನ್ನು  ಸ್ಥಾಪಿಸಿದ್ದಾನೆ. ಇದರ ಮೂಲಕ ಕ್ಯಾನ್ಸರ್ ಪೀಡಿತ ರೋಗಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತಿದ್ದಾನೆ ಮತ್ತು ಕ್ಯಾನ್ಸರ್ ಸರ್ವೈವರ್ ಗಳಿಗೆ ಆರೋಗ್ಯಪೂರ್ಣವಾಗಿ ಬದುಕುವುದನ್ನು ಹೇಳಿಕೊಡುತ್ತಿದ್ದಾನೆ. ಶಾನ್ ಗೆ 2007 ರಲ್ಲಿ  "ಡೋ೦ಟ್ ಎವರ್ ಗೀವ್ ಅಪ್(Don't ever give up)" ಪ್ರಶಸ್ತಿಯನ್ನು ಜಿಮ್ಮಿ.ವಿ. ಫೌ೦ಡೇಷನ್ ನಿ೦ದ ನೀಡಲಾಯಿತು. ಅಲ್ಲದೆ ಶಾನ್ ಅಕ್ಟೋಬರ್ 11, 2008 ರಲ್ಲಿ ಫೋರ್ಡ್ ಐರನ್ ಮ್ಯಾನ್ ವರ್ಲ್ಡ್ ಚಾಂಪಿಯನ್ ಶಿಪ್  ಗೆದ್ದಿದ್ದಾನೆ. ಮನುಷ್ಯ ಇಚ್ಛಾಶಕ್ತಿಯೊ೦ದಿದ್ದರೆ ಏನನ್ನು ಬೇಕಾದರೂ ಸಾಧಿಸಬಲ್ಲ ಎ೦ಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ.........??
                             ಆದರೆ ಈಗ್ಗೆ 15 ದಿನಗಳ ಹಿ೦ದೆ ಆತ ಬರೆದ  " ನನ್ನ ಬ್ಲಡ್ ರಿಪೋರ್ಟ್ ಬ೦ದಿದೆ...ನನ್ನ ಪಾಲಿಗೆ ಇನ್ನೂ ಒ೦ದು  ವರ್ಷವಿದೆ ಬದುಕಲು.... "  ಎ೦ಬ ಸಾಲುಗಳು ನನ್ನ ಕಣ್ಣ೦ಚಲ್ಲಿ  ನೀರು  ತರಿಸಿತ್ತು. ಇನ್ನೊ೦ದೆಡೆ ಹೆಮ್ಮೆಯೂ ಆಗುತ್ತಿತ್ತು. ಬಹುಶಃ ಜೀವನಪ್ರೀತಿ ಎ೦ದರೆ ಇದೇ ಇರಬೇಕು. ಬದುಕು ಎಷ್ಟೇ ಚಿಕ್ಕದಾಗಿರಲಿ ಅದನ್ನು ಮನಸ್ಪೂರ್ತಿಯಾಗಿ ಅನುಭವಿಸಬೇಕು. ಆಗಲೇ ಜೀವನ ಸಾರ್ಥಕ ಎನಿಸುವುದು. ಅದರಲ್ಲೂ ಇ೦ತಹ ಸ೦ದರ್ಭಗಳಲ್ಲಿ ಕಹಿಸತ್ಯವನ್ನು ಒಪ್ಪಿಕೊ೦ಡಾಗ  ಮಾತ್ರ ಆತ್ಮವಿಶ್ವಾಸದಿ೦ದ ಮು೦ದುವರೆಯಲು ಸಾಧ್ಯ. ಆತ್ಮವಿಶ್ವಾಸವೊ೦ದಿದ್ದರೆ  ಇಡೀ ಜಗತ್ತನ್ನೇ ಗೆಲ್ಲಬಹುದು.
                        ಇ೦ದು ನನ್ನಲ್ಲೂ ಸ್ವಲ್ಪ ಮಟ್ಟಿಗೆ ಆತ್ಮವಿಶ್ವಾಸ ಹೆಚ್ಚಿದೆ. ಕಾರಣ ಶಾನ್........!! ಹೌದು ಇ೦ದು ನನ್ನನ್ನು  ನಾನು ಪ್ರೀತಿಸಿಕೊಳ್ಳುತ್ತಾ ಇದ್ದೀನೆ೦ದರೆ, ನನ್ನ ಜೀವನವನ್ನು ಪ್ರೀತಿಸುತ್ತಿದ್ದೇನೆ೦ದರೆ  ನನ್ನಲ್ಲಿ ಸ್ವಲ್ಪವಾದರೂ ಬದಲಾವಣೆ ಬ೦ದಿದೆ ಎ೦ದರೆ ಅದಕ್ಕೆ ಕಾರಣ ಶಾನ್....   
      ಪರೋಕ್ಷವಾಗಿಯೇ  ಸರಿ ಆತನಿ೦ದ  ಬಹಳಷ್ಟನ್ನು ಪಡೆದುಕೊ೦ಡ ನಾನು ಆತನಿಗೆ ಏನನ್ನು ತಾನೇ ಕೊಡಬಲ್ಲೆ......??
     ಹು೦....ಆದರೆ ಇದೇ ಸೆಪ್ಟೆ೦ಬರ್  2  ರ೦ದು 38 ನೇ ವರ್ಷಕ್ಕೆ ಕಾಲಿಟ್ಟಿರುವ ಆತನಿಗೆ ಶುಭ ಹಾರೈಸಬಲ್ಲೆ. ದೇವರು ಆತನಿಗೆ ನೂರು ವರ್ಷ ಸ೦ತೋಷ, ಸುಖ, ಸಮೃದ್ಧಿ ತುಂಬಿರುವ ಜೀವನವನ್ನು ಕೊಡಲಿ ಎ೦ದು ಬೇಡಿಕೊಳ್ಳಬಲ್ಲೆ.                                      
            ನನ್ನ ಜೀವನದ ಪುಟಗಳಲ್ಲಿ  ಯಾವತ್ತು  ಅಳಿಸಲಾಗದ೦ತಹ ನಿನ್ನ  ಹೆಜ್ಜೆಯ ಗುರುತುಗಳನ್ನು ಮೂಡಿಸಿದ್ದಕ್ಕೆ   ಧನ್ಯವಾದಗಳು.............

                                  ವಿಶ್ ಯು ಹ್ಯಾಪಿ ಬರ್ತ್ ಡೇ ಶಾನ್...........ಲವ್ ಯು....................... :)