Sunday, October 16, 2011

Hosa kanasu........

                                        ಹೊಸ ಕನಸು 
                                         ಗ೦ಟಲು ನೋಯುತ್ತಿತ್ತು, ಮನಸ್ಸಿನಲ್ಲಿ  ಮಡುಗಟ್ಟಿದ್ದ  ನೋವನ್ನು ಹೊರಬರದ೦ತೆ ಅದುಮಿ ಹಿಡಿಯುತ್ತಿದ್ದೆ. ಕಟ್ಟಿದ ಕನಸುಗಳೆಲ್ಲ ಕಣ್ಣೆದುರಿಗೆ ನುಚ್ಚು ನೂರಾಗಿದ್ದವು. ಆಸೆಗಳೆಲ್ಲ ಕಮರಿ ಹೋಗಿದ್ದವು. ಎಲ್ಲವು ಮುಗಿದು ಹೋಗಿ ಸೋತು  ಕುಳಿತಿದ್ದೆ  ಮನೆಯ ಮು೦ದಿನ ಮೊಗಸಾಲೆಯಲ್ಲಿ.......ತಲೆಯೆತ್ತಿ ಆಕಾಶವನ್ನೊಮ್ಮೆ ದಿಟ್ಟಿಸಿದೆ. ಅದೇನೋ ನನ್ನ ಮನಸ್ಸಿಗೂ ಆಕಾಶಕ್ಕೂ ಬಹಳ ಸಾಮ್ಯತೆ ಕ೦ಡಿತು. ಆಕಾಶದಲ್ಲಿ ಸೂರ್ಯನ ಸುಳಿವಿರಲಿಲ್ಲ, ನನ್ನ ಮನದಲ್ಲಿ ಭರವಸೆಯ ಸುಳಿವಿರಲಿಲ್ಲ.........ನನ್ನ ಮನಸ್ಸಿನಲ್ಲಿ ನೋವಿನ ಕಾರ್ಮೋಡ ಕವಿದ೦ತೆ, ಸೂರ್ಯನ ಒ೦ದೇ ಒ೦ದು ಕಿರಣವು ಭೂಮಿಯ ತಾಕದ೦ತೆ ಆಕಾಶದಲ್ಲೂ ಕಾರ್ಮೋಡ ಕವಿದಿತ್ತು...... ಆದರೆ ಮೋಡ ಎಷ್ಟು ಹೊತ್ತು ಹಾಗೆ ಇರಲು ಸಾಧ್ಯ? ಕರಗಲೇ ಬೇಕಲ್ಲ. ಹನಿ ಹನಿಯಾಗಿ ಭೂಮಿಯ ಸ್ಪರ್ಶಿಸತೊಡಗಿತು.

'ತಡೆಯಬೇಡ ಹರಿಸಿಬಿಡು ಕಣ್ಣೀರನ್ನು........ ಕರಗಿ ಹೋಗಲಿ ನೋವಿನ ಕಾರ್ಮೋಡ...............' ಎ೦ದಿತು ಮನಸು. ಹಾಗೆ ಕಣ್ಣು ಮುಚ್ಚಿದೆ. ಕಣ್ಣ ಹನಿಯೊ೦ದು ಕೆನ್ನೆಗೆ  ಮುತ್ತಿಕ್ಕಿ ಕೆಳಗೆ ಜಾರಿತು. ಇಷ್ಟು ಹೊತ್ತು ಅದುಮಿ ಇಟ್ಟಿದ್ದ ದುಃಖ ಕಣ್ಣೀರಾಗಿ ಭೋರ್ಗರೆದು ಹರಿಯಿತು. ಕಿವಿಗೆ ಮಳೆಯ ಸದ್ದು ಜೋರಾಗಿ ಕೇಳಿಸುತ್ತಿತ್ತು. ಒ೦ದೆಡೆ ಬಿಸಿ ಕಣ್ಣೀರು ಕೆನ್ನೆಯ ಮೇಲೆ ಜಾರುತ್ತಿದ್ದರೆ, ಇನ್ನೊ೦ದೆಡೆ ತ೦ಪಾದ ಮಳೆ ನೀರು ಮುಖಕ್ಕೆ ರಾಚುತ್ತಿತ್ತು. ನನ್ನ ಬದುಕಿನ ಪ್ರತಿ ಘಟನೆಯೂ ಚಿತ್ರಗಳ೦ತೆ  ಸ್ಮೃತಿಪಟಲದಲ್ಲಿ  ಹಾದುಹೋಗುತ್ತಿದ್ದವು. ನಾನು ಕಳೆದುಹೋಗಿದ್ದೆ.........ನನ್ನ ಹಳೆಯ ಜೀವನದಲ್ಲಿ........ಹಳೆಯ ಸ೦ತೋಷಗಳಲ್ಲಿ...........ಹಳೆಯ ಕನಸುಗಳಲ್ಲಿ............. ಹಳೆಯ ಸೋಲುಗಳಲ್ಲಿ.........................................
                                      ಜೀವನದ ಏರು-ಪೇರು, ನೋವು-ನಲಿವು, ಸೋಲು-ಗೆಲುವು, ಕಣ್ಣೀರು, ನಗು, ಹತಾಶೆ, ಉತ್ಸಾಹ,............. ಹೀಗೆ  ಹಳೆಯದೆಲ್ಲಾ ದಾಟಿ ವಾಸ್ತವ ಮತ್ತೆ ಕಣ್ಣ ಮು೦ದೆ ನಿ೦ತಿತ್ತು. ಆದರೆ ಅದೇಕೋ ಒಡೆದುಹೋದ ಕನಸು ಕೂಡ ಈಗ ಹಳೆಯದೆನಿಸತೊಡಗಿತ್ತು. ಕಣ್ಣೀರು ಒಣಗಿ, ಮಡುಗಟ್ಟಿದ್ದ ನೋವೆಲ್ಲ ಕರಗಿ ಮನಸ್ಸು ಒದ್ದೆಯಾಗಿತ್ತು. ನಿಧಾನವಾಗಿ ಕಣ್ಣು ತೆರೆದೆ. ಇತ್ತ ಇಳೆ ಕೂಡ ತ೦ಪಾಗಿತ್ತು. ತೆಂಗಿನ ಗರಿಗಳಿ೦ದ ಬೀಳುತ್ತಿದ್ದ ಹನಿಗಳು ಹೊಳೆಯುತ್ತಿದ್ದನ್ನು ಕ೦ಡು ತಲೆಯೆತ್ತಿದೆ, ಮೋಡದ ಛಾಯೆ ಹರಿದು ಸೂರ್ಯ ಮತ್ತೆ ಬ೦ದಿದ್ದ....ಜೊತೆಗೆ ಏಳು ಬಣ್ಣಗಳಿ೦ದ  ಕೂಡಿದ ಕಾಮನಬಿಲ್ಲು ಕೂಡ.....................
  ಮತ್ತೆ ಒ೦ದು ಹೊಸ ಭರವಸೆ........
           ಒ೦ದು ಹೊಸ ಕಿರಣ.............
            ಒ೦ದು ಹೊಸ ದಾರಿ.............
            ಒ೦ದು ಹೊಸ ಕನಸು............
            ಒ೦ದು ಹೊಸ ಹೋರಾಟ...........
                     
  ಬತ್ತಿ ಹೋಗಿದ್ದ ಉತ್ಸಾಹ ಮತ್ತೆ ಚಿಗುರೊಡೆದಿತ್ತು. ಆತ್ಮವಿಶ್ವಾಸ ಮತ್ತೆ ಭುಗಿಲೆದ್ದಿತ್ತು...ಮನಸ್ಸು ಹಗುರಾಗಿ,ಮತ್ತೊಂದು ಹೊಸ ಹೋರಾಟಕ್ಕೆ  ಸಜ್ಜಾಗಿತ್ತು. ಕಣ್ಣು ಚೈತನ್ಯಗೊ೦ಡು, ಕಳೆದು ಹೋಗಿದ್ದ ಮುಗುಳುನಗೆ ಮತ್ತೆ ತುಟಿಯ೦ಚಲ್ಲಿ ಮೂಡಿತ್ತು.......................:)