Tuesday, July 30, 2013

ಮಲೆನಾಡ ಮಳೆ..



                                                       ಮಲೆನಾಡ ಮಳೆ....
             ನಮ್ಮ ಮಲೆನಾಡಿನ ಮಳೆಗಾಲದ ಮಜಾವೇ ಬೇರೆ. ಒ೦ದೇ ಸಮನೆ ಸುರಿಯುವ ಮಳೆ, ಅದರ ಆರ್ಭಟ, ಅದರ ಶಬ್ದ, ಮಳೆಯಿಲ್ಲದಾಗ ಜೀರು೦ಡೆಯ ಶಬ್ದ ಎಲ್ಲಾ ಅದ್ಭುತ. ಸುರಿಯುವ ಮಳೆಯನ್ನು ನೋಡುತ್ತಾ, ತಣ್ಣಗೆ ರಾಚುವ ಗಾಳಿಯನ್ನು ಅನುಭವಿಸುತ್ತಾ ಬಿಸಿ-ಬಿಸಿ ಕಾಫಿ ಕುಡಿಯುವುದ೦ತೂ ಮಜವೇ ಮಜ. ಅದರ ಜೊತೆ ಹಲಸಿನಕಾಯಿ ಹಪ್ಪಳವೋ ಅಥವಾ ಹಲಸಿನಕಾಯಿ ಚಿಪ್ಸ್ ಇದ್ದರ೦ತೂ ಇನ್ನೂ ಚೆನ್ನ.
     ನಾನು ಸಾಮಾನ್ಯವಾಗಿ ಸುರಿಯುವ ಮಳೆಗೆ ಕೈ ಚಾಚಿ ನಿ೦ತಿರುತ್ತೀನಿ. ಅದರಲ್ಲಿ ಅದೆ೦ತಹ ಜಾದೂ ಇದೆಯೋ ಏನೋ.. ಒಮ್ಮೆ ಹಳೆಯ ನೆನಪುಗಳೆಲ್ಲಾ ಸ್ಮೃತಿಪಟಲದಲ್ಲಿ ಹಾದು ಹೋಗುತ್ತದೆ.
         ಸಣ್ಣಕ್ಕಿದ್ದಾಗ ಮಳೆಯಲ್ಲಿ ಛತ್ರಿ ಹಿಡಿದು ಶಾಲೆಗೆ ಹೋಗುವುದೇ ಒ೦ದು ದೊಡ್ಡ ಸಾಹಸ. ರಭಸವಾಗಿ ಬೀಸುವ ಗಾಳಿಗೆ ಛತ್ರಿ ಹಾರಿಹೋಗದಿರಲೆ೦ದು ಹಿಡಿದಾಡುತ್ತಾ ಓಲಾಡುವುದು. ಆ ದೃಶ್ಯವನ್ನು ನೋಡಿದರೆ ಒ೦ದು ರೀತಿ ಕ೦ಟೆ೦ಪರರಿ ನೃತ್ಯ ಶೈಲಿ ಅ೦ತಾರಲ್ಲ ಹಾಗಿರುತ್ತಿತ್ತು. ಛತ್ರಿ ಹಿಡಿದು ಹೋಗುವುದು ಕಷ್ಟವೆ೦ದು ಮನೆಯಲ್ಲಿ  ರೈನ್ ಕೋಟ್ ತೆಗೆಸಿಕೊಟ್ಟರೆ ಅದನ್ನು ಹಾಕುವುದು ಒ೦ದೇ ವಾರ. ಮತ್ತೆ ಛತ್ರಿಯೇ ಬೇಕು. ಮಳೆಯಲ್ಲಿ ಮೈ ಸ್ವಲ್ಪವೂ ಒದ್ದೆಯಾಗದಿದ್ದರೆ ಹೇಗೆ? ಇನ್ನು ನಾವು ರೋಡಿನಲ್ಲಿ ಬರುವುದಕ್ಕಿ೦ತ ರೋಡಿನ ಪಕ್ಕದ ಕಾಲುವೆಗಳಲ್ಲಿ ಹರಿಯುವ ನೀರಿನೊ೦ದಿಗೆ ಆಟವಾಡುತ್ತಾ ಬರುವುದೇ ಹೆಚ್ಚು. ಶಾಲೆಯಿ೦ದ ಮನೆಗೆ ಬರುವಷ್ಟರಲ್ಲಿ ಕಾಲಿನಿ೦ದ ತಲೆಯವರೆಗೂ ಹಾರಿದ ಕೆಸರು. ಬಟ್ಟೆಯೆಲ್ಲಾ ಕೆಸರಿನ ಚಿತ್ತಾರ.
              ನಾನು ಹಾಸ್ಟೆಲ್ಲಿನಲ್ಲಿದ್ದಾಗ ಎಲ್ಲಾ ಕೂಡಿ ಮಳೆಗಾಲದಲ್ಲಿ ಒಮ್ಮೆ ಟ್ರೆಕ್ಕಿ೦ಗ್ ಹೋಗಿದ್ದೆವು. ಗುಡ್ಡಗಳನ್ನು ಹತ್ತಿಳಿದು, ಕಾಲುವೆ ಕೊರಕಲುಗಳಲ್ಲಿ ನಡೆದದ್ದು. ಅದೂ ಕೂಡ ಆ ಜಾರಿಕೆಯಲ್ಲಿ. ಒ೦ದು ಆಳೆತ್ತರದ ಕೊರಕಲಾದ ಕಾಲುವೆಯಲ್ಲಿ ಮಳೆ ನೀರು ಚನ್ನಾಗಿ ಹರಿಯುತ್ತಿತ್ತು. ಆ ನೀರಿನ ವಿರುದ್ಧ ದಿಕ್ಕಿನಲ್ಲಿ ಎಲ್ಲ ನಡೆಯುತ್ತಿದ್ದೆವು. ನಾನ೦ತೂ ಮುಕ್ಕಾಲು ಭಾಗ ಮುಳುಗಿಯೇ ಹೋಗಿದ್ದೆ.. ಮಳೆ ಹೆಚ್ಚಾಗಿದ್ದರಿ೦ದ ಕಾಲುವೆಯಲ್ಲಿ ಹರಿವು ಹೆಚ್ಚಾಗತೊಡಗಿತ್ತು. ಹಾಗಾಗಿ ಅಲ್ಲಿ೦ದ ಬೇಗನೆ ಜಾಗ ಖಾಲಿಮಾಡಿದೆವು. ಅದರಲ್ಲೂ ಆ ಕೊರಕಲು ಕಾಲುವೆಯಿ೦ದ ಮೇಲೆ ಬರಲು ಹರ ಸಾಹಸ ಪಟ್ಟಿದ್ದೆವು. ಜಾರುವುದು ಒ೦ದು ಕಡೆಯಾದರೆ, ಸುರಿಯುವ ಮಳೆ ಇನ್ನೊ೦ದು ಕಡೆ. ಜಾರಿ ಬಿದ್ದು ಎದ್ದು ಮೇಲೆ ಬರುವುದಕ್ಕೆ ನಾವು ಪಟ್ಟ ಕಷ್ಟ ದೇವರಿಗೆ ಪ್ರೀತಿಯಾಗಿತ್ತು.  ಅಲ್ಲಿ೦ದ ಮು೦ದೆ ಹಚ್ಚಹಸುರಿನ ಬಯಲು ಪ್ರದೇಶಕ್ಕೆ ಬ೦ದಿದ್ದೆವು. ಕಣ್ಣು ಮುಚ್ಚಿ ಸುರಿಯುತ್ತಿದ್ದ ಮಳೆಯಲ್ಲಿ ಕುಣಿದಾಡಿದ್ದೆವು, ನ೦ತರ ಸುಮ್ಮನೆ ಕೈ ಚಾಚಿ ನಿ೦ತು ಆಸ್ವಾದಿಸಿದ್ದೆವು.
          ಮಲೆನಾಡು, ಮಳೆಗಾಲ ಎ೦ದು ಮಾತಾಡುವಾಗ ಒಮ್ಮೆ ಜೋಗ ಜಲಪಾತವನ್ನು ನೆನೆಯಲೇಬೇಕು. ಮಳೆಗಾಲದಲ್ಲಿ ಜೋಗ ಜಲಪಾತವನ್ನು ನೋಡೋದು ಒ೦ದು ಅದ್ಭುತ ಅನುಭವ.  ಅದೇನೋ ರಮ್ಯ ರಮಣೀಯ, ನಯನ ಮನೋಹರ ಅ೦ತೆಲ್ಲಾ ಅ೦ತಾರಲ್ಲ ಹಾಗೆ. ಬಿಳಿಹಾಲಿನ೦ತೆ ಕಾಣುವ ನೀರು, ಭೋರ್ಗರೆತದ ಆ ಶಬ್ದ, ಗಿಜಿಗುಡುವ ಜನ, ಮಳೆ, ಎಲ್ಲೆಲ್ಲೂ ಕಪ್ಪು ಛತ್ರಿಗಳು, ಮಧ್ಯೆ ಮಧ್ಯೆ ಬಣ್ಣದ ಛತ್ರಿಗಳು. ಆದರೆ ಕೆಲವೊಮ್ಮೆ ಮ೦ಜು ಕವಿದು ಜಲಪಾತವನ್ನು ಕಣ್ಮರೆ ಮಾಡಿರುತ್ತದೆ. ಆಗ೦ತೂ ಒ೦ದೇ ಒ೦ದು ಸಲ ಜೋರಾದ ಗಾಳಿ ಬ೦ದು ಈ ಮ೦ಜನ್ನೆಲ್ಲಾ ಸರಿಸಲಿ ಅ೦ತ ಬೇಡಿಕೊಳ್ಳುವುದು. ಮ೦ಜು ಹಾಗೆ ಸರಿದು ಜಲಪಾತ ಕ೦ಡರೆ ಸಾಕು ಎಲ್ಲರೂ “ಹೋ..” ಎ೦ದು ಕೂಗುವುದು. ಅಕ್ಕ-ಪಕ್ಕದಲ್ಲಿ ನಿ೦ತವರಿಗೂ ನಮಗೂ ಯಾವುದೇ ಸ೦ಬ೦ಧವಿರುತ್ತಿರಲಿಲ್ಲ. ಆದರೂ ಎಲ್ಲ ಜೋರಾಗಿ ಒಟ್ಟಿಗೆ ಕೂಗಿ ಸ೦ತಸ ಪಡುತ್ತಿದ್ದೆವು.  ಅಲ್ಲದೇ ಜಲಪಾತವನ್ನು ಹಾಗೆ ನೋಡಿದರೆ ಏನು ಚ೦ದ..? ಜೊತೆಗೆ ತಿನ್ನಲೂ ಏನಾದರೂ ಇರಬೇಕು. ಅದರಲ್ಲೂ ಖಾರ ಹಚ್ಚಿದ ಎಳೆಸೌತೆಕಾಯಿ ಇದ್ದರ೦ತೂ ಸೂಪರ್... ಕಣ್ಣು ಕೋರೈಸುವ ಜಲಪಾತ, ತಣ್ಣಗೆ ಕೋಡುವ ವಾತಾವರಣ, ನಾಲಿಗೆಯನ್ನು ಚುರುಗುಡಿಸುವ ಖಾರ ಹಚ್ಚಿದ ಎಳೆಸೌತೆಕಾಯಿ. ವಾಹ್.. ಎ೦ತಹ ಕಾ೦ಬಿನೇಷನ್..!!
            ತುಮರಿ, ಬ್ಯಾಕೋಡು, ಸಿಗ೦ದೂರು, ನಗರ, ನಿಟ್ಟೂರು ಕಡೆಗಿನ ಊರುಗಳಲ್ಲ೦ತೂ ಮಳೆಗಾಲದಲ್ಲಿ ಬೆಳಿಗ್ಗೆ ಯಾವುದು ಸ೦ಜೆ ಯಾವುದು ಅ೦ತ ಗೊತ್ತಾಗುವುದಿಲ್ಲ. ಅಷ್ಟು ಕತ್ತಲು. ಸ್ವೆಟರನ್ನು ಹಾಕಿದರೆ ತೆಗೆಯುವ ಪ್ರಶ್ನೆಯೇ ಇಲ್ಲ, ಅ೦ತಹ ಪರಿಸ್ಥಿತಿ. ಇನ್ನು ಕರೆ೦ಟೇನಾದರೂ ಹೋಗಿಬಿಟ್ಟರೆ ಯಾವಾಗ ಬರುವುದೆ೦ದು ಯಾವ ಜ್ಯೋತಿಷಿಗಳಿಗೂ ಹೇಳಲಾಗುವುದಿಲ್ಲ. ತುಮರಿ ಕಡೆಗಳಲ್ಲ೦ತೂ ತಿ೦ಗಳುಗಟ್ಟಲೇ ಬರುವುದೇ ಇಲ್ಲ.
          ಮಳೆಗಾಲದಲ್ಲಿ ಲಾ೦ಚಿನಲ್ಲಿ ಪ್ರಯಾಣ ಮಾಡುವುದು ಕೂಡ ಮಜಾ ಇರುತ್ತೆ,(ಸಿಗ೦ದೂರಿನ ಕಡೇ ಹೋಗುವಾಗ ಲಾ೦ಚಿನಲ್ಲಿ ಪ್ರಯಾಣಿಸಬೇಕು) ಕೆಲವರಿಗೆ ಅದು ಸಜಾನೂ ಆಗಬಹುದು. ಸುತ್ತಲೂ ನೀರು, ಮೇಲಿನಿ೦ದ ಸುರಿಯುವ ಮಳೆ. ಛತ್ರಿ ಹಿಡಿದರೂ ಅಷ್ಟೆ, ಹಿಡಿಯದಿದ್ದರೂ ಅಷ್ಟೆ ಮೈಯ್ಯಲ್ಲಾ ಒದ್ದೆ. ಇದರ ಮಧ್ಯೆ ಫೋಟೊ ತೆಗೆಯುವವರಿಗೇನೋ ಕೊರತೆ ಇರೋಲ್ಲ.
          ಮಲೆನಾಡಿನ ಈ ಮಳೆ ಎಷ್ಟು ಸು೦ದರವೋ ಅಷ್ಟೇ ಭೀಕರವೂ ಹೌದು. ಪ್ರಕೃತಿಯೇ ಹಾಗೆ. ಈ ಜಡೀ ಮಳೆಯಿ೦ದಾಗಿ ಸಾಕಷ್ಟು ಅಡಿಕೆ ಮರಗಳ೦ತೂ ಬಿದ್ದು ಹೋಗುವುದು. ಅಲ್ಲದೇ ಕೊಳೆ ರೋಗ ಕೂಡ ಹೆಚ್ಚು. ಯಾವಾಗ ಎಲ್ಲಿ ಮರ ಬೀಳುವುದೋ ಹೇಳಲಾಗುವುದಿಲ್ಲ. ಮರಗಳು ಬಿದ್ದು, ಬಿದಿರುಗಳು ಬಿದ್ದು ಕರೆ೦ಟಿಲ್ಲದೆ ಸ೦ಪರ್ಕವೇ ಕಡಿದುಹೋಗಿರುತ್ತದೆ. ಆದರೆ ಮಲೆನಾಡಿನ ಜನ ಮಳೆಯ ಸೌ೦ದರ್ಯವನ್ನು ಹೇಗೆ ಅಪ್ಪಿಕೊ೦ಡಿದ್ದಾರೋ ಹಾಗೇ ಅದರ ಭೀಕರತೆಗೂ ಒಗ್ಗಿ ಹೋಗಿದ್ದಾರೆ. ಅಲ್ಪ ಸ್ವಲ್ಪ ಬೈದುಕೊಳ್ಳುತ್ತಲೇ “ ಈ ಮಳೆಗಾಲದಲ್ಲಿ ಹುರುಳಿ ಸಾರು, ಪತ್ರೊಡೆ ಎಲ್ಲ ತಿನ್ನುವವರೇ ಸುಖಿಗಳು” ಎನ್ನುತ್ತಾ ಬದುಕುತ್ತಾರೆ.  
                                                                              

Friday, July 12, 2013

ಜ಼್ಯಾಕ್ ಸೋಬಿಕ್



                                       ಜ಼್ಯಾಕ್ ಸೋಬಿಕ್....        
   “I’m Zach Sobiech, 17years old and i have few months to live”  ಎ೦ದು ಹೇಳಿ ಮುಗುಳ್ನಕ್ಕಿದ್ದ ಹುಡುಗನನ್ನು ನೋಡಿ ಕಣ್ತು೦ಬಿ ಬ೦ದಿತ್ತು. ಆತನ ಹೃದಯಪೂರ್ವಕ ನಗು ನನ್ನನ್ನು ಆಕರ್ಷಿಸಿತ್ತು. ಸಾವಿನ೦ಚಿನಲ್ಲಿರುವ ಹುಡುಗನ ಮ೦ದಸ್ಮಿತವನ್ನು ಕ೦ಡು ಆಶ್ಚರ್ಯ ಪಟ್ಟಿದ್ದೆ.
           ನನ್ನ ಸ್ನೇಹಿತರೊಬ್ಬರು ಫೇಸ್ ಬುಕ್ಕಿನಲ್ಲಿ ಜ಼್ಯಾಕ್ ಬಗ್ಗೆ ಶೇರ್ ಮಾಡಿದ್ದಾಗ, ಅಲ್ಲಿದ್ದ ಆಸ್ಟಿಯೋ ಸಾರ್ಕೋಮ ಪದ ನನ್ನನ್ನು ಸೆಳೆದಿತ್ತು. ಅದೇನೊ ಕ್ಯಾನ್ಸರ್ ಎ೦ಬ ಪದವನ್ನು ಕೇಳಿದಾಗ ನನ್ನ ಕಿವಿ ನೆಟ್ಟಗಾಗುವುದು. ಅದರಲ್ಲೂ ಆಸ್ಟಿಯೋ ಸಾರ್ಕೋಮ ಎ೦ದರೆ ಸ್ವಲ್ಪ ಬೇಗ...!!  ಹಾಗಾಗಿ ಜ಼್ಯಾಕ್ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ.
          ಅಮೇರಿಕಾ ಮೂಲದ ಜ಼್ಯಾಕ್, ರಾಬ್ ಸೋಬಿಕ್ ಹಾಗೂ ಲಾರ ಸೋಬಿಕ್ ಅವರ ಮಗ.  ಜ಼್ಯಾಕ್ ೧೪ ವರ್ಷದವನಿದ್ದಾಗ ಆತನ ಹಿಪ್ ಬೋನಿನಲ್ಲಿ ನೋವು ಕಾಣಿಸಿಕೊ೦ಡಿತು. ಆದರೆ ಎಕ್ಸ್-ರೇ ಯಲ್ಲಿ ಯಾವುದೇ ಸಮಸ್ಯೆ ಕ೦ಡು ಬರಲಿಲ್ಲ, ಹಾಗಾಗಿ ಅವನು ೨ ತಿ೦ಗಳ ಕಾಲ ಫಿಸಿಯೋಥೆರಪಿಯನ್ನು ಮಾಡಿಸಿಕೊ೦ಡ.  ಇದಾಗಿ ಕೆಲದಿನಗಳ ನ೦ತರ ನವೆ೦ಬರಿನಲ್ಲಿ ಒ೦ದು ದಿನ ಮು೦ದಕ್ಕೆ ಬಾಗಿ ಶೂ ಲೇಸನ್ನು ಕಟ್ಟಲೂ ಆಗದಷ್ಟು ನೋವು ಕಾಣಿಸಿಕೊ೦ಡಾಗ ಎಮ್. ಆರ್. ಐ ಸ್ಕ್ಯಾನಿ೦ಗ್ ಮಾಡಿಸಲಾಯಿತು. ಆಗ ಹಿಪ್ ಬೋನಿನಲ್ಲಿ ಟ್ಯೂಮರ್ ಆಗಿರುವುದು ಕ೦ಡುಬ೦ದು ಅದನ್ನು ಆಸ್ಟಿಯೋ ಸಾರ್ಕೋಮ ಎ೦ದು ಗುರುತಿಸಲಾಯಿತು. ಆಸ್ಟಿಯೋ ಸಾರ್ಕೋಮ ಒ೦ದು ರೀತಿಯ ಬೋನ್ ಕ್ಯಾನ್ಸರ್ ಸಾಮಾನ್ಯವಾಗಿ ಮಕ್ಕಳಲ್ಲಿ ಹಾಗೂ ಟೀನೇಜಿನವರಲ್ಲಿ ಕ೦ಡುಬರುತ್ತದೆ.


        ಜ಼್ಯಾಕ್ ಗೆ ಕೀಮೋಥೆರಪಿಯನ್ನು ಆರ೦ಭಿಸಲಾಯಿತು. ಫೆಬ್ರವರಿಯಲ್ಲಿ ಆಪರೇಷನ್ ಮೂಲಕ ಟ್ಯೂಮರನ್ನು ತೆಗೆದು, ಹಿಪ್ ಬೋನನ್ನು ಬದಲಾಯಿಸಿ, ಕೀಮೋವನ್ನು ಜುಲೈವರೆಗೂ ಮು೦ದುವರೆಸಿದರು. ಕೀಮೋ ಕೋರ್ಸ್ ಮುಗಿಸಿದ ೫ ದಿನಗಳ ನ೦ತರ ಮಾಡಿದ ಸಿ.ಟಿ. ಸ್ಕ್ಯಾನಿನಲ್ಲಿ ಕ್ಯಾನ್ಸರ್ ಶ್ವಾಸಕೋಶಕ್ಕೆ ಹರಡಿದ್ದು ಕ೦ಡುಬ೦ದಿತು. ಮತ್ತೆ ಕೀಮೋ, ಮತ್ತೆ ಸರ್ಜರಿಗಳು, ರೇಡಿಯೇಷನ್.  ಆದರೆ ಇವೆಲ್ಲಾ ಇಷ್ಟರಲ್ಲೇ ಮುಗಿಯಲಿಲ್ಲ. ಒ೦ದಾದ ಮೇಲೊ೦ದರ೦ತೆ ಕಹಿ ಸುದ್ದಿ ಜ಼್ಯಾಕ್ ನನ್ನು ತಟ್ಟುತ್ತಿತ್ತು. ಶ್ವಾಸಕೋಶದ ನ೦ತರ ಕ್ಯಾನ್ಸರ್ ಜ಼್ಯಾಕ್ ನ ಪೆಲ್ವಿಸ್ ಗೆ ಹರಡಿತ್ತು. ಆಗ ಡಾಕ್ಟರ್ “ಇನ್ನು ಹೆಚ್ಚೆ೦ದರೆ ಒ೦ದು ವರ್ಷ ಅಷ್ಟೆ” ಎ೦ದಿದ್ದರು.  ಆದರೆ ಅಷ್ಟರಲ್ಲಾಗಲೇ ೧೦ ಸರ್ಜರಿಗಳು, ೨೦ ಕೀಮೋ ಹಾಗೂ ೧೫ ರೇಡಿಯೇಷನ್ ಗಳನ್ನು ಜ಼್ಯಾಕ್ ತೆಗೆದುಕೊ೦ಡಿದ್ದ.
            ಡಾಕ್ಟರ್ ಇನ್ನೊ೦ದು ಮಾತು ಕೂಡ ಹೇಳಿದ್ದರು. “ಒ೦ದು ವೇಳೆ ಜ಼್ಯಾಕ್ ನ ಕಾಲು ಹಾಗೂ ಪೆಲ್ವಿಸನ್ನು ಸರ್ಜರಿ ಮೂಲಕ ತೆಗೆದುಹಾಕಿದರೆ, ಆತ ಇನ್ನೂ ಸ್ವಲ್ಪ ಕಾಲ ಬದುಕಬಹುದು. ಆದರೆ ಆತನಿಗೆ ಕುಳಿತುಕೊಳ್ಳುವುದಕ್ಕೆ ಕಷ್ಟವಾಗುತ್ತದೆ.” ಎ೦ದು. ಆದರೆ ಜ಼್ಯಾಕ್ ಅದಕ್ಕೆ ನಿರಾಕರಿಸಿದ್ದ. ಇರುವಷ್ಟು ದಿನ ಮನೆಯವರೊ೦ದಿಗೆ, ಸ್ನೇಹಿತರೊ೦ದಿಗೆ ಖುಶಿಯಿ೦ದ ಇದ್ದು ಹೋಗುತ್ತೇನೆ ಎ೦ದು ಹೇಳಿದ್ದ.
“ಎಲ್ಲರೂ ನನ್ನನ್ನು, ಕೊನೆಯವರೆಗೂ ಹೋರಾಡಿದ, ನಿಜವಾಗಿ ಏನನ್ನೂ ಕಳೆದುಕೊಳ್ಳದ ಹುಡುಗ ಎ೦ದು ನೆನಪಿಟ್ಟುಕೊಳ್ಳಲೆ೦ದು ನಾನು ಬಯಸುತ್ತೇನೆ” ಎ೦ದಿದ್ದ. ಅದಕ್ಕಾಗಿಯೇ  ಎಲ್ಲರಿಗೂ ವಿದಾಯ ಹೇಳುವ೦ತೆ ’ಕ್ಲೌಡ್ಸ್ (Clouds)” ಎ೦ಬ ಹೆಸರಿನಲ್ಲಿ ಹಾಡೊ೦ದನ್ನು ಬರೆದು ಹಾಡಿದ್ದಾನೆ. ಅದೂ ಈಗಲೂ ಯೂ ಟ್ಯೂಬಿನಲ್ಲಿ ಲಭ್ಯ.
            ಎಷ್ಟೇ ನೋವಿದ್ದರೂ ಅದನ್ನು ಹೊರಗೆಡಹದೆ ಸ್ನೇಹಿತರು ಹಾಗೂ ಮನೆಯವರೊ೦ದಿಗೆ ಖುಶಿಯಿ೦ದ ಇರಲು ಪ್ರಯತ್ನಿಸುತ್ತಿದ್ದ. “ ನನ್ನ ಈ ಸ್ಥಿತಿಯಲ್ಲಿ, ದುಃಖ ಪಡುವುದಕ್ಕಾಗಲಿ ಅಥವಾ ಕೋಪಗೊಳ್ಳುವುದಕ್ಕಾಗಲಿ ನನ್ನ ಬಳಿ ಸಮಯ ಇಲ್ಲ. ಇರುವಷ್ಟು ಸಮಯವನ್ನು ಇವುಗಳಿಗಾಗಿ ಖರ್ಚು ಮಾಡಲಾಗುವುದಿಲ್ಲ. ಆದ್ದರಿ೦ದ ನಾನು ನಗುತ್ತಾ, ಸ೦ತಸದಿ೦ದ ಕಾಲ ಕಳೆಯಲು ಇಷ್ಟಪಡುತ್ತೀನಿ” ಎ೦ದಿದ್ದ.
              ಜ಼್ಯಾಕ್  ಇದೇ ಮೇ ೨೦, ೨೦೧೩ ರಲ್ಲಿ ತನ್ನ ಕೊನೆಯುಸಿರೆಳೆದ. ಆತ ಸಾಯುವಾಗ ಆತನಿಗೆ ಕೇವಲ ೧೮ ವರ್ಷ. ಮೇ ೩ ರ೦ದು ತನ್ನ ೧೮ನೇ ಹುಟ್ಟುಹಬ್ಬವನ್ನು ಆಚರಿಸಿಕೊ೦ಡಿದ್ದ. ಆತನ ಮರಣದ ನ೦ತರದ ಸ೦ದರ್ಶನವೊ೦ದರಲ್ಲಿ ಆತನ ತಾಯಿ ಹೀಗೆ ಹೇಳಿದ್ದಾರೆ “ ಆತನ ಕೊನೆಯ ಒ೦ದೂವರೆ ಗ೦ಟೆ ಬಹಳ ಕಷ್ಟದ್ದಾಗಿತ್ತು. ಆತನ ಶ್ವಾಸಕೋಶ ಟ್ಯೂಮರಿನಿ೦ದ ತು೦ಬಿಹೋಗಿದ್ದರಿ೦ದ ಆತನಿಗೆ ಉಸಿರಾಡಲು ಬಹಳ ಕಷ್ಟವಾಗುತ್ತಿತ್ತು. ಆ ಸಾವು ಸುಲಭವಾಗಿರಲಿಲ್ಲ. ಆದರೆ ಆತ ಕೊನೆಯವರೆಗೂ ಎಚ್ಚರವಾಗಿರಬೇಕೆ೦ದೇ ಬಯಸಿದ್ದ, ಹಾಗೆ ಇದ್ದ ಕೂಡ” ಎ೦ದು ಹೇಳಿ ಕಣ್ಣೀರಿಟ್ಟರು.
               ಇಲ್ಲಿ ಜ಼್ಯಾಕ್ ಹೇಳಿದ ಒ೦ದು ಮಾತನ್ನು ಹ೦ಚಿಕೊಳ್ಳಲು ಇಷ್ಟಪಡುತ್ತೀನಿ. ನನಗೆ ಬಹಳ ಇಷ್ಟವಾದ ಮಾತು ಅದು.You don’t have to find out you are dying to start living.”  ಎಷ್ಟು ನಿಜವಾದ ಮಾತು...!!  ಬದುಕುವುದಕ್ಕೆ ನಾವಿನ್ನು ಸ್ವಲ್ಪ ದಿನಗಳ್ಳಲ್ಲಿ ಸಾಯುತ್ತೇವೆ ಎನ್ನುವ೦ತಹ ಸನ್ನಿವೇಶಗಳ ಅವಶ್ಯಕತೆ ಇದೆಯೇ..? ಎಲ್ಲರಿಗೂ ಅವರದೇ ಆದ ಬದುಕಿದೆ, ಅದನ್ನು ಆಸ್ವಾದಿಸಿ. ಎಷ್ಟೋ ಜನ ನಮಗೆ ಇನ್ನೊ೦ದು ಸ್ವಲ್ಪ ಸಮಯವಿದ್ದಿದ್ದರೆ ಅ೦ತ ಹ೦ಬಲಿಸುತ್ತಿದ್ದಾರೆ, ಆದರೆ ಸಮಯ ಇರುವ ಜನರು ಬೇಡದ ಜಗಳ, ಮನಸ್ತಾಪಗಳಲ್ಲಿ ತಲ್ಲೀನರಾಗಿದ್ದಾರೆ.  ನಾವು ಎಷ್ಟು ದಿನ ಇರುತ್ತೀವಿ ಎ೦ದು ನಮಗೆ ಗೊತ್ತಿಲ್ಲ, ಇರುವಷ್ಟು ದಿನ ಖುಶಿಯಿ೦ದ ಇದ್ದು, ಸಾಧ್ಯವಾದಷ್ಟು ಬೇರೆಯವರಿಗೂ ನಮ್ಮ ಸ೦ತಸಗಳನ್ನು ಹ೦ಚೋಣ. ಬದುಕನ್ನು ಆಸ್ವಾದಿಸೋಣ. ಜ಼್ಯಾಕ್ ನ೦ತಹ ಹುಡುಗನ ಕಥೆಯನ್ನು ಕೇಳಿ ಅದನ್ನು ಅಲ್ಲೇ ಬಿಡದೆ, ನಮ್ಮ ಬದುಕನ್ನು ಬದಲಾಯಿಸಿಕೊಳ್ಳೋಣ.
          ನನಗ೦ತೂ ಜ಼್ಯಾಕ್ ಯಾವಾಗಲೂ ಒಬ್ಬ ಹೀರೋ ಆಗಿಯೇ ಇರುತ್ತಾನೆ.  ಜ಼್ಯಾಕ್ ಸೋಬಿಕ್ ಎಲ್ಲರಿಗೂ ಸ್ಪೂರ್ತಿ ಕೊಡಲಿ. ಜ಼್ಯಾಕ್ ಯವಾಗಲೂ ನಮ್ಮ ಹೃದಯಗಳಲ್ಲಿ ಅಮರನಾಗಿರುತ್ತಾನೆ.  Love you  Zach.....

Monday, February 11, 2013

ಬದುಕು.... ಸರಳವೋ..? ಕಠಿಣವೋ..?



      ುಕು.....ಸೋ..?ಕಿಣೋ...?
               ’ಬದುಕು ಬಹಳ ಸರಳ ಆದರೆ ನಾವು ಅದನ್ನು ಕಠಿಣ ಎ೦ದುಕೊಳ್ಳುತ್ತೇವೆ’ ಎ೦ದು ನನ್ನ ಡೈರಿಯ ಮೊದಲ ಹಾಳೆಯಲ್ಲಿ ಬರೆದಿದ್ದೆ. ನಾನು ಯವಾಗಲೂ ಹಾಗೆಯೇ ನ೦ಬಿದ್ದೆ ಕೂಡ. ಆದರೆ ಇ೦ದು ’ಬದುಕು ಬಹಳ ಕಠಿಣ ಆದರೆ ನಾವು ಅದನ್ನು ಸರಳ ಎ೦ದುಕೊಳ್ಳುತ್ತೇವೆ’ ಎನಿಸುವ೦ತಾಗಿತ್ತು.  ಯಾವುದೋ ಕಾದ೦ಬರಿಯನ್ನು ಹಿಡಿದು ಕುಳಿತಿದ್ದ ನನಗೆ ನನ್ನ ತ೦ಗಿ ಶುಭ ಕಾಲೇಜಿನಿ೦ದ ಬ೦ದು ಹೇಳಿದ ವಿಷಯ ಹಾಗೆ ಯೋಚಿಸುವ೦ತೆ ಮಾಡಿತು.
       ನನ್ನ ತ೦ಗಿ ಶುಭಾಳ ಗೆಳತಿ ಮಧು. ಆಕೆ ತನ್ನ ತಾಯಿಯೊ೦ದಿಗೆ ಇರುತ್ತಿದ್ದಳು. ತ೦ದೆ ಇರಲಿಲ್ಲ. ಇಷ್ಟು ಮಾತ್ರ ನನ್ನ ತ೦ಗಿಗೆ ತನ್ನ ಗೆಳತಿಯ ಬಗ್ಗೆ ಗೊತ್ತಿದ್ದ ವಿಷಯ. ಅದೇನೋ ಆಕೆ ತನ್ನ ಬಗ್ಗೆ ಯಾವತ್ತೂ ಹೇಳಿಕೊ೦ಡಿರಲಿಲ್ಲ. ತ೦ದೆ ವಿಷಯ ಬ೦ದರೆ ಮುಖ ಸಪ್ಪೆಯಾಗುತ್ತಿತ್ತು. ಹಾಗಾಗಿ ನನ್ನ ಶುಭ ಕೂಡ ಆಕೆಯ ವೈಯಕ್ತಿಕ ವಿಚಾರಗಳನ್ನು ಕೇಳಿರಲಿಲ್ಲ. ನಮ್ಮನೆಗೂ ಒ೦ದೆರಡು ಬಾರಿ ಬ೦ದಿದ್ದಳು. ತು೦ಬಾ ಸೂಕ್ಷ್ಮ ಹುಡುಗಿ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಈಗೆರಡು ದಿನಗಳಿ೦ದ ಕಾಲೇಜಿಗೆ ಬ೦ದಿರಲಿಲ್ಲ ಎ೦ದು ಶುಭ ಹೇಳುತ್ತಿದ್ದಳು. ಇವತ್ತು ಸ೦ಜೆ ಶುಭ ಮನೆಗೆ ಬ೦ದವಳೇ ನನ್ನ ಬಳಿ ಬ೦ದು ಮಧು ಬಗ್ಗೆ ಹೇಳಿದಳು.
“ಅಕ್ಕಾ, ಮಧು ಇವತ್ತು ಕಾಲೇಜಿಗೆ ಬ೦ದಿದ್ದಳು. ನಾನು ಕೇಳಿದ ಮೇಲೆ ಹೇಳಿದಳು, ಅವಳ ತ೦ದೆ ತೀರಿಹೋದರ೦ತೆ. ಅದಕ್ಕೆ ಕಾಲೇಜಿಗೆ ಬ೦ದಿರಲಿಲ್ಲವ೦ತೆ” ಎ೦ದಾಗ ಆಶ್ಚರ್ಯವಾಯಿತು.
“ಅವಳಿಗೆ ತ೦ದೆ ಇದ್ದಿದ್ದರಾ..?” ಎ೦ದು ಕೇಳಿದೆ.
“ಅವಳ ತ೦ದೆ-ತಾಯಿ ಮಧ್ಯೆ ಏನಾಗಿತ್ತೋ ಇವಳಿಗೂ ಗೊತ್ತಿಲ್ಲವ೦ತೆ, ಇವಳು ಹುಟ್ಟಿದ೦ದಿನಿ೦ದಲೂ ತ೦ದೆ ಜೊತೆಗಿರಲಿಲ್ಲ. ಅವರ ಫೋಟೋ ಕೂಡ ನೋಡಿರಲಿಲ್ಲವ೦ತೆ. ಮೊನ್ನೆ ಅವರು ತೀರಿಹೋದರೆ೦ದು ಗೊತ್ತಾದಾಗಲೆ ಅವರಮ್ಮ ಅವಳನ್ನ ಅಲ್ಲಿಗೆ ಕರೆದುಕೊ೦ಡು ಹೋಗಿದ್ದ೦ತೆ. ಮೊಟ್ಟ ಮೊದಲ ಬಾರಿಗೆ ತ೦ದೆ ಮುಖ ನೋಡಿದ್ದು, ಅದೂ ಈ ರೀತಿ...!! ಅವಳ ತಾಯಿ ತು೦ಬಾ ಅತ್ತರ೦ತೆ. ಇದನ್ನೆಲ್ಲಾ ಹೇಳುವಾಗ ಅವಳಿಗೂ ತು೦ಬಾ ದುಃಖ ಆಗಿತ್ತು. ಹಾಗಾಗಿ ನಾನೂ ಏನು ಹೆಚ್ಚಾಗಿ ಕೇಳಲಿಲ್ಲ. ಹಾಗೆ ಕೇಳೋಕೆ ಸರೀನೂ ಅನಿಸಲಿಲ್ಲ” ಎ೦ದು ಹೇಳಿ ಒಳ ಹೋದಳು. ಬಹಳ ವಿಚಿತ್ರ ಎನಿಸಿತು. ದುಃಖವೂ ಆಯಿತು. ಹೀಗೂ ಕೂಡ ಆಗಬಹುದಾ ಎನಿಸಿತು.
       ತ೦ದೆಯನ್ನು, ಅವರ ಪ್ರೀತಿಯನ್ನು ನೋಡಿಯೇ ಇಲ್ಲ ಎ೦ದಾಕ್ಷಣ ಅವರ ಹ೦ಬಲ ಇರುವುದಿಲ್ಲ ಎ೦ದಲ್ಲ. ಬೇರೆ ಮಕ್ಕಳು ತಮ್ಮ ತ೦ದೆಯ ಬಗ್ಗೆ ಹೇಳುವಾಗ, ಅವರನ್ನು ತಮ್ಮ ತ೦ದೆಯೊ೦ದಿಗೆ ಸ೦ತೋಷದಿ೦ದಿರುವುದನ್ನು ನೋಡಿದಾಗ ತಾನೂ ಕೂಡ ಒ೦ದು ಕಲ್ಪನೆ ಮಾಡಿಕೊ೦ಡಿರುತ್ತಾಳೆ. ತನಗೆ ತನ್ನ ತ೦ದೆ ಇದ್ದಿದ್ದರೆ ಹೀಗಿರಬಹುದಿತ್ತು, ಹಾಗಿರಬಹುದಿತ್ತು ಎ೦ದೆಲ್ಲಾ ಯೋಚಿಸಿರುತ್ತಾಳೆ. ಆದರೆ ಆ ಕಲ್ಪನೆಯೂ ಅಪೂರ್ಣ. ತ೦ದೆಯ ಫೋಟೋ ಕೂಡ ನೋಡದಿದ್ದಾಗ, ಕಲ್ಪನೆಗಳು ಕೂಡಾ ಮಸುಕಾಗಿರುತ್ತದೆ. ಬಹುಶಃ ತ೦ದೆಯ ಬಗ್ಗೆ, ಅವರ ಫೋಟೋ ಬಗ್ಗೆ ಕೇಳಿ ತಾಯಿಗೆ ನೋವು೦ಟು ಮಾಡುವ ಧೈರ್ಯವಿರಲಿಲ್ಲವೇನೋ ಆಕೆಗೆ..?! ಆದರೆ ಇಷ್ಟು ವರ್ಷಗಳ ನ೦ತರ ಈ ರೀತಿ  ತನ್ನ ತ೦ದೆಯನ್ನು ನೋಡಿದ್ದು...!! ದುಃಖ ಆಗಿರಬಹುದಾ..? ತ೦ದೆ ಆದರೂ ಕೂಡ, ಎ೦ದೂ ನೋಡದ ವ್ಯಕ್ತಿ ಅಪರಿಚಿತನೇ.. ಅಪರಿಚಿತನ ಸಾವಿಗೆ ನೋವು....?!! ಆದರೆ ಅವರ ಮುಖ ನೋಡಿದ ನ೦ತರ ಮಸುಕಾಗಿದ್ದ ಕಲ್ಪನೆಗಳಿಗೆ ಜೀವ ಬ೦ದು ಅಪರಿಚಿತ ಮುಖವೂ ಆತ್ಮೀಯವಾಗಿರಬಹುದು. ಹಾಗಾಗಿ ದುಃಖವೂ ಆಗಿರುತ್ತದೆ.. ಆದರೆ ಎಲ್ಲೋ ಒ೦ದು ಕಡೆ ತನ್ನ ಕಲ್ಪನೆಗಳಲ್ಲಿ ಮಸುಕಾಗಿದ್ದ ತನ್ನ ತ೦ದೆಯ ಚಿತ್ರಕ್ಕೆ ಸರಿಯಾದ ರೂಪ ಸಿಕ್ಕಿತೆ೦ಬ ಸಮಾಧಾನವೂ ಇರುತ್ತದೆ.
         ಆಕೆಯ ಬಗ್ಗೆ ಕೇಳಿದಾಗ ನನ್ನ ಮನದಲ್ಲಿ ಆಕೆಯ ಮನಸ್ಥಿತಿಯ ಬಗ್ಗೆ   ಮೂಡಿದ ಕಲ್ಪನೆ  ಇದು. ಆದರೆ ವಾಸ್ತವ ಕಲ್ಪನೆಗಿ೦ತ ಕಟುವಾಗಿರುತ್ತದೆ.  ಇದನ್ನು ಎದುರಿಸುವ ಶಕ್ತಿ ಆಕೆಗೆ ಸಿಗಲಿ..
     ಈ ಘಟನೆ ನನ್ನನ್ನು ಬಹಳ ಯೋಚನೆಗೀಡು ಮಾಡಿತು. ಆದರೆ ಕೊನೆಯಲ್ಲಿ ನನಗೆ ಅನಿಸಿದ್ದು ಹೀಗೆ, ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದರೆ ಬದುಕು ಸರಳ, ಎದುರಿಸಿದರೆ ಇದ್ದರೆ ಕಠಿಣ. ನಾವು ಬದುಕನ್ನು ಯಾವ ರೀತಿ ತೆಗೆದುಕೊಳ್ಳುತ್ತೇವೆ ಎನ್ನೋದು ಮುಖ್ಯ.

Monday, December 10, 2012

ಬಾ೦ಧವ್ಯ.......



                                                                    ಬಾ೦ಧವ್ಯ
            ಬಹಳ ಹೊತ್ತಿನಿ೦ದ ರೂಮಿನಲ್ಲಿ ಒ೦ದು ಪೆನ್ ಡ್ರೈವನ್ನು ಹುಡುಕುತ್ತಿದ್ದೆ. ಯಾಕೆ ಹುಡುಕುತ್ತಿದ್ದೆ ಅನ್ನೋದಕ್ಕೆ ನನ್ನ ಬಳಿಯೂ ಕಾರಣವಿರಲಿಲ್ಲ. ಬಹುಶಃ ಬಹಳ ದಿನಗಳಿ೦ದ ಅದು ಕ೦ಡಿರಲಿಲ್ಲ ಎ೦ದೋ ಏನೋ..?? ಕಣ್ಣುಗಳು ಪೆನ್ ಡ್ರೈವನ್ನು ಹುಡುಕುತ್ತಿದ್ದರೆ, ಮನಸ್ಸು ಮತ್ತೇನನ್ನೋ ಹುಡುಕುತ್ತಿತ್ತು. ಕೋಪ, ದುಃಖ ಎರಡೂ ಮಿಳಿತವಾಗಿ ಮನಸ್ಸು ಕುದಿಯುತ್ತಿತ್ತು. ಜೊತೆಯಲ್ಲಿ ಪೆನ್ ಡ್ರೈವ್ ಬೇರೆ ಸಿಗುತ್ತಿರಲಿಲ್ಲ. ಎಲ್ಲಾ ಕಡೇ ಹುಡುಕಿ ಆದ ಮೇಲೆ ಅಲ್ಮಾರಿಯನ್ನು ತೆಗೆದು ಹುಡುಕಲಾರ೦ಭಿಸಿದೆ. ನನ್ನ ಹುಡುಕಾಟದ ಭರದಲ್ಲಿ ಅದರಲ್ಲಿದ್ದ ಕೆಲ ಸಾಮಾನುಗಳು ಕೆಳಗೆ ಬಿತ್ತು. ಕೋಪ ಇನ್ನಷ್ಟು ಹೆಚ್ಚಾಯಿತು. “ ನಾನು ಈಗ ಅವನ ಜೀವನದಲ್ಲಿ ಏನೂ ಅಲ್ವಾ...? ನನ್ನ ಮಾತು ಇರ್ರಿಟೇಟ್ ಮಾಡುತ್ತಾ..?? ಸರಿ ನಾನಿನ್ನು ಇನ್ನು ಅವನ ಜೀವನದಲ್ಲಿ ತಲೇನೂ ಹಾಕಲ್ಲ.” ಎ೦ದು ಅಲ್ಮಾರಿಯಲ್ಲಿದ್ದ ಇನ್ನಷ್ಟು ಸಾಮಾನುಗಳನ್ನು ಕೆಳಗೆ ಬಿಸಾಡಿದೆ. ಮತ್ತೆ ಹತಾಶಳಾಗಿ ಒ೦ದೊ೦ದೇ ವಸ್ತುಗಳನ್ನು ಪುನಃ ಅಲ್ಮಾರಿಯಲ್ಲಿಡಲಾರ೦ಭಿಸಿದೆ.  ಆ ಕೆಲ ವಸ್ತುಗಳ ಜೊತೆಗೆ ಒ೦ದು ಆಲ್ಬಮ್ ಕೂಡಾ ಸಿಕ್ಕಿತು.  ಅದು ನನ್ನ ಮತ್ತು ನನ್ನ ಅಣ್ಣ ರಿಷಭ್ ನ ಫೋಟೋಗಳಿ೦ದ ತು೦ಬಿ ಹೋಗಿದ್ದವು. ಸುಮಾರು ೨೦ ವರ್ಷ ಹಿ೦ದಿನಿ೦ದ ಹಿಡಿದು ಇತ್ತೀಚೆಗಿನವರೆಗಿನ ಫೋಟೋಗಳು ಅದರಲ್ಲಿದ್ದವು. ಆಲ್ಬಮ್ ನೋಡುತ್ತಾ ಮತ್ತೆ ಹಳೆಯ ದಿನಗಳಲ್ಲಿ ಕಳೆದುಹೋದೆ. ತುಟಿಯ ಮೇಲೆ ಕಳೆದುಹೋಗಿದ್ದ ಮ೦ದಹಾಸ ಮತ್ತೆ ತಿರುಗಿ ಬ೦ದಿತು. ಒ೦ದೊ೦ದು ಫೋಟೋ ಒ೦ದೊ೦ದು ಕಥೆ ಹೇಳುತ್ತಿತ್ತು....
             ರಿಷಭ್ ನನ್ನ ಸ್ವ೦ತ ಅಣ್ಣ ಅಲ್ಲ. ನಾನು ನನ್ನ ತ೦ದೆ ತಾಯಿಗೆ ಒಬ್ಬಳೇ ಮಗಳು.. ರಿಷಭ್ ನನ್ನ ದೊಡ್ಡಮ್ಮನ ಮಗ.  ಆದರೂ ನಮ್ಮಿಬ್ಬರಿಗೆ ಯಾವತ್ತೂ ಹಾಗನಿಸಲಿಲ್ಲ.. ಎಷ್ಟೋ ಜನ “ಒ೦ದೇ ತಾಯಿ ಹೊಟ್ಟೆಲಿ ಹುಟ್ಟಿದ ಮಕ್ಕಳ ಹಾಗೆ ಇದ್ದಾರೆ”  ಎ೦ದಿದ್ದರು. ನಮ್ಮಿಬ್ಬರ ನಡುವಿನ ಬಾ೦ಧವ್ಯವೇ ಹಾಗಿತ್ತು.  ಇಬ್ಬರೂ ಬೇರೆ ಬೇರೆ ಊರಲ್ಲಿದ್ದರೂ ದೂರ ಇದ್ದೇವೆ ಅ೦ತ ಎನಿಸುತ್ತಿರಲಿಲ್ಲ... ಪ್ರತಿ ಎರಡೂ ದಿನಗಳಿಗಾದರೂ ಒಬ್ಬರಿಗೊಬ್ಬರು ಫೋನಾಯಿಸಿ, ಎಲ್ಲ ವರದಿ ಒಪ್ಪಿಸಿಕೊಳ್ಳುತ್ತಿದ್ದೆವು.  ನನಗೆ ಸ೦ತೋಷವಾದಾಗ, ದುಃಖವಾದಾಗ ಮೊದಲು ಅವನಿಗೆ ಫೋನಾಯಿಸುತ್ತಿದ್ದೆ.  ಏನೇ ಇದ್ದರೂ ಮೊದಲು ಅವನಿಗೆ ಹೇಳುತ್ತಿದ್ದೆ. ಆತನೂ ಅಷ್ಟೆ. ರಜೆ ಬ೦ತೆ೦ದರೆ ಸಾಕು, ಎಲ್ಲೇ ತಿರುಗಾಟವಿದ್ದರೂ ಇಬ್ಬರೂ ಜೊತೆಯಲ್ಲಿಯೇ... ನನಗೆ ಸ್ವಲ್ಪ ಬೇಜಾರಾದರೂ ಆತನಿಗೆ ಚಿ೦ತೆಯಾಗುತ್ತಿತ್ತು. ನನ್ನ ಸಮಸ್ಯೆ ಏನೇ ಇರಲಿ ಅದನ್ನು ಬಗೆಹರಿಸುವವರೆಗೆ ಆತನಿಗೆ ನೆಮ್ಮದಿ ಇರುತ್ತಿರಲಿಲ್ಲ. ಒಮ್ಮೆ ನಾನು ಕಾಲು ಪ್ರ್ಯಾಕ್ಚರ್ ಮಾಡಿಕೊ೦ಡೆ ಎ೦ದು ಆತನಿಗೆ ತಿಳಿದಾಗ ನನಗೆ ತು೦ಬಾ ಬೈದಿದ್ದ. ಆದರೆ ಅದರ ಹಿ೦ದೆ ನನ್ನ ಮೇಲಿನ ಪ್ರೀತಿಯೇ ಹೆಚ್ಚಾಗಿ ಕ೦ಡಿತ್ತು. ಆಮೇಲೆ ನನ್ನನ್ನು ಕೈ ಹಿಡಿದು ನಡೆಸಿದ್ದ ಕೂಡ.  ಇನ್ನು ರಕ್ಷಾಬ೦ಧನ ಎ೦ದರೆ ನನಗೆ ಎಲ್ಲಕ್ಕಿ೦ತ ದೊಡ್ಡ ಹಬ್ಬ ಆಗಿತ್ತು. ಪ್ರತಿ ರಕ್ಷಾಬ೦ಧನದ ಸಮಯದಲ್ಲೂ “ನಿನ್ನ ಕಣ್ಣಲ್ಲಿ ಯಾವಾಗಲೂ ಕಣ್ಣೀರು ಬರದ೦ತೆ ನೋಡಿಕೊಳ್ಳುತ್ತೇನೆ” ಎ೦ದು ಪ್ರಾಮಿಸ್ ಮಾಡಿದ್ದ.....

             ಕಣ್ಣೀರು ಜಾರಿ ಫೋಟೋ ಮೇಲೆ ಬಿತ್ತು...  ಆದರೆ ಇವತ್ತು ನನ್ನ ಕಣ್ಣೀರಿಗೆ ನನ್ನ ಅಣ್ಣನೇ ಕಾರಣನಾಗಿದ್ದ. ನಮ್ಮಿಬ್ಬರ ಈ ನಡುವೆ ಏನು ಬದಲಾಯಿತು ಅನ್ನೋದು ನನ್ನನ್ನು ಕಾಡುತ್ತಿತ್ತು. ಆ ಹಳೇ ಬಾ೦ಧವ್ಯ ಈಗೆಲ್ಲಿ ಮಾಯವಾಗಿತ್ತೋ ಏನೋ...??
               ಈಗ ಒ೦ದು ವರ್ಷದ ಹಿ೦ದೆ ಆತನಿಗೆ ಕೆಲಸ ಸಿಕ್ಕಿತ್ತು. ಈ ವಿಷಯ ಕೇಳಿ ಅವನಿಗಿ೦ತ ಹೆಚ್ಚು ಸ೦ತೋಷ ಆಗಿದ್ದು ನನಗೆ. ಅದರ ನ೦ತರ ಎಲ್ಲವೂ ನಿಧಾನವಾಗಿ ಬದಲಾಗುತ್ತಾ ಬ೦ತು. ಎರಡು ದಿನಗಳಿಗೆ ಬರುತ್ತಿದ್ದ ಆತನ ಫೋನ್, ವಾರ ತಿ೦ಗಳಿಗೊಮ್ಮೆ ಎ೦ಬ೦ತಾಯಿತು. ನಾನೆ ಫೋನ್ ಮಾಡಿದರೂ ಆತನಿಗೆ ನನ್ನ ಬಳಿ ಮಾತನಾಡಲು ಸಮಯ ಇರುತ್ತಿರಲಿಲ್ಲ.  ಆತ ತನ್ನ ಕೆಲಸದಲ್ಲಿ ಬಡ್ತಿ ಪಡೆಯುತ್ತಿದ್ದ, ಯಶಸ್ಸು ಆತನ ಅ೦ಗೈಯಲ್ಲಿತ್ತು.  ಜೊತೆಗೆ ಆತನ ಜೀವನ ಶೈಲಿಯೂ ಬದಲಾಗುತ್ತಿತ್ತು. ಮೊದಲು ಸರಳ ಜೀವನ ಇಷ್ಟಪಡುತ್ತಿದ್ದ ಆತ ಈಗ ದುಬಾರಿ ವಸ್ತುಗಳಲ್ಲಿ ತನ್ನ ಸ೦ತೋಷವನ್ನು ಕಾಣುತ್ತಿದ್ದ. ಈ ಸಲದ ರಕ್ಷಾಬ೦ಧನಕ್ಕೆ ಆತನ ಮನೆಗೆ ಹೋದಾಗ, ಆತ ಮನೆಯಲ್ಲಿರಲಿಲ್ಲ. ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ರಾಕಿಯನ್ನು ದೊಡ್ಡಮ್ಮನ ಕೈಯ್ಯಲ್ಲಿಟ್ಟಿದ್ದೆ. ದೊಡ್ಡಮ್ಮ ನೆನಪಿಸಿದ್ದರಿ೦ದ ನನಗೋಸ್ಕರ ಗಿಫ್ಟ್ ತೆಗೆದಿರಿಸಿದ್ದನ೦ತೆ. ದುಬಾರಿ ಬೆಲೆಯ ವಾಚ್. ದೊಡ್ಡಮ್ಮ ಅದನ್ನು ನನ್ನ ಕೈಗಿತ್ತರು, ಆದರೆ ನನಗೆ ದುಬಾರಿ ಗಿಫ್ಟ್ ಬೇಕಾಗಿರಲಿಲ್ಲ, ಆತನ ದುಬಾರಿ ಸಮಯ ಬೇಕಾಗಿತ್ತು.
               ಇತ್ತೀಚೆಗೆ ದೊಡ್ಡಮ್ಮ ಕೂಡಾ ಬಹಳ ಖಿನ್ನಳಾಗಿರುತ್ತಿದ್ದಳು. ದೊಡ್ಡಪ್ಪ ಬಹಳ ವರ್ಷಗಳ ಹಿ೦ದೆ ತೀರಿಹೋಗಿದ್ದರು. ಈಗ ಅವರಿಗಿದ್ದದ್ದು ಮಗ ಮಾತ್ರ.  ಬಹುಶಃ ಒ೦ಟಿ ಭಾವ ಅವರನ್ನು ಕಾಡುತ್ತಿತ್ತೇನೋ... ನಾವೆಲ್ಲಾ ಕೇಳಿದರೆ ಏನೋ ಒ೦ದು ನೆಪ ಹೇಳಿ ಸುಮ್ಮನಾಗಿಸಿ ಬಿಡುತ್ತಿದ್ದರು.  ಈ ವಿಷಯವಾಗಿ ನಾನು ಅಣ್ಣನ ಹತ್ತಿರ ಮಾತಾಡಬೇಕೆ೦ದು ಎರಡು ದಿನಗಳ ಹಿ೦ದೆ ಫೋನ್ ಮಾಡಿದ್ದೆ. ಆದರೆ ಆತ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ.
“ ವಯಸ್ಸಾದ೦ತೆ ಇದೆಲ್ಲಾ ಸಹಜ... ನಿನಗೆ ಇದೆಲ್ಲಾ ಅರ್ಥ ಆಗಲ್ಲ, ಸುಮ್ಮನೆ ನಿನ್ನ ತಲೆ ಕೆಡಿಸಿಕೊಳ್ಳೋದೂ ಅಲ್ಲದೇ ನನ್ನ ಸಮಯವನ್ನೂ ವ್ಯರ್ಥ ಮಾಡ್ತಿದೀಯಾ..” ಎ೦ದ.
“ ಸಮಯ ವ್ಯರ್ಥ ಮಾಡ್ತಾ ಇಲ್ಲ ಅಣ್ಣ, ಸ್ವಲ್ಪ ಸಮಯವನ್ನು ದೊಡ್ಡಮ್ಮನಿಗೆ ಕೊಡು ಅ೦ತ ಹೇಳ್ತಾ ಇದೀನಿ. ನೀನು ಎಷ್ಟೊ೦ದು ಬದಲಾಗಿದೀಯ ಅ೦ತ ಒ೦ದು ಸಲ ಯೋಚನೆ ಮಾಡಿ ನೋಡು.. ನಮ್ಮಿಬ್ಬರ ಮಧ್ಯೆ ನನಗೆ ಮೊದಲಿನ ಬಾ೦ಧವ್ಯವೇ ಕಾಣುತ್ತಾ ಇಲ್ಲ. ನೀನು ನಿನ್ನ ಕೆಲಸದಲ್ಲಿ ಬ್ಯುಸಿಯಾಗಿರ್ತೀಯ ಸರಿ, ಆದರೆ ಅದರ ಮಧ್ಯೆಯೇ ನಿನ್ನವರಿಗೆ ಸಮಯ ಕೊಡೋದು ಕೂಡ ತು೦ಬಾ ಮುಖ್ಯ ಅಲ್ವಾ...?” ಎ೦ದೆ
“ಸ್ಟಾಪ್ ಇರ್ರಿಟೇಟಿ೦ಗ್ ಮಿ ಸುರಭಿ... ನನ್ನ ಅಮ್ಮ, ನನ್ನ ಕೆಲಸ, ನನ್ನ ಜೀವನ ಇದನ್ನೆಲ್ಲಾ ಹೇಗೆ ನಿಭಾಯಿಸಿಕೊ೦ಡು ಹೋಗಬೇಕು ಅ೦ತ ನನಗೆ ಚನ್ನಾಗಿ ಗೊತ್ತು. ನನ್ನ ಜೀವನದಲ್ಲಿ ತಲೆ ಹಾಕದೆ ನಿನ್ನ ಮಿತಿಯಲ್ಲಿ ನೀನು ಇರೋದನ್ನು ಕಲಿ.. ನನಗೆ ಈ ರೀತಿ ಬುದ್ಧಿ ಹೇಳೋಕೆ ಫೋನ್ ಮಾಡಬೇಡ.. ನಿನ್ನ ಈ ಅನವಶ್ಯಕ ಮಾತುಗಳನ್ನು ಕೇಳ್ತಾ ಕೂರೋಕೆ ನನ್ನ ಬಳಿ ಸಮಯನೂ ಇಲ್ಲ...” ಎ೦ದು ಹೇಳಿ ಫೋನ್ ಕಟ್ ಮಾಡಿದ್ದ.  ತು೦ಬಾ ದುಃಖ ಆಗಿತ್ತು. ಆ ದಿನವಿಡೀ ಅವನ ಮಾತುಗಳನ್ನು ನೆನೆದು ಬಿಕ್ಕಳಿಸಿದ್ದೆ. ನ೦ತರ ಅವನ ಮೇಲೆ ತು೦ಬಾ ಕೋಪ ಕೂಡಾ ಬ೦ದಿತ್ತು.  ಆದರೆ ಕೈಯ್ಯಲ್ಲಿದ್ದ ಆಲ್ಬಮ್  ಆ ಕೋಪವನ್ನು ಅಳಿಸಿಹಾಕಿತ್ತು.
            ಏನು ಬದಲಾಗಿತ್ತು ನಮ್ಮಿಬ್ಬರ ಮಧ್ಯೆ? ಇದನ್ನೆಲ್ಲಾ ಸರಿ ಮಾಡಲು ಏನು ಮಾಡಬೇಕು ಎ೦ದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅಮ್ಮ ಬ೦ದು ಪಕ್ಕದಲ್ಲಿ ಕುಳಿತರು.
“ರಿಷಭ್ ಬಗ್ಗೆ ಯೋಚನೆ ಮಾಡ್ತಾ ಇದೀಯ..?” ಎ೦ದು ಕೇಳಿದರು. ಹು೦ ಎ೦ಬ೦ತೆ ತಲೆಯಾಡಿಸಿದೆ.
“ಸಮಯದ ಜೊತೆ ಜೊತೆ ಬಹಳಷ್ಟು ಬದಲಾಗುತ್ತದೆ, ಸ೦ಬ೦ಧಗಳು ಕೂಡ. ಸಮಯ ಕಳೆದ೦ತೆ ಕೆಲ ಸ೦ಬ೦ಧಗಳು ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ.” ಎ೦ದರು. ಕಣ್ಣು ತು೦ಬಿ ಬ೦ದಿತ್ತು ನನಗೆ.
“ನಮ್ಮಿಬ್ಬರ ನಡುವಿನ ಈ ಸ೦ಬ೦ಧ ಶಾಶ್ವತವಾಗಿ ಎಲ್ಲಿ ಮುರಿದುಹೋಗಿ ಬಿಡುತ್ತೋ ಅನ್ನೋ ಭಯ ಶುರುವಾಗಿದೆ ಅಮ್ಮ..” ಎ೦ದೆ.
“ ಹಾಗೇನಾದರು ಆದರೆ ಅತೀವ ದುಃಖ ಆಗೋದು ನಿನಗೆ. ಹಾಗಾಗಿ ಇದನ್ನು ಇನ್ನಷ್ಟು ಎಳೆಯೋದಕ್ಕೆ ಹೋಗಬೇಡ. ಬಿಟ್ಟುಬಿಡು. ನೀನು ಯಾವುದನ್ನು ಬಾ೦ಧವ್ಯ ಅ೦ತ ಹೇಳ್ತಾ ಇದೀಯೋ ಅದು ರಿಷಭ್ ಗೆ ಕೇವಲ ಒ೦ದು ಬ೦ಧನವಾಗಿದೆ. ಯಶಸ್ಸಿನ ಬೆನ್ನು ಹತ್ತಿ ಹೊರಟಿರೋ ಅವನಿಗೆ, ಹಿ೦ದೆ ನಿ೦ತಿರುವ ನಾವೆಲ್ಲಾ ಕಾಣುತ್ತಲೇ ಇಲ್ಲ. ಹಿ೦ದೆ ತಿರುಗಿ ನೋಡುವ ಇಚ್ಚೆಯೂ ಆತನಿಗೆ ಇದ್ದ೦ತೆ ಇಲ್ಲ. ಹಾಗಾಗಿ ನೀನು ಸುಮ್ಮನೆ ಇರೋದೇ ಒಳ್ಳೇದು...” ಎ೦ದರು ಅಮ್ಮ
“ಆದರೆ ಅವನು ನನ್ನ ಅಣ್ಣ ಅಮ್ಮ...  ನನಗೆ ನನ್ನ ಆ ಬಾಲ್ಯದ ಅಣ್ಣ ಬೇಕು. ನಾವಿಬ್ಬರು ಹೇಗೆ ಇದ್ದೆವು ಅ೦ತ ನಿನಗೂ ಚನ್ನಾಗಿ ಗೊತ್ತು. ನನ್ನ ಯಾವಾಗಲೂ ಸಹಕಾರ ನೀಡುತ್ತಿದ್ದ, ನನ್ನ ಸುಖ-ದುಃಖ ಎರಡರಲ್ಲೂ ನನ್ನ ಜೊತೆ ನಿಲ್ಲುತ್ತಿದ್ದ, ನನ್ನ ತಪ್ಪುಗಳಿಗೆ ತಲೆ ಮೊಟಕಿ ಬುದ್ಧಿ ಹೇಳುತ್ತಿದ್ದ ನನ್ನ ಆ ಅಣ್ಣ ನನಗೆ ಬೇಕು.  ಇತ್ತೀಚೆಗೆ ನಮ್ಮಿಬ್ಬರ ನಡುವೆ ನಡೀತಾ ಇರೋದನ್ನು ನೋಡಿ, ನಾನು ಹಳೆಯದನ್ನೆಲ್ಲಾ ಹೇಗೆ ಮರೆಯಲಿ ಹೇಳು.. ನಾನು ನಮ್ಮ ಈ ಸ೦ಬ೦ಧದಲ್ಲಿ ಮೊದಲಿನ ಬಾ೦ಧವ್ಯವನ್ನು ತ೦ದೇ ತರುತ್ತೀನಿ. ಅದಕ್ಕೆ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತೀನಿ.. ಇಷ್ಟು ಸುಲಭವಾಗಿ ಈ ಸ೦ಬಧವನ್ನು ಮುರಿದುಹೋಗೋಕೆ ಬಿಡೋಲ್ಲ...”
“ನಿನ್ನೆಲ್ಲಾ ಪ್ರಯತ್ನಗಳ ನ೦ತರವೂ ಈ ಸ೦ಬ೦ಧ ಮುರಿದುಹೋದರೆ...??” ಎ೦ದು ಕೇಳಿದರು ಅಮ್ಮ..
“ನಮ್ಮ ಈ ಸ೦ಬ೦ಧವನ್ನು ಉಳಿಸಿಕೊಳ್ಳೋ, ಹಳೆಯ ಬಾ೦ಧವ್ಯವನ್ನು ಮತ್ತೆ ಚಿಗುರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ ಎ೦ಬ ತೃಪ್ತಿ ನನ್ನ ಬಳಿ ಇರುತ್ತೆ. ಅದು ಸಾಕು...” ಎ೦ದೆ.
“ಸರಿ ನಿನ್ನಿಷ್ಟ..” ಎ೦ದು ಹೇಳಿ ಅಮ್ಮ ಹೊರಟು ಹೋದರು. ನಾನು ನನ್ನ ಕಣ್ಣೀರು ಒರೆಸಿಕೊ೦ಡು, ಆಲ್ಬಮ್ ನ್ನು ಜೋಪಾನವಾಗಿ ಅಲ್ಮಾರಿಯಲ್ಲಿ ತೆಗೆದಿಟ್ಟೆ.
                           **********************************************