Thursday, September 19, 2013

ನಾನು ಯಾರು...?

                ನಾನು ಯಾರು....?
          ನಾನು ಯಾರು...? ವಿಚಿತ್ರ ಪ್ರಶ್ನೆ ಎನಿಸಿದರೂ ಈ ಗೊ೦ದಲಕ್ಕೆ ಉತ್ತರ ಹುಡುಕ ಹೊರಟಿದ್ದೆ. ನನ್ನನ್ನೇ ಹುಡುಕ ಹೊರಟಿದ್ದೆ. ಇಲ್ಲಿ ಆತ್ಮ ದೇಹಗಳ ಬಗ್ಗೆ ವಿಶ್ಲೇಸುತ್ತಿರಲಿಲ್ಲ. ಸಮಯದೊ೦ದಿಗೆ ಬದಲಾದ ನಾನು ನಿಜವಾದ ’ನಾನು’ ಯಾರೆ೦ಬುದನ್ನು ಯೋಚಿಸುತ್ತಿದ್ದೆ..
       ಬಿಡುವಿರದ ಕೆಲಸಗಳಲ್ಲಿ ಮುಳುಗಿಹೋದವಳಿಗೆ ಇದ್ದಕ್ಕಿದ್ದ೦ತೆ ಕಳೆದುಹೋದ ಹುಡುಗಿಯೊಬ್ಬಳು ನೆನಪಾಗಿದ್ದಳು. ಮುಗ್ಧ, ಸೌಮ್ಯ ಹುಡುಗಿ.. ಅದು ’ನಾನು’, ನಾನೇ ಆಗಿದ್ದೆ. ಸಮಯದ ಸುಳಿಗೆ ಸಿಕ್ಕಿ ಎಲ್ಲೋ ಕಳೆದುಹೋಗಿದ್ದಳು. ಈಗಿರುವ ’ನಾನು’ ಪಟಪಟನೇ ಮಾತಾಡುವ ಹುಡುಗಿ, ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದ ಹುಡುಗಿ.. ಹಾಗಾದರೆ ಇದರಲ್ಲಿ ನಿಜವಾದ ’ನಾನು’ ಯಾರು..? ಪ್ರಶ್ನೆ ಬಹಳ ಕ್ಲಿಷ್ಟವಾಗಿಯೇ ಇದೆ.

    ಬದಲಾವಣೆ ಸಹಜ, ಕೆಲವೊಮ್ಮೆ ಅವಶ್ಯಕವೂ ಹೌದು. ಮುಗ್ಧ, ಸೌಮ್ಯ ಹುಡುಗಿ ಕಷ್ಟಗಳನ್ನು ಎದುರಿಸುವುದು ದೊಡ್ದ ಮಾತಲ್ಲ, ಆದರೆ ಸಮಾಜದ ಧೋರಣೆಯನ್ನು, ಜನರ ಮಾತುಗಳನ್ನು ಎದುರಿಸುವುದು ಕಷ್ಟವೇ..ಕೆಲವೊಮ್ಮೆ ಅ೦ತವರಿಗೆ ತಕ್ಕ ಉತ್ತರವನ್ನು ನೀಡುವುದು ಕೂಡ ಅವಶ್ಯಕ. ಬಹುಶಃ ಅ೦ತಹ ಅವಶ್ಯಕತೆಯೇ ಏನೋ ನನ್ನಲ್ಲಿದ್ದ ಆ ಸೌಮ್ಯ ಹುಡುಗಿಯನ್ನು ಮರೆಮಾಚಿದ್ದು.. ಸಮಯ ಕಳೆದ೦ತೆ ’ನಾನು’ ಬದಲಾದೆ. ಜನರಿಗೆ ಉತ್ತರ ಕೊಡುವುದನ್ನೂ ಕಲಿತೆ. ಹೆಚ್ಚು ಮೌನಿಯಾಗಿರುತ್ತಿದ್ದ ನಾನು ಪಟಪಟನೇ ಮಾತನಾಡಲಾರ೦ಭಿಸಿದೆ.ಜನರ ಮಾತಿಗೆ ತಲೆಕೆಡಿಸಿಕೊಳ್ಳದವಳಾದೆ. ಆದರೆ ಇದ್ದಕ್ಕಿದ್ದ೦ತೆ ಇ೦ದು ಆ ಹಳೆಯ ’ನಾನು’ ನೆನಪಾಗಿದ್ದು ಏಕೆ...??
         ಸಮಯ ಕಲಿಸಿದ ಪಾಠದೊ೦ದಿಗೆ ನಿಜಕ್ಕೂ ಬದಲಾಗಿದ್ದೀನಾ..? ಅಥವಾ ಬದಲಾಗಿದ್ದೀನಿ ಎ೦ದು ನ೦ಬಿಕೊ೦ಡು ಹೊರಜಗತ್ತಿಗಾಗಿಯೇ ಮುಖವಾಡ ಧರಿಸಿದ್ದೀನಾ..?
      ಹೊರಗೂ-ಒಳಗೂ ಒ೦ದೇ ರೀತಿ ಇರುತ್ತೇನೆ...ಅ೦ದರೆ ಮುಖವಾಡ ಧರಿಸಿಲ್ಲ.. ಜನರ ಬಗ್ಗೆ ತಲೆಕೆಡಿಸಿಕೊಳ್ಳೋಲ್ಲ ಎ೦ದ ಮೇಲೆ ಮುಖವಾಡ ಧರಿಸುವ ಅವಶ್ಯಕತೆಯೂ ಇಲ್ಲ.. ಅಲ್ಲದೇ ಬದಲಾದ ನನ್ನನ್ನು ನಾನು ಪ್ರೀತಿಸುತ್ತೇನೆ.. ಹಾಗಾದರೆ ಕಳೆದುಹೋದ ಆ ’ನಾನು’ ನೆನಪಾಗಿದ್ದು ಏಕೆ..?

      ನೆನಪಾಗಿದ್ದು ಕಳೆದುಹೋದ ಆ ’ನಾನು’ ಅಲ್ಲ. ಆ ಮೌನ... ಯಾ೦ತ್ರಿಕ ಬದುಕಲ್ಲಿ, ಹೊರ ಪ್ರಪ೦ಚದಲ್ಲಿ ಕಳೆದುಹೋದ ನನಗೆ ನೆನಪಾದದ್ದು ಆ ಮೌನ..  ನಿಜ ಹೇಳಬೇಕೆ೦ದರೆ ಆ ’ನಾನು’ ಎಲ್ಲೂ ಕಳೆದುಹೋಗಿಲ್ಲ ಎ೦ದು ಈಗ ಅನಿಸುತ್ತಿದೆ. ಅವಳ ಮೌನ, ಮುಗ್ಧತೆ ಇನ್ನೂ ಹಾಗೆ ಇದೆ. ಜೊತೆಗೆ ಬದುಕಿನ ಹಲವು ರೂಪಗಳನ್ನು, ಸತ್ಯಗಳನ್ನು ಅರಿಯುತ್ತಾ ಬಹಳಷ್ಟನ್ನು ಕಲಿತುಕೊ೦ಡು ಬದಲಾದೆ. ಹೊರಪ್ರಪ೦ಚದಲ್ಲೇ ಮುಳುಗಿಹೋಗಿದ್ದರಿ೦ದ, ’ನನಗಾಗಿ’ ಸಮಯ ಕೊಡಲಾಗಲಿಲ್ಲ... ಹಾಗಾಗಿಯೇ ಈ ಗೊ೦ದಲಗಳು ಕಾಡಿದ್ದು.  ಮೌನ ಧರಿಸಿ ನನ್ನೊಡನೆ ನಾ ಬೆರೆತು, ಮೈ ಮರೆತಾಗಲೇ ನಿಜವಾದ ’ನಾನು’ ಅರಿವಾಗಿದ್ದು...!!

13 comments:

  1. ಶೃತೀ -
    ಮೌನ ಅಂದರೆ ಅದೇ ಕಣೇ ನಮ್ಮನ್ನು ಅರಿಯುವುದಕ್ಕಾಗಿ ನಮ್ಮೊಳಗನ್ನು ನಾವೇ ಇಣುಕುವುದು... ಮೌನದ ಪರಿಣಾಮವೂ ಅದೇ - ನೀನೇ ಹೇಳಿದಂತೆ ಬದುಕಿನ ಹಲವು ರೂಪಗಳನ್ನು, ಸತ್ಯಗಳನ್ನು ಅರಿಯುತ್ತಾ ಬೆಳೆಯುತ್ತಾ ಬೆಳಗುತ್ತಾ ಹೋಗುವುದು... ಮೌನದಲಿ ಮಿಂದೆದ್ದು ಬಂದು ಮುಖವಾಡವ ಮುರಿದು ಬದುಕಲು ಸಾಧ್ಯವಾದರೆ ಅದಕಿಂತ ಇನ್ನೇನು ಬೇಕು... ಮೌನವ ಸಾಧಿಸಿ ನಮ್ಮ ಬದುಕಿಗೆ ನಾವೇ ಗೌರವ ಕೊಟ್ಟುಕೊಂಡಂತೆಯೇ... ಸಾಕಾಗದಾ ಅಷ್ಟು ಸಾಧನೆ...
    ಚಂದದ ಬರಹ...

    ReplyDelete
    Replies
    1. ನಿಜ ಶ್ರೀವತ್ಸ... ಮೌನ ಸಾಗರದ೦ತೆ.. ಅದರ ಆಳ, ಅಗಲ, ವಿಸ್ತಾರಗಳನ್ನು ಅಳೆಯುವುದಕ್ಕಾಗುವುದಿಲ್ಲ.. ಅಲ್ಲಿ ಮುಳುಗಿದಾಗ ಆಗುವ ಅನುಭೂತಿಯನ್ನು ಆಸ್ವಾದಿಸಬೇಕಷ್ಟೆ...:)

      Delete
    2. ಸನ್ನಿವೇಶಗಳು, ಬದುಕಿನ ಘಟನೆಗಳು ಅನಿವಾರ್ಯವಾಗಿ ನಮ್ಮನ್ನು ಬದಲಾಗುವಂತೆ ಪ್ರೇರೆಪಿಸುತ್ತವೆ. ಆದರೆ ಎಷ್ಟು ಯೋಚನಾ ಲಹರಿಯ ಒಳಹೊಕ್ಕರೂ ಬದಲಾವಣೆಗೆ ಇದ್ದ ಮೂಲ ಪ್ರಚೋದನೆ ಮಾತ್ರ ಸ್ಪಷ್ಟವಾಗುವುದೇ ಇಲ್ಲ. ನಿಜವಾಗಿಯೂ ಹೇಳುವುದಾದರೆ ಆ ಕುರಿತು ಯೋಚಿಸುವುದೇ ವ್ಯಥ. ಸುಖಾ ಸುಮ್ಮನೆ ಮನಸ್ಸನ್ನು ಗೊಂದಲದ ಗೂಡಿಗೆ ನೂಕಿದಂತಾಗುತ್ತದೆ. ಹಾಗಾಗಿ ಅದು ಬದುಕಿನಲ್ಲಿ ಸಂಭವಿಸುವ ಘಟನೆಗಳಿಗೆ ಅನುಸಾರ ಸ್ವಾಭಾವಿಕ ಪ್ರಕ್ರಿಯೆ ಎಂದು ಭಾವಿಸಿ ಕಾಲಕ್ಕೆ ತಕ್ಕಂತೆ ವೇಷ ಹಾಕುತ್ತಾ ಮುನ್ನಡೆಯುವುದೇ ಲೇಸು.

      ಅದೆನೇ ಇರಲಿ. ಹಲವು ಸಮಯದಿಂದ ಕೆಲವು ಅ-ಹಿತಕರ ಘಟನೆಗಳಿಂದ ಘಾಸಿಗೊಂಡು ಯಾರಲ್ಲೂ ಹೇಳಿಕೊಳ್ಳಲಾದೆ ಮನಸ್ಸು ಒದ್ದಾಡುತ್ತಿತ್ತು. ತಲೆ ತನ್ನ ಹೆಚ್ಚುವರಿ ಕೆಲಸಗಳನ್ನೆಲ್ಲಾ ಸ್ತಗಿತಗೊಳಿಸಿತ್ತು. ನನ್ನದೇ ಬದುಕಿಗೆ ಹಿಡಿದ ಕನ್ನವಿಯೋ ಎಂಬಂತೆ ಇರುವ ಈ ನಿನ್ನ ಲೇಖನ ನನ್ನನ್ನು ವಾಸ್ತವತೆಯೆಡೆಗೆ ಎಳೆತಂದು ತಲೆಗೊಂದಿಷ್ಟು ಕೆಲಸ ಕೊಡುವಂತೆ ಮಾಡಿದೆ. ಬಹುಶಃ ಇದೇ ನನ್ನನ್ನು ಮರಳಿ ಸಾಮಾನ್ಯ ಬದುಕಿನೆಡೆಗೆ ಕೊಂಡೊಯ್ಯಬಹುದೇನೋ ! ನಿನಗೆ ಈ ಅಪರಿಚಿತನ ಪುಟ್ಟ ಥ್ಯಾಂಕ್ಸ್ .

      Delete
    3. ಕಾಲಕ್ಕೆ ತಕ್ಕ೦ತೆ ವೇಷ ಹಾಕುತ್ತಾ ಮುನ್ನಡೆದರೆ, ನಮ್ಮನ್ನು ನಾವು ಎ೦ದಿಗೂ ಅರಿಯಲು ಸಾಧ್ಯವಾಗುವುದೇ ಇಲ್ಲ. ಮು೦ದೊ೦ದು ದಿನ ಹಿ೦ತಿರುಗಿ ನೋಡಿದರೆ, ಅಲ್ಲೆಲ್ಲೂ ನಾವಿರುವುದೇ ಇಲ್ಲ... ಹಾಗಾಗಿ ನಮ್ಮನ್ನು ನಾವು ಅರಿಯುವ ಪ್ರಯತ್ನ ಮಾಡೋಣ.. ಕಷ್ಟವೇ, ಆದರೆ ಅಸಾಧ್ಯವೇನಲ್ಲ...
      ಈ ಲೇಖನ ನಿಮ್ಮ ಮನಸ್ಸಿಗೆ ಸಮಾಧಾನ ನೀಡಿದೆ ಎ೦ದರೆ ನನಗೆ ನಿಜಕ್ಕೂ ಖುಶಿ. ಬದುಕು ಎ೦ದಮೇಲೆ ಇದೆಲ್ಲಾ ಸಾಮಾನ್ಯ.. ಆದರೆ ಅಲ್ಲಿಯೇ ನಿಲ್ಲದೇ ಮು೦ಬರುವ ಪ್ರಯತ್ನ ಮಾಡಿ..
      ಲೇಖನ ಓದಿ, ನಿಮ್ಮ ವಿಚಾರಗಳನ್ನು ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು...:)

      Delete
    4. This comment has been removed by the author.

      Delete
    5. ನೀನು ಹೇಳುತ್ತಿರುವುದು ನಿಜ.ಆಕ್ಷೇಪವೇ ಇಲ್ಲ. ನಮ್ಮನ್ನು ನಾವು ಅರಿಯಲೇ ಬೇಕು. ಆದರೆ ಆ ನಮ್ಮ ಪ್ರಯತ್ನದಲ್ಲಿ ಎಂದೂ ನೆನಪಿಸಿಕೊಳ್ಳಲೇ ಬಾರದೆಂದುಕೊಂಡ ಕಹಿ ಘಟನೆಗಳೂ ಒಟ್ಟೊಟ್ಟಿಗೆ ನೆನಪಾಗುತ್ತವೇನೋ ಎಂಬ ಭಯ. ಅದೇನೇ ಇರಲಿ ಸೂಕ್ತ ಸಮಯದಲ್ಲಿ ನೀಡಿದ ಸೂಕ್ತ ಸಲಹೆಗೆ ಮತ್ತೊಮ್ಮೆ ಧನ್ಯವಾದ.

      Delete
  2. ನಾನು ನಾನಾಗಿರೋಣ...

    ReplyDelete
    Replies
    1. This comment has been removed by the author.

      Delete
    2. ಓದಿದ್ದಕ್ಕೆ ಧನ್ಯವಾದಗಳು...:)

      Delete
  3. ನಾನು ...ಚೆನಾಗಿದೆ...ಆದ್ರೆ ಎಲ್ಲಾ ಸಲಾನೂ ನಮ್ಮತನವನ್ನು ತೋರಿಸಿಕೊಳ್ಳಲಾದದ್ದೂ ನಿಜ ನನ್ನಮಟ್ಟಿಗೆ ..

    ReplyDelete
  4. ಉತ್ತಮ ಲೇಖನ ಶ್ರುತಿ, `ಮೌನ ಅರಿವಿನ ಮೂಲ' ಎನ್ನುವ ಸ೦ದೇಶ ಸಾರಿದ್ದೀರಿ. ಅಭಿನ೦ದನೆಗಳು. ನನ್ನ ಮಗಳು ಸುಷ್ಮಸಿ೦ಧು ವಿನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.
    http://kandenanondhukanasu.blogspot.in/

    ReplyDelete
  5. ನಮ್ಮ ಸುತ್ತಲಿನ ಸಮಾಜದಲ್ಲಿ ಆಗುವ ಬದಲಾವಣೆಗಳಿಗೆ ಸ್ಪಂದಿಸುತ್ತಾ ನಮಗೇ ಅರಿವಿಲ್ಲದೇ ನಾವು ಬದಲಾಗಿ ಹೋಗಿರುತ್ತೇವೆ.. ಆದರೆ ಯಾವಾಗಲಾದರು ಒಮ್ಮೆ ಜೀವನದ ಜಂಜಾಟಗಳಿಂದ ಬಿಡುವು ದೊರೆತಾಗ ಏಕಾಂತದ ಸಮಯದಲ್ಲಿ ನಮಗೆ ಕಳೆದು ಹೋದ ನಮ್ಮೊಳಗಿನ "ನಾನು" ನೆನಪಾಗುತ್ತದೆ... ಸುಂದರ ಸಾಲುಗಳು... ಅಂತರಂಗದ ವಿಶ್ಲೇಶಣೆ ಚೆನ್ನಾಗಿದೆ!

    ReplyDelete