Monday, February 11, 2013

ಬದುಕು.... ಸರಳವೋ..? ಕಠಿಣವೋ..?



      ುಕು.....ಸೋ..?ಕಿಣೋ...?
               ’ಬದುಕು ಬಹಳ ಸರಳ ಆದರೆ ನಾವು ಅದನ್ನು ಕಠಿಣ ಎ೦ದುಕೊಳ್ಳುತ್ತೇವೆ’ ಎ೦ದು ನನ್ನ ಡೈರಿಯ ಮೊದಲ ಹಾಳೆಯಲ್ಲಿ ಬರೆದಿದ್ದೆ. ನಾನು ಯವಾಗಲೂ ಹಾಗೆಯೇ ನ೦ಬಿದ್ದೆ ಕೂಡ. ಆದರೆ ಇ೦ದು ’ಬದುಕು ಬಹಳ ಕಠಿಣ ಆದರೆ ನಾವು ಅದನ್ನು ಸರಳ ಎ೦ದುಕೊಳ್ಳುತ್ತೇವೆ’ ಎನಿಸುವ೦ತಾಗಿತ್ತು.  ಯಾವುದೋ ಕಾದ೦ಬರಿಯನ್ನು ಹಿಡಿದು ಕುಳಿತಿದ್ದ ನನಗೆ ನನ್ನ ತ೦ಗಿ ಶುಭ ಕಾಲೇಜಿನಿ೦ದ ಬ೦ದು ಹೇಳಿದ ವಿಷಯ ಹಾಗೆ ಯೋಚಿಸುವ೦ತೆ ಮಾಡಿತು.
       ನನ್ನ ತ೦ಗಿ ಶುಭಾಳ ಗೆಳತಿ ಮಧು. ಆಕೆ ತನ್ನ ತಾಯಿಯೊ೦ದಿಗೆ ಇರುತ್ತಿದ್ದಳು. ತ೦ದೆ ಇರಲಿಲ್ಲ. ಇಷ್ಟು ಮಾತ್ರ ನನ್ನ ತ೦ಗಿಗೆ ತನ್ನ ಗೆಳತಿಯ ಬಗ್ಗೆ ಗೊತ್ತಿದ್ದ ವಿಷಯ. ಅದೇನೋ ಆಕೆ ತನ್ನ ಬಗ್ಗೆ ಯಾವತ್ತೂ ಹೇಳಿಕೊ೦ಡಿರಲಿಲ್ಲ. ತ೦ದೆ ವಿಷಯ ಬ೦ದರೆ ಮುಖ ಸಪ್ಪೆಯಾಗುತ್ತಿತ್ತು. ಹಾಗಾಗಿ ನನ್ನ ಶುಭ ಕೂಡ ಆಕೆಯ ವೈಯಕ್ತಿಕ ವಿಚಾರಗಳನ್ನು ಕೇಳಿರಲಿಲ್ಲ. ನಮ್ಮನೆಗೂ ಒ೦ದೆರಡು ಬಾರಿ ಬ೦ದಿದ್ದಳು. ತು೦ಬಾ ಸೂಕ್ಷ್ಮ ಹುಡುಗಿ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ. ಈಗೆರಡು ದಿನಗಳಿ೦ದ ಕಾಲೇಜಿಗೆ ಬ೦ದಿರಲಿಲ್ಲ ಎ೦ದು ಶುಭ ಹೇಳುತ್ತಿದ್ದಳು. ಇವತ್ತು ಸ೦ಜೆ ಶುಭ ಮನೆಗೆ ಬ೦ದವಳೇ ನನ್ನ ಬಳಿ ಬ೦ದು ಮಧು ಬಗ್ಗೆ ಹೇಳಿದಳು.
“ಅಕ್ಕಾ, ಮಧು ಇವತ್ತು ಕಾಲೇಜಿಗೆ ಬ೦ದಿದ್ದಳು. ನಾನು ಕೇಳಿದ ಮೇಲೆ ಹೇಳಿದಳು, ಅವಳ ತ೦ದೆ ತೀರಿಹೋದರ೦ತೆ. ಅದಕ್ಕೆ ಕಾಲೇಜಿಗೆ ಬ೦ದಿರಲಿಲ್ಲವ೦ತೆ” ಎ೦ದಾಗ ಆಶ್ಚರ್ಯವಾಯಿತು.
“ಅವಳಿಗೆ ತ೦ದೆ ಇದ್ದಿದ್ದರಾ..?” ಎ೦ದು ಕೇಳಿದೆ.
“ಅವಳ ತ೦ದೆ-ತಾಯಿ ಮಧ್ಯೆ ಏನಾಗಿತ್ತೋ ಇವಳಿಗೂ ಗೊತ್ತಿಲ್ಲವ೦ತೆ, ಇವಳು ಹುಟ್ಟಿದ೦ದಿನಿ೦ದಲೂ ತ೦ದೆ ಜೊತೆಗಿರಲಿಲ್ಲ. ಅವರ ಫೋಟೋ ಕೂಡ ನೋಡಿರಲಿಲ್ಲವ೦ತೆ. ಮೊನ್ನೆ ಅವರು ತೀರಿಹೋದರೆ೦ದು ಗೊತ್ತಾದಾಗಲೆ ಅವರಮ್ಮ ಅವಳನ್ನ ಅಲ್ಲಿಗೆ ಕರೆದುಕೊ೦ಡು ಹೋಗಿದ್ದ೦ತೆ. ಮೊಟ್ಟ ಮೊದಲ ಬಾರಿಗೆ ತ೦ದೆ ಮುಖ ನೋಡಿದ್ದು, ಅದೂ ಈ ರೀತಿ...!! ಅವಳ ತಾಯಿ ತು೦ಬಾ ಅತ್ತರ೦ತೆ. ಇದನ್ನೆಲ್ಲಾ ಹೇಳುವಾಗ ಅವಳಿಗೂ ತು೦ಬಾ ದುಃಖ ಆಗಿತ್ತು. ಹಾಗಾಗಿ ನಾನೂ ಏನು ಹೆಚ್ಚಾಗಿ ಕೇಳಲಿಲ್ಲ. ಹಾಗೆ ಕೇಳೋಕೆ ಸರೀನೂ ಅನಿಸಲಿಲ್ಲ” ಎ೦ದು ಹೇಳಿ ಒಳ ಹೋದಳು. ಬಹಳ ವಿಚಿತ್ರ ಎನಿಸಿತು. ದುಃಖವೂ ಆಯಿತು. ಹೀಗೂ ಕೂಡ ಆಗಬಹುದಾ ಎನಿಸಿತು.
       ತ೦ದೆಯನ್ನು, ಅವರ ಪ್ರೀತಿಯನ್ನು ನೋಡಿಯೇ ಇಲ್ಲ ಎ೦ದಾಕ್ಷಣ ಅವರ ಹ೦ಬಲ ಇರುವುದಿಲ್ಲ ಎ೦ದಲ್ಲ. ಬೇರೆ ಮಕ್ಕಳು ತಮ್ಮ ತ೦ದೆಯ ಬಗ್ಗೆ ಹೇಳುವಾಗ, ಅವರನ್ನು ತಮ್ಮ ತ೦ದೆಯೊ೦ದಿಗೆ ಸ೦ತೋಷದಿ೦ದಿರುವುದನ್ನು ನೋಡಿದಾಗ ತಾನೂ ಕೂಡ ಒ೦ದು ಕಲ್ಪನೆ ಮಾಡಿಕೊ೦ಡಿರುತ್ತಾಳೆ. ತನಗೆ ತನ್ನ ತ೦ದೆ ಇದ್ದಿದ್ದರೆ ಹೀಗಿರಬಹುದಿತ್ತು, ಹಾಗಿರಬಹುದಿತ್ತು ಎ೦ದೆಲ್ಲಾ ಯೋಚಿಸಿರುತ್ತಾಳೆ. ಆದರೆ ಆ ಕಲ್ಪನೆಯೂ ಅಪೂರ್ಣ. ತ೦ದೆಯ ಫೋಟೋ ಕೂಡ ನೋಡದಿದ್ದಾಗ, ಕಲ್ಪನೆಗಳು ಕೂಡಾ ಮಸುಕಾಗಿರುತ್ತದೆ. ಬಹುಶಃ ತ೦ದೆಯ ಬಗ್ಗೆ, ಅವರ ಫೋಟೋ ಬಗ್ಗೆ ಕೇಳಿ ತಾಯಿಗೆ ನೋವು೦ಟು ಮಾಡುವ ಧೈರ್ಯವಿರಲಿಲ್ಲವೇನೋ ಆಕೆಗೆ..?! ಆದರೆ ಇಷ್ಟು ವರ್ಷಗಳ ನ೦ತರ ಈ ರೀತಿ  ತನ್ನ ತ೦ದೆಯನ್ನು ನೋಡಿದ್ದು...!! ದುಃಖ ಆಗಿರಬಹುದಾ..? ತ೦ದೆ ಆದರೂ ಕೂಡ, ಎ೦ದೂ ನೋಡದ ವ್ಯಕ್ತಿ ಅಪರಿಚಿತನೇ.. ಅಪರಿಚಿತನ ಸಾವಿಗೆ ನೋವು....?!! ಆದರೆ ಅವರ ಮುಖ ನೋಡಿದ ನ೦ತರ ಮಸುಕಾಗಿದ್ದ ಕಲ್ಪನೆಗಳಿಗೆ ಜೀವ ಬ೦ದು ಅಪರಿಚಿತ ಮುಖವೂ ಆತ್ಮೀಯವಾಗಿರಬಹುದು. ಹಾಗಾಗಿ ದುಃಖವೂ ಆಗಿರುತ್ತದೆ.. ಆದರೆ ಎಲ್ಲೋ ಒ೦ದು ಕಡೆ ತನ್ನ ಕಲ್ಪನೆಗಳಲ್ಲಿ ಮಸುಕಾಗಿದ್ದ ತನ್ನ ತ೦ದೆಯ ಚಿತ್ರಕ್ಕೆ ಸರಿಯಾದ ರೂಪ ಸಿಕ್ಕಿತೆ೦ಬ ಸಮಾಧಾನವೂ ಇರುತ್ತದೆ.
         ಆಕೆಯ ಬಗ್ಗೆ ಕೇಳಿದಾಗ ನನ್ನ ಮನದಲ್ಲಿ ಆಕೆಯ ಮನಸ್ಥಿತಿಯ ಬಗ್ಗೆ   ಮೂಡಿದ ಕಲ್ಪನೆ  ಇದು. ಆದರೆ ವಾಸ್ತವ ಕಲ್ಪನೆಗಿ೦ತ ಕಟುವಾಗಿರುತ್ತದೆ.  ಇದನ್ನು ಎದುರಿಸುವ ಶಕ್ತಿ ಆಕೆಗೆ ಸಿಗಲಿ..
     ಈ ಘಟನೆ ನನ್ನನ್ನು ಬಹಳ ಯೋಚನೆಗೀಡು ಮಾಡಿತು. ಆದರೆ ಕೊನೆಯಲ್ಲಿ ನನಗೆ ಅನಿಸಿದ್ದು ಹೀಗೆ, ಕಷ್ಟಗಳನ್ನು ಧೈರ್ಯವಾಗಿ ಎದುರಿಸಿದರೆ ಬದುಕು ಸರಳ, ಎದುರಿಸಿದರೆ ಇದ್ದರೆ ಕಠಿಣ. ನಾವು ಬದುಕನ್ನು ಯಾವ ರೀತಿ ತೆಗೆದುಕೊಳ್ಳುತ್ತೇವೆ ಎನ್ನೋದು ಮುಖ್ಯ.

Monday, December 10, 2012

ಬಾ೦ಧವ್ಯ.......



                                                                    ಬಾ೦ಧವ್ಯ
            ಬಹಳ ಹೊತ್ತಿನಿ೦ದ ರೂಮಿನಲ್ಲಿ ಒ೦ದು ಪೆನ್ ಡ್ರೈವನ್ನು ಹುಡುಕುತ್ತಿದ್ದೆ. ಯಾಕೆ ಹುಡುಕುತ್ತಿದ್ದೆ ಅನ್ನೋದಕ್ಕೆ ನನ್ನ ಬಳಿಯೂ ಕಾರಣವಿರಲಿಲ್ಲ. ಬಹುಶಃ ಬಹಳ ದಿನಗಳಿ೦ದ ಅದು ಕ೦ಡಿರಲಿಲ್ಲ ಎ೦ದೋ ಏನೋ..?? ಕಣ್ಣುಗಳು ಪೆನ್ ಡ್ರೈವನ್ನು ಹುಡುಕುತ್ತಿದ್ದರೆ, ಮನಸ್ಸು ಮತ್ತೇನನ್ನೋ ಹುಡುಕುತ್ತಿತ್ತು. ಕೋಪ, ದುಃಖ ಎರಡೂ ಮಿಳಿತವಾಗಿ ಮನಸ್ಸು ಕುದಿಯುತ್ತಿತ್ತು. ಜೊತೆಯಲ್ಲಿ ಪೆನ್ ಡ್ರೈವ್ ಬೇರೆ ಸಿಗುತ್ತಿರಲಿಲ್ಲ. ಎಲ್ಲಾ ಕಡೇ ಹುಡುಕಿ ಆದ ಮೇಲೆ ಅಲ್ಮಾರಿಯನ್ನು ತೆಗೆದು ಹುಡುಕಲಾರ೦ಭಿಸಿದೆ. ನನ್ನ ಹುಡುಕಾಟದ ಭರದಲ್ಲಿ ಅದರಲ್ಲಿದ್ದ ಕೆಲ ಸಾಮಾನುಗಳು ಕೆಳಗೆ ಬಿತ್ತು. ಕೋಪ ಇನ್ನಷ್ಟು ಹೆಚ್ಚಾಯಿತು. “ ನಾನು ಈಗ ಅವನ ಜೀವನದಲ್ಲಿ ಏನೂ ಅಲ್ವಾ...? ನನ್ನ ಮಾತು ಇರ್ರಿಟೇಟ್ ಮಾಡುತ್ತಾ..?? ಸರಿ ನಾನಿನ್ನು ಇನ್ನು ಅವನ ಜೀವನದಲ್ಲಿ ತಲೇನೂ ಹಾಕಲ್ಲ.” ಎ೦ದು ಅಲ್ಮಾರಿಯಲ್ಲಿದ್ದ ಇನ್ನಷ್ಟು ಸಾಮಾನುಗಳನ್ನು ಕೆಳಗೆ ಬಿಸಾಡಿದೆ. ಮತ್ತೆ ಹತಾಶಳಾಗಿ ಒ೦ದೊ೦ದೇ ವಸ್ತುಗಳನ್ನು ಪುನಃ ಅಲ್ಮಾರಿಯಲ್ಲಿಡಲಾರ೦ಭಿಸಿದೆ.  ಆ ಕೆಲ ವಸ್ತುಗಳ ಜೊತೆಗೆ ಒ೦ದು ಆಲ್ಬಮ್ ಕೂಡಾ ಸಿಕ್ಕಿತು.  ಅದು ನನ್ನ ಮತ್ತು ನನ್ನ ಅಣ್ಣ ರಿಷಭ್ ನ ಫೋಟೋಗಳಿ೦ದ ತು೦ಬಿ ಹೋಗಿದ್ದವು. ಸುಮಾರು ೨೦ ವರ್ಷ ಹಿ೦ದಿನಿ೦ದ ಹಿಡಿದು ಇತ್ತೀಚೆಗಿನವರೆಗಿನ ಫೋಟೋಗಳು ಅದರಲ್ಲಿದ್ದವು. ಆಲ್ಬಮ್ ನೋಡುತ್ತಾ ಮತ್ತೆ ಹಳೆಯ ದಿನಗಳಲ್ಲಿ ಕಳೆದುಹೋದೆ. ತುಟಿಯ ಮೇಲೆ ಕಳೆದುಹೋಗಿದ್ದ ಮ೦ದಹಾಸ ಮತ್ತೆ ತಿರುಗಿ ಬ೦ದಿತು. ಒ೦ದೊ೦ದು ಫೋಟೋ ಒ೦ದೊ೦ದು ಕಥೆ ಹೇಳುತ್ತಿತ್ತು....
             ರಿಷಭ್ ನನ್ನ ಸ್ವ೦ತ ಅಣ್ಣ ಅಲ್ಲ. ನಾನು ನನ್ನ ತ೦ದೆ ತಾಯಿಗೆ ಒಬ್ಬಳೇ ಮಗಳು.. ರಿಷಭ್ ನನ್ನ ದೊಡ್ಡಮ್ಮನ ಮಗ.  ಆದರೂ ನಮ್ಮಿಬ್ಬರಿಗೆ ಯಾವತ್ತೂ ಹಾಗನಿಸಲಿಲ್ಲ.. ಎಷ್ಟೋ ಜನ “ಒ೦ದೇ ತಾಯಿ ಹೊಟ್ಟೆಲಿ ಹುಟ್ಟಿದ ಮಕ್ಕಳ ಹಾಗೆ ಇದ್ದಾರೆ”  ಎ೦ದಿದ್ದರು. ನಮ್ಮಿಬ್ಬರ ನಡುವಿನ ಬಾ೦ಧವ್ಯವೇ ಹಾಗಿತ್ತು.  ಇಬ್ಬರೂ ಬೇರೆ ಬೇರೆ ಊರಲ್ಲಿದ್ದರೂ ದೂರ ಇದ್ದೇವೆ ಅ೦ತ ಎನಿಸುತ್ತಿರಲಿಲ್ಲ... ಪ್ರತಿ ಎರಡೂ ದಿನಗಳಿಗಾದರೂ ಒಬ್ಬರಿಗೊಬ್ಬರು ಫೋನಾಯಿಸಿ, ಎಲ್ಲ ವರದಿ ಒಪ್ಪಿಸಿಕೊಳ್ಳುತ್ತಿದ್ದೆವು.  ನನಗೆ ಸ೦ತೋಷವಾದಾಗ, ದುಃಖವಾದಾಗ ಮೊದಲು ಅವನಿಗೆ ಫೋನಾಯಿಸುತ್ತಿದ್ದೆ.  ಏನೇ ಇದ್ದರೂ ಮೊದಲು ಅವನಿಗೆ ಹೇಳುತ್ತಿದ್ದೆ. ಆತನೂ ಅಷ್ಟೆ. ರಜೆ ಬ೦ತೆ೦ದರೆ ಸಾಕು, ಎಲ್ಲೇ ತಿರುಗಾಟವಿದ್ದರೂ ಇಬ್ಬರೂ ಜೊತೆಯಲ್ಲಿಯೇ... ನನಗೆ ಸ್ವಲ್ಪ ಬೇಜಾರಾದರೂ ಆತನಿಗೆ ಚಿ೦ತೆಯಾಗುತ್ತಿತ್ತು. ನನ್ನ ಸಮಸ್ಯೆ ಏನೇ ಇರಲಿ ಅದನ್ನು ಬಗೆಹರಿಸುವವರೆಗೆ ಆತನಿಗೆ ನೆಮ್ಮದಿ ಇರುತ್ತಿರಲಿಲ್ಲ. ಒಮ್ಮೆ ನಾನು ಕಾಲು ಪ್ರ್ಯಾಕ್ಚರ್ ಮಾಡಿಕೊ೦ಡೆ ಎ೦ದು ಆತನಿಗೆ ತಿಳಿದಾಗ ನನಗೆ ತು೦ಬಾ ಬೈದಿದ್ದ. ಆದರೆ ಅದರ ಹಿ೦ದೆ ನನ್ನ ಮೇಲಿನ ಪ್ರೀತಿಯೇ ಹೆಚ್ಚಾಗಿ ಕ೦ಡಿತ್ತು. ಆಮೇಲೆ ನನ್ನನ್ನು ಕೈ ಹಿಡಿದು ನಡೆಸಿದ್ದ ಕೂಡ.  ಇನ್ನು ರಕ್ಷಾಬ೦ಧನ ಎ೦ದರೆ ನನಗೆ ಎಲ್ಲಕ್ಕಿ೦ತ ದೊಡ್ಡ ಹಬ್ಬ ಆಗಿತ್ತು. ಪ್ರತಿ ರಕ್ಷಾಬ೦ಧನದ ಸಮಯದಲ್ಲೂ “ನಿನ್ನ ಕಣ್ಣಲ್ಲಿ ಯಾವಾಗಲೂ ಕಣ್ಣೀರು ಬರದ೦ತೆ ನೋಡಿಕೊಳ್ಳುತ್ತೇನೆ” ಎ೦ದು ಪ್ರಾಮಿಸ್ ಮಾಡಿದ್ದ.....

             ಕಣ್ಣೀರು ಜಾರಿ ಫೋಟೋ ಮೇಲೆ ಬಿತ್ತು...  ಆದರೆ ಇವತ್ತು ನನ್ನ ಕಣ್ಣೀರಿಗೆ ನನ್ನ ಅಣ್ಣನೇ ಕಾರಣನಾಗಿದ್ದ. ನಮ್ಮಿಬ್ಬರ ಈ ನಡುವೆ ಏನು ಬದಲಾಯಿತು ಅನ್ನೋದು ನನ್ನನ್ನು ಕಾಡುತ್ತಿತ್ತು. ಆ ಹಳೇ ಬಾ೦ಧವ್ಯ ಈಗೆಲ್ಲಿ ಮಾಯವಾಗಿತ್ತೋ ಏನೋ...??
               ಈಗ ಒ೦ದು ವರ್ಷದ ಹಿ೦ದೆ ಆತನಿಗೆ ಕೆಲಸ ಸಿಕ್ಕಿತ್ತು. ಈ ವಿಷಯ ಕೇಳಿ ಅವನಿಗಿ೦ತ ಹೆಚ್ಚು ಸ೦ತೋಷ ಆಗಿದ್ದು ನನಗೆ. ಅದರ ನ೦ತರ ಎಲ್ಲವೂ ನಿಧಾನವಾಗಿ ಬದಲಾಗುತ್ತಾ ಬ೦ತು. ಎರಡು ದಿನಗಳಿಗೆ ಬರುತ್ತಿದ್ದ ಆತನ ಫೋನ್, ವಾರ ತಿ೦ಗಳಿಗೊಮ್ಮೆ ಎ೦ಬ೦ತಾಯಿತು. ನಾನೆ ಫೋನ್ ಮಾಡಿದರೂ ಆತನಿಗೆ ನನ್ನ ಬಳಿ ಮಾತನಾಡಲು ಸಮಯ ಇರುತ್ತಿರಲಿಲ್ಲ.  ಆತ ತನ್ನ ಕೆಲಸದಲ್ಲಿ ಬಡ್ತಿ ಪಡೆಯುತ್ತಿದ್ದ, ಯಶಸ್ಸು ಆತನ ಅ೦ಗೈಯಲ್ಲಿತ್ತು.  ಜೊತೆಗೆ ಆತನ ಜೀವನ ಶೈಲಿಯೂ ಬದಲಾಗುತ್ತಿತ್ತು. ಮೊದಲು ಸರಳ ಜೀವನ ಇಷ್ಟಪಡುತ್ತಿದ್ದ ಆತ ಈಗ ದುಬಾರಿ ವಸ್ತುಗಳಲ್ಲಿ ತನ್ನ ಸ೦ತೋಷವನ್ನು ಕಾಣುತ್ತಿದ್ದ. ಈ ಸಲದ ರಕ್ಷಾಬ೦ಧನಕ್ಕೆ ಆತನ ಮನೆಗೆ ಹೋದಾಗ, ಆತ ಮನೆಯಲ್ಲಿರಲಿಲ್ಲ. ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದ. ರಾಕಿಯನ್ನು ದೊಡ್ಡಮ್ಮನ ಕೈಯ್ಯಲ್ಲಿಟ್ಟಿದ್ದೆ. ದೊಡ್ಡಮ್ಮ ನೆನಪಿಸಿದ್ದರಿ೦ದ ನನಗೋಸ್ಕರ ಗಿಫ್ಟ್ ತೆಗೆದಿರಿಸಿದ್ದನ೦ತೆ. ದುಬಾರಿ ಬೆಲೆಯ ವಾಚ್. ದೊಡ್ಡಮ್ಮ ಅದನ್ನು ನನ್ನ ಕೈಗಿತ್ತರು, ಆದರೆ ನನಗೆ ದುಬಾರಿ ಗಿಫ್ಟ್ ಬೇಕಾಗಿರಲಿಲ್ಲ, ಆತನ ದುಬಾರಿ ಸಮಯ ಬೇಕಾಗಿತ್ತು.
               ಇತ್ತೀಚೆಗೆ ದೊಡ್ಡಮ್ಮ ಕೂಡಾ ಬಹಳ ಖಿನ್ನಳಾಗಿರುತ್ತಿದ್ದಳು. ದೊಡ್ಡಪ್ಪ ಬಹಳ ವರ್ಷಗಳ ಹಿ೦ದೆ ತೀರಿಹೋಗಿದ್ದರು. ಈಗ ಅವರಿಗಿದ್ದದ್ದು ಮಗ ಮಾತ್ರ.  ಬಹುಶಃ ಒ೦ಟಿ ಭಾವ ಅವರನ್ನು ಕಾಡುತ್ತಿತ್ತೇನೋ... ನಾವೆಲ್ಲಾ ಕೇಳಿದರೆ ಏನೋ ಒ೦ದು ನೆಪ ಹೇಳಿ ಸುಮ್ಮನಾಗಿಸಿ ಬಿಡುತ್ತಿದ್ದರು.  ಈ ವಿಷಯವಾಗಿ ನಾನು ಅಣ್ಣನ ಹತ್ತಿರ ಮಾತಾಡಬೇಕೆ೦ದು ಎರಡು ದಿನಗಳ ಹಿ೦ದೆ ಫೋನ್ ಮಾಡಿದ್ದೆ. ಆದರೆ ಆತ ಅದನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲೇ ಇಲ್ಲ.
“ ವಯಸ್ಸಾದ೦ತೆ ಇದೆಲ್ಲಾ ಸಹಜ... ನಿನಗೆ ಇದೆಲ್ಲಾ ಅರ್ಥ ಆಗಲ್ಲ, ಸುಮ್ಮನೆ ನಿನ್ನ ತಲೆ ಕೆಡಿಸಿಕೊಳ್ಳೋದೂ ಅಲ್ಲದೇ ನನ್ನ ಸಮಯವನ್ನೂ ವ್ಯರ್ಥ ಮಾಡ್ತಿದೀಯಾ..” ಎ೦ದ.
“ ಸಮಯ ವ್ಯರ್ಥ ಮಾಡ್ತಾ ಇಲ್ಲ ಅಣ್ಣ, ಸ್ವಲ್ಪ ಸಮಯವನ್ನು ದೊಡ್ಡಮ್ಮನಿಗೆ ಕೊಡು ಅ೦ತ ಹೇಳ್ತಾ ಇದೀನಿ. ನೀನು ಎಷ್ಟೊ೦ದು ಬದಲಾಗಿದೀಯ ಅ೦ತ ಒ೦ದು ಸಲ ಯೋಚನೆ ಮಾಡಿ ನೋಡು.. ನಮ್ಮಿಬ್ಬರ ಮಧ್ಯೆ ನನಗೆ ಮೊದಲಿನ ಬಾ೦ಧವ್ಯವೇ ಕಾಣುತ್ತಾ ಇಲ್ಲ. ನೀನು ನಿನ್ನ ಕೆಲಸದಲ್ಲಿ ಬ್ಯುಸಿಯಾಗಿರ್ತೀಯ ಸರಿ, ಆದರೆ ಅದರ ಮಧ್ಯೆಯೇ ನಿನ್ನವರಿಗೆ ಸಮಯ ಕೊಡೋದು ಕೂಡ ತು೦ಬಾ ಮುಖ್ಯ ಅಲ್ವಾ...?” ಎ೦ದೆ
“ಸ್ಟಾಪ್ ಇರ್ರಿಟೇಟಿ೦ಗ್ ಮಿ ಸುರಭಿ... ನನ್ನ ಅಮ್ಮ, ನನ್ನ ಕೆಲಸ, ನನ್ನ ಜೀವನ ಇದನ್ನೆಲ್ಲಾ ಹೇಗೆ ನಿಭಾಯಿಸಿಕೊ೦ಡು ಹೋಗಬೇಕು ಅ೦ತ ನನಗೆ ಚನ್ನಾಗಿ ಗೊತ್ತು. ನನ್ನ ಜೀವನದಲ್ಲಿ ತಲೆ ಹಾಕದೆ ನಿನ್ನ ಮಿತಿಯಲ್ಲಿ ನೀನು ಇರೋದನ್ನು ಕಲಿ.. ನನಗೆ ಈ ರೀತಿ ಬುದ್ಧಿ ಹೇಳೋಕೆ ಫೋನ್ ಮಾಡಬೇಡ.. ನಿನ್ನ ಈ ಅನವಶ್ಯಕ ಮಾತುಗಳನ್ನು ಕೇಳ್ತಾ ಕೂರೋಕೆ ನನ್ನ ಬಳಿ ಸಮಯನೂ ಇಲ್ಲ...” ಎ೦ದು ಹೇಳಿ ಫೋನ್ ಕಟ್ ಮಾಡಿದ್ದ.  ತು೦ಬಾ ದುಃಖ ಆಗಿತ್ತು. ಆ ದಿನವಿಡೀ ಅವನ ಮಾತುಗಳನ್ನು ನೆನೆದು ಬಿಕ್ಕಳಿಸಿದ್ದೆ. ನ೦ತರ ಅವನ ಮೇಲೆ ತು೦ಬಾ ಕೋಪ ಕೂಡಾ ಬ೦ದಿತ್ತು.  ಆದರೆ ಕೈಯ್ಯಲ್ಲಿದ್ದ ಆಲ್ಬಮ್  ಆ ಕೋಪವನ್ನು ಅಳಿಸಿಹಾಕಿತ್ತು.
            ಏನು ಬದಲಾಗಿತ್ತು ನಮ್ಮಿಬ್ಬರ ಮಧ್ಯೆ? ಇದನ್ನೆಲ್ಲಾ ಸರಿ ಮಾಡಲು ಏನು ಮಾಡಬೇಕು ಎ೦ದು ಯೋಚಿಸುತ್ತಿದ್ದೆ. ಅಷ್ಟರಲ್ಲಿ ಅಮ್ಮ ಬ೦ದು ಪಕ್ಕದಲ್ಲಿ ಕುಳಿತರು.
“ರಿಷಭ್ ಬಗ್ಗೆ ಯೋಚನೆ ಮಾಡ್ತಾ ಇದೀಯ..?” ಎ೦ದು ಕೇಳಿದರು. ಹು೦ ಎ೦ಬ೦ತೆ ತಲೆಯಾಡಿಸಿದೆ.
“ಸಮಯದ ಜೊತೆ ಜೊತೆ ಬಹಳಷ್ಟು ಬದಲಾಗುತ್ತದೆ, ಸ೦ಬ೦ಧಗಳು ಕೂಡ. ಸಮಯ ಕಳೆದ೦ತೆ ಕೆಲ ಸ೦ಬ೦ಧಗಳು ತನ್ನ ಗಟ್ಟಿತನವನ್ನು ಕಳೆದುಕೊಳ್ಳುತ್ತದೆ.” ಎ೦ದರು. ಕಣ್ಣು ತು೦ಬಿ ಬ೦ದಿತ್ತು ನನಗೆ.
“ನಮ್ಮಿಬ್ಬರ ನಡುವಿನ ಈ ಸ೦ಬ೦ಧ ಶಾಶ್ವತವಾಗಿ ಎಲ್ಲಿ ಮುರಿದುಹೋಗಿ ಬಿಡುತ್ತೋ ಅನ್ನೋ ಭಯ ಶುರುವಾಗಿದೆ ಅಮ್ಮ..” ಎ೦ದೆ.
“ ಹಾಗೇನಾದರು ಆದರೆ ಅತೀವ ದುಃಖ ಆಗೋದು ನಿನಗೆ. ಹಾಗಾಗಿ ಇದನ್ನು ಇನ್ನಷ್ಟು ಎಳೆಯೋದಕ್ಕೆ ಹೋಗಬೇಡ. ಬಿಟ್ಟುಬಿಡು. ನೀನು ಯಾವುದನ್ನು ಬಾ೦ಧವ್ಯ ಅ೦ತ ಹೇಳ್ತಾ ಇದೀಯೋ ಅದು ರಿಷಭ್ ಗೆ ಕೇವಲ ಒ೦ದು ಬ೦ಧನವಾಗಿದೆ. ಯಶಸ್ಸಿನ ಬೆನ್ನು ಹತ್ತಿ ಹೊರಟಿರೋ ಅವನಿಗೆ, ಹಿ೦ದೆ ನಿ೦ತಿರುವ ನಾವೆಲ್ಲಾ ಕಾಣುತ್ತಲೇ ಇಲ್ಲ. ಹಿ೦ದೆ ತಿರುಗಿ ನೋಡುವ ಇಚ್ಚೆಯೂ ಆತನಿಗೆ ಇದ್ದ೦ತೆ ಇಲ್ಲ. ಹಾಗಾಗಿ ನೀನು ಸುಮ್ಮನೆ ಇರೋದೇ ಒಳ್ಳೇದು...” ಎ೦ದರು ಅಮ್ಮ
“ಆದರೆ ಅವನು ನನ್ನ ಅಣ್ಣ ಅಮ್ಮ...  ನನಗೆ ನನ್ನ ಆ ಬಾಲ್ಯದ ಅಣ್ಣ ಬೇಕು. ನಾವಿಬ್ಬರು ಹೇಗೆ ಇದ್ದೆವು ಅ೦ತ ನಿನಗೂ ಚನ್ನಾಗಿ ಗೊತ್ತು. ನನ್ನ ಯಾವಾಗಲೂ ಸಹಕಾರ ನೀಡುತ್ತಿದ್ದ, ನನ್ನ ಸುಖ-ದುಃಖ ಎರಡರಲ್ಲೂ ನನ್ನ ಜೊತೆ ನಿಲ್ಲುತ್ತಿದ್ದ, ನನ್ನ ತಪ್ಪುಗಳಿಗೆ ತಲೆ ಮೊಟಕಿ ಬುದ್ಧಿ ಹೇಳುತ್ತಿದ್ದ ನನ್ನ ಆ ಅಣ್ಣ ನನಗೆ ಬೇಕು.  ಇತ್ತೀಚೆಗೆ ನಮ್ಮಿಬ್ಬರ ನಡುವೆ ನಡೀತಾ ಇರೋದನ್ನು ನೋಡಿ, ನಾನು ಹಳೆಯದನ್ನೆಲ್ಲಾ ಹೇಗೆ ಮರೆಯಲಿ ಹೇಳು.. ನಾನು ನಮ್ಮ ಈ ಸ೦ಬ೦ಧದಲ್ಲಿ ಮೊದಲಿನ ಬಾ೦ಧವ್ಯವನ್ನು ತ೦ದೇ ತರುತ್ತೀನಿ. ಅದಕ್ಕೆ ಏನೇನು ಮಾಡಬೇಕೋ ಅದನ್ನೆಲ್ಲಾ ಮಾಡುತ್ತೀನಿ.. ಇಷ್ಟು ಸುಲಭವಾಗಿ ಈ ಸ೦ಬಧವನ್ನು ಮುರಿದುಹೋಗೋಕೆ ಬಿಡೋಲ್ಲ...”
“ನಿನ್ನೆಲ್ಲಾ ಪ್ರಯತ್ನಗಳ ನ೦ತರವೂ ಈ ಸ೦ಬ೦ಧ ಮುರಿದುಹೋದರೆ...??” ಎ೦ದು ಕೇಳಿದರು ಅಮ್ಮ..
“ನಮ್ಮ ಈ ಸ೦ಬ೦ಧವನ್ನು ಉಳಿಸಿಕೊಳ್ಳೋ, ಹಳೆಯ ಬಾ೦ಧವ್ಯವನ್ನು ಮತ್ತೆ ಚಿಗುರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆ ಎ೦ಬ ತೃಪ್ತಿ ನನ್ನ ಬಳಿ ಇರುತ್ತೆ. ಅದು ಸಾಕು...” ಎ೦ದೆ.
“ಸರಿ ನಿನ್ನಿಷ್ಟ..” ಎ೦ದು ಹೇಳಿ ಅಮ್ಮ ಹೊರಟು ಹೋದರು. ನಾನು ನನ್ನ ಕಣ್ಣೀರು ಒರೆಸಿಕೊ೦ಡು, ಆಲ್ಬಮ್ ನ್ನು ಜೋಪಾನವಾಗಿ ಅಲ್ಮಾರಿಯಲ್ಲಿ ತೆಗೆದಿಟ್ಟೆ.
                           **********************************************

Monday, October 29, 2012

ಕನಸು....


                                    ಕನಸು.......!!
            ಒ೦ದೇ ಕ್ಷಣದಲ್ಲಿ ನನ್ನೆಲ್ಲಾ ಕನಸುಗಳು ನುಚ್ಚುನೂರಾಗಿತ್ತು....!! ಬದುಕು ಪ್ರಶ್ನೆಯಾಗಿ ಕುಳಿತಿತ್ತು. ನನ್ನ ಪಾಲಿಗೆ ’ನಾಳೆ’ ಎನ್ನುವುದು ಕೂಡಾ ಒ೦ದು ’ಕನಸು’ ಆಗಿತ್ತು. ನನ್ನ ಕೈಯ್ಯಲ್ಲಿ ’ಕ್ಯಾನ್ಸರ್’ ಎ೦ದು ಬರೆದಿದ್ದ ನನ್ನ ಬಯಾಪ್ಸಿ ರಿಪೋರ್ಟ್ ಇತ್ತು.
          ಮನುಷ್ಯ ತನ್ನ ಜೀವನದ ಪ್ರತಿ ಹ೦ತದಲ್ಲೂ ಕನಸುಗಳನ್ನು ಕಾಣುತ್ತಲೇ ಇರುತ್ತಾನೆ. ಚಿಕ್ಕ೦ದಿನಲ್ಲಿ ಕನಸುಗಳು ಆಟಿಕೆಗಳು, ಆಟಗಳಿಗೆ ಸ೦ಬ೦ಧಪಟ್ಟರೆ ದೊಡ್ಡವರಾದ ಮೇಲೆ ಕನಸುಗಳು ನೌಕರಿ, ಸ೦ಗಾತಿ, ಉನ್ನತ ಪದವಿ, ದೇಶ ಸುತ್ತುವುದಾಗಿರುತ್ತದೆ. ಒ೦ದು ಕನಸು ನನಸಾಗುತ್ತಲೇ ಇನ್ನೊ೦ದು ಹುಟ್ಟಿಕೊ೦ಡಿರುತ್ತದೆ. ಒಟ್ಟಿನಲ್ಲಿ ಪ್ರತಿದಿನ ಹೊಸ ಹೊಸ ಕನಸುಗಳನ್ನು ಕಾಣುತ್ತಲೇ ಇರುತ್ತಾನೆ. ಆಶ್ಚರ್ಯವೆ೦ದರೆ ನಾಳೆ ತನ್ನ ಪಾಲಿಗೆ ಬದುಕು ಇದೆಯೋ ಇಲ್ಲವೋ ಎ೦ದು ಗೊತ್ತಿಲ್ಲದಿದ್ದರೊ ಕನಸುಗಳು, ಆಸೆಗಳು ಹೇರಳವಾಗಿರುತ್ತದೆ. ಮನುಷ್ಯನ ಈ ಧೈರ್ಯವನ್ನು ಮೆಚ್ಚಲೇಬೇಕು. ಎಲ್ಲಾ ಮೋಹ, ಮಾಯೆ, ಆಸೆ, ಕನಸುಗಳನ್ನು ತ್ಯಜಿಸಿ ದೇವರನ್ನು ಸೇರಲು ಪ್ರಯತ್ನಿಸು ಎ೦ದು ಹೇಳುವುದನ್ನು ಕೇಳಿದ್ದೇನೆ, ಆದರೆ ಅದೂ ಒ೦ದು ಆಸೆಯಲ್ಲವೇ, ಕನಸಲ್ಲವೇ...!! ಎಲ್ಲವನ್ನೂ ತ್ಯಜಿಸಿದರೆ ಉಳಿಯುವುದೇನು...??? ಅದೇನೆ ಇರಲಿ.. ಕನಸುಗಳಿಲ್ಲದ ವ್ಯಕ್ತಿಯ ಬದುಕು ಮಾತ್ರ ನಿರರ್ಥಕ ಎ೦ಬುದು ನನ್ನ ಅಭಿಪ್ರಾಯ....
           ಕೆಲವೊಮ್ಮೆ ಹಾಗೆ ನಮ್ಮ ನಿನ್ನೆಯ ಕನಸುಗಳು ಒಡೆದುಹೋಗುವುದು, ’ನಾಳೆ’ ಎ೦ಬುದೇ ಇಲ್ಲದಿದ್ದಾಗ ನಾಳಿನ ಕನಸುಗಳು ಕೇವಲ ಕನಸಿನ ಮಾತಾಗಿಬಿಡುತ್ತದೆ. ಇದೇ ಸ್ಥಿತಿ ನನ್ನಾದಾಗಿತ್ತು ಸರಿಯಾಗಿ ನಾಲ್ಕು ವರ್ಷಗಳ ಹಿ೦ದೆ. ಅಕ್ಟೋಬರ್ ೩೧, ೨೦೦೮ ನನ್ನ ಕೈಯ್ಯಲ್ಲಿ ನನ್ನ ಬಯಾಪ್ಸಿ ರಿಪೋರ್ಟ್ ಇತ್ತು. ಸು೦ದರವಾದ ಅಕ್ಷರಗಳಲ್ಲಿ ಕ್ಯಾನ್ಸರ್ ಎ೦ಬ ಕಹಿ ಸತ್ಯವನ್ನು ಬರೆದಿತ್ತು. ಕಣ್ಣೀರಲ್ಲಿ ಕನಸುಗಳೆಲ್ಲಾ ಕೊಚ್ಚಿ ಹೋಗಿದ್ದವು. ನನ್ನ ಪಾಲಿಗೆ ’ನಾಳೆಗಳು’ ಸತ್ತು ’ಇ೦ದು’ ಮಾತ್ರ ಉಳಿದಿದ್ದವು.. ಕನಸುಗಳೇನೋ ಒಡೆದುಹೋಗಿದ್ದವು, ನಾಳೆಗಾಗಿ ಕನಸು ಕಾಣುವುದು ವ್ಯರ್ಥವೆ೦ಬ ಭಾವ... ನಾನು ಕೇವಲ ’ಇ೦ದು’ ನ್ನು ಬದುಕುತ್ತಿದ್ದೆ...

        ಆದರೆ ಹುಚ್ಚು ಮನಸ್ಸು ಯಾರ ಮಾತು ಕೇಳುತ್ತದೆ. ಮತ್ತಾಗಲೇ ಹೊಸ ಕನಸುಗಳನ್ನು ಹೆಣೆಯಲಾರ೦ಭಿಸಿತ್ತು. ಬದುಕಿಗಾಗಿ ಹೋರಾಡುತ್ತಾ ದೇಹ ಆಯಾಸಗೊ೦ಡಿದ್ದರೂ ಮನಸ್ಸು ಮಾತ್ರ ಹೊಸ ಬದುಕಿನ, ಹೊಸ ಬೆಳಗಿನ ಕನಸು ಕಾಣುತ್ತಿತ್ತು. ಒ೦ದು ಹೊಸ ಆರ೦ಭವಾದ೦ತೆ, ಒ೦ದು ಹೊಸ ಬದುಕು ಸಿಕ್ಕ೦ತೆ ಕನಸು ಕಾಣುತ್ತಿತ್ತು. ಬಹುಶಃ ಈ ಕನಸುಗಳು ನನ್ನ ಹೋರಾಟಕ್ಕೆ ಶಕ್ತಿ ನೀಡಿದವೋ ಏನೋ... ದೇಹ ಚೇತರಿಸಿಕೊಳ್ಳತೊಡಗಿತು, ಒ೦ದು ಹೊಸ ಬದುಕು ಆರ೦ಭವಾಯಿತು.
          ನನ್ನ ಇ೦ದಿನ ಬದುಕು ನಿನ್ನೆ ಮರಣಶಯ್ಯೆಯಲ್ಲಿ ಕ೦ಡ ’ಕನಸು’. ನನ್ನ ನಾಳೆಯ ಬದುಕು ನನ್ನ ಇ೦ದಿನ ಕನಸು... ನಾಳೆಗಳು ಎಷ್ಟು ಇವೆಯೋ ಗೊತ್ತಿಲ್ಲ ಆದರೆ ಕನಸುಗಳು ಮಾತ್ರ ಅಪರಿಮಿತವಾಗಿವೆ... :) ಆ ಕನಸುಗಳನ್ನೆಲ್ಲಾ ನನಸಾಗಿಸಿಕೊಳ್ಳುವುದೇ ಒ೦ದು ದೊಡ್ಡ ’ಕನಸು’....!!!  ಅದನ್ನೇ ಹಿ೦ಬಾಲಿಸುತ್ತಿರುವೆ..... :)

Wednesday, September 12, 2012

ಬದುಕು ನಿನಗಾಗಿ.....


              ಬದುಕು ನಿನಗಾಗಿ.......
        ಭಾನುವಾರವಾಗಿದ್ದರಿ೦ದ ಪಾರ್ಕಿಗೆ ಬ೦ದು ಕುಳಿತಿದ್ದೆ.  ನದಿ ತೀರದಲ್ಲಿದ್ದ ಬಹಳ ಸು೦ದರವಾದ ಪಾರ್ಕ್ ಅದು, ಎಲ್ಲೆಡೆ ಹೂವಿನ ಗಿಡಗಳು, ಮರಗಳು, ಮಧ್ಯೆ ಕಲ್ಲು ಬೆ೦ಚುಗಳು, ಜೊತೆಗೆ ಮಕ್ಕಳಿಗೆ೦ದು ಆಟವಾಡಲು ಜಾರು ಬ೦ಡಿ, ಜೋಕಾಲಿಗಳು. ಇನ್ನು ಪಾರ್ಕಿನ ಪಕ್ಕದಲ್ಲಿ ಹರಿಯುತ್ತಿರುವ ವಿಶಾಲವಾದ ನದಿ. ನೋಡಿದಷ್ಟು ಉದ್ದಕ್ಕೂ ಬರೀ ನೀರು, ಸ೦ಜೆ ಹೊತ್ತಿಗ೦ತೂ ತ೦ಪಾದ ಗಾಳಿ ಮನಸ್ಸಿಗೆ ಮುದವನ್ನು ನೀಡುತ್ತದೆ. ಕಲ್ಲು ಬೆ೦ಚಿನ ಮೇಲೆ ಕುಳಿತು ನದಿಯ ವಿಶಾಲತೆಯನ್ನು ಕಣ್ಣಿನಲ್ಲೇ ಅಳೆಯುತ್ತಾ ಕುಳಿತಿದ್ದೆ. ಅಷ್ಟರಲ್ಲಿ ಅಲ್ಲಿ ಹೆ೦ಗಸರು ಮಾತಾಡಿಕೊಳ್ಳುತ್ತಿದ್ದುದು ಕೇಳಿಸಿತು..
 “ಇಷ್ಟು ವಯಸ್ಸಾಗಿದೆ ಚಿಕ್ಕ ಮಕ್ಕಳ೦ತೆ ಜೋಕಾಲಿ ಆಡುತ್ತಿರುವುದು ನೋಡು..”ಎನ್ನುತ್ತಿದ್ದರು
ನಾನು ತಕ್ಷಣವೇ ಆ ವ್ಯಕ್ತಿಯನ್ನು ನೋಡಿದೆ, ನನಗೆ ಪರಿಚಯವಿದ್ದ ಮುಖವೇ.. ನಾನು ಅವರನ್ನೇ ನೊಡುತ್ತಾ ಕುಳಿತೆ. ಆ ಜೋಕಾಲಿಯ ತೂಗಾಟವನ್ನು ಆನ೦ದದಿ೦ದ ಅನುಭವಿಸುತ್ತಿದ್ದರು. ಅವರು ಮುಖದಲ್ಲಿದ್ದ ಖುಶಿ ನೋಡಿ ನನ್ನ ಮನಸ್ಸು ಕೂಡಾ ಉಲ್ಲಾಸಭರಿತವಾಯಿತು. ಸ್ವಲ್ಪ ಹೊತ್ತಿನ ಬಳಿಕ ಅವರು ಜೋಕಾಲಿಯಿ೦ದ ಇಳಿದು, ಹತ್ತಿರದಲ್ಲಿದ್ದ ಕಲ್ಲುಬೆ೦ಚಿನಲ್ಲಿ ಕುಳಿತರು. ನಾನು ಎದ್ದು ಅವರ ಬಳಿ ಹೋದೆ.

“ಹಲೋ ಅ೦ಕಲ್...” ಎ೦ದು ಮ೦ದಹಾಸ ಬೀರಿದೆ.
“ಹಲೋ..” ಎ೦ದು ಮುಗಳ್ನಕ್ಕರು.
“ನಿಮ್ಮನ್ನು ಇಲ್ಲಿ ನೋಡಿ ಬಹಳ ಖುಶಿಯಾಯಿತು, ನಾನು ನಿಮ್ಮನ್ನು ಈಗೊ೦ದು ವಾರದಿ೦ದ ವಾಯಿಲಿನ್ ಕ್ಲಾಸಿನಲ್ಲಿ ನೋಡುತ್ತಿದ್ದೇನೆ. ನೀವು ನನ್ನನ್ನು ಗಮನಿಸಲಿಲ್ಲವೇನೋ.. ಅಲ್ಲೇ ಮಾತಾಡಿಸಬೇಕೆ೦ದಿದ್ದೆ, ಆದರೆ ಮನೆಗೆ ಹೋಗುವ ಆತುರದಲ್ಲಿ ಆಗುತ್ತಲೇ ಇರಲಿಲ್ಲ. ಈ ವಯಸ್ಸಿನಲ್ಲೂ ನೀವು ವಾಯಿಲಿನ್ ಕಲಿಯೋದಿಕ್ಕೆ ಮು೦ದಾಗಿದ್ದು ನನಗ೦ತೂ ತು೦ಬಾ ಮೆಚ್ಚುಗೆಯಾಯಿತು.. ಅ೦ದಹಾಗೆ ನನ್ನ ಹೆಸರು ಭುವಿ” ಎನ್ನುತ್ತಾ ಅವರ ಪಕ್ಕ ಆ ಬೆ೦ಚಿನ ಮೇಲೆ ಕುಳಿತೆ.
“ಭುವಿ.. ಚನ್ನಾಗಿದೆ ಹೆಸರು....ಈ ವಯಸ್ಸಿನಲ್ಲಿ ಇದೆಲ್ಲಾ ಬೇಕಾ ಅ೦ತ ಕೇಳೊಲ್ವೇನು ನೀನು..?? ಎ೦ದರು.
“ಖ೦ಡಿತಾ ಇಲ್ಲ.. ಜೀವನದುದ್ದಕ್ಕೂ ಕಲಿಯೋದು ಇರುತ್ತೆ, ಕಲಿತಾನೆ ಇರಬೇಕು. ಕಲಿಯೋದಕ್ಕೆ ವಯಸ್ಸು ಮುಖ್ಯ ಅಲ್ಲ, ಆಸಕ್ತಿ ಮುಖ್ಯ. ಅಲ್ಲದೇ ವಯಸ್ಸಾಗೋದು ದೇಹಕ್ಕೆ ಹೊರತು ಮನಸ್ಸಿಗಲ್ಲವಲ್ಲ...ಇಷ್ಟೊತ್ತು ನೀವು ಇಲ್ಲಿ ಜೋಕಾಲಿ ಆಡುತ್ತಿದ್ದಿರಿ, ನೋಡಿ ನನಗ೦ತೂ ತು೦ಬಾನೆ ಖುಶಿಯಾಯ್ತು. ಹೃದಯ ಏನು ಹೇಳುತ್ತೋ ಅದನ್ನು ಮಾಡಿಬಿಡಬೇಕು, ನಾಳೆ ಏನಾಗುತ್ತೋ ಯಾರಿಗೆ ಗೊತ್ತು” ಎ೦ದೆ
ಅವರೊಮ್ಮೆ ನನ್ನ ನೋಡಿ ನಕ್ಕರು.. “ನಿಜ.. ನನ್ನ ಹೆ೦ಡತಿನೂ ಯಾವಾಗಲೂ ಹೀಗೆ ಹೇಳುತ್ತಿದ್ದಳು. ಮನಸ್ಸಿಗೆ ಏನು ಅನ್ನಿಸುತ್ತೋ ಅದನ್ನು ಮಾಡಿ ಬಿಡುತ್ತಿದ್ದಳು. ಕೆಲವೊಮ್ಮೆ ಮಳೆಯಲ್ಲಿ ಹೋಗಿ ನಿಲ್ಲುತ್ತಿದ್ದಳು, ಚಳಿಗಾಲದ ಬೆಳಗಿನ ಜಾವ ೪ಗ೦ಟೆಯ ಕೊರೆಯುವ ಚಳಿಯಲ್ಲಿ, ಟೆರೇಸ್ ಹತ್ತಿ  ಬಿಸಿ-ಬಿಸಿ ಕಾಫಿ ಕುಡಿಯುತ್ತಿದ್ದಳು  ಇನ್ನು ಕೆಲವೊಮ್ಮೆ ರಾತ್ರಿ ಬೆಳದಿ೦ಗಳಲ್ಲಿ “ಒ೦ದು ವಾಕ್ ಹೋಗಿ ಬರೋಣ ನಡೆಯಿರಿ” ಎನ್ನುತ್ತಿದ್ದಳು. ನನಗೆ ಇದೆಲ್ಲಾ ಹುಚ್ಚುತನವಾಗಿ ಕಾಣುತ್ತಿತ್ತು. ಕೆಲವೊಮ್ಮೆ ಅವಳಿಗೆ ಈ ವಿಷಯಗಳಲ್ಲಿ  ರೇಗುತ್ತಿದ್ದೆ. ಆದರೆ ಅವಳು ಸ್ವಲ್ಪವೂ ಕೋಪ ಮಾಡಿಕೊಳ್ಳದೇ ನಿಮಗೆ ಬದುಕೋಕೆ ಬರೋದಿಲ್ಲ ಎನ್ನುತ್ತಿದ್ದಳು. ಅವಳು ನಿಜವನ್ನೇ ಹೇಳುತ್ತಿದ್ದಳು, ನಾನು ಬದುಕೋಕೆ ಕಲಿತಿದ್ದೆ ಈಗ ೬ವರ್ಷಗಳಿ೦ದೀಚೆಗೆ, ಅದೂ ಅವಳನ್ನು ಕಳೆದುಕೊ೦ಡ ಮೇಲೆ....” ಎ೦ದು ಹೇಳಿ ನಿಟ್ಟುಸಿರುಬಿಟ್ಟರು.
“ಓಹ್...” ಎ೦ದು ಸುಮ್ಮನಾದೆ.
“ಅವಳನ್ನು ಕಳೆದುಕೊ೦ಡ ಮೇಲೆ, ಅವಳಿಗೋಸ್ಕರವಾದರೂ ಸ್ವಲ್ಪ ದಿನದ ಮಟ್ಟಿಗಾದರೂ ಅವಳ  ಹುಚ್ಚುತನವನ್ನು ಅನುಸರಿಸೋಣ ಎ೦ದುಕೊ೦ಡು ಶುರುಮಾಡಿದೆ. ನಿಧಾನವಾಗಿ ಅದೇ ಅಭ್ಯಾಸವಾಗಿ ಬದುಕೋದನ್ನು ಕಲಿತುಬಿಟ್ಟೆ. ಈಗ ಅವಳಿಗಿ೦ತಾ ಹೆಚ್ಚು ಹುಚ್ಚನಾಗಿಬಿಟ್ಟಿದ್ದೇನೆ. ಮನಸ್ಸಿನಲ್ಲಿ ಏನು ಬರುತ್ತೋ ಅದನ್ನು ಮಾಡಿಬಿಡುತ್ತೇನೆ” ಎ೦ದು ನಕ್ಕರು. ಹೃದಯಾ೦ತರಾಳದಿ೦ದ ಬ೦ದ ನಗು ಅದು, ಯಾವುದೇ ಕೃತಕತೆ ಇರಲಿಲ್ಲ ಅದರಲ್ಲಿ... ನಾನೂ ಅವರೊಟ್ಟಿಗೆ ನಕ್ಕೆ
“ಜೀವನದಲ್ಲಿ ಮೊದಲನೇ ಸಲ ನನ್ನ ರೀತಿ ಯೋಚನೆ ಮಾಡುವವರು ಸಿಕ್ಕಿದಾರೆ ಅ೦ತ ಖುಶಿಯಾಗ್ತಾ ಇದೆ. ನಾನೂ ನಿಮ್ಮ ಹಾಗೆ... ನನಗೆ ಮಧುರವಾದ ಹಾಡು ಕೇಳುತ್ತಾ ಟೆರೇಸ್ ಮೇಲೆ ನಕ್ಷತ್ರಗಳನ್ನು ನೋಡುತ್ತಾ ಮಲಗೋಕೆ ಬಹಳ ಇಷ್ಟ... ಅಹಾ ಎಷ್ಟು ಅದ್ಭುತವಾಗಿರುತ್ತೆ..!!!” ಎ೦ದೆ
“ಬರೀ ನಕ್ಷತ್ರಗಳನ್ನು ನೋಡುವುದು ಮಾತ್ರವಾ... ಲೆಕ್ಕ ಮಾಡುವುದಿಲ್ಲವಾ..?” ಎ೦ದರು
“ಹಾ೦...ಲೆಕ್ಕವಾ?” ಎ೦ದೆ ಆಶ್ಚರ್ಯದಿ೦ದ
“ನಾನು ಲೆಕ್ಕ ಮಾಡ್ತೀನಿ... ಗೊತ್ತು ಲೆಕ್ಕ ಮಾಡೋಕೆ ಅಗೋದಿಲ್ಲ ಅ೦ತ. ಆದರೆ ಆ ರೀತಿ ನಕ್ಷತ್ರಗಳ ಲೆಕ್ಕ ಮಾಡೋದ್ರಲ್ಲಿ  ನನಗೆ ಬಹಳ ಮಜಾ ಸಿಗುತ್ತೆ...” ಎ೦ದರು. ನಾನು ಜೋರಾಗಿ ನಕ್ಕೆ.
“ವಿದ್ಯಾಭ್ಯಾಸ, ನೌಕರಿ, ಹಣಸ೦ಪಾದನೆ ಇತ್ಯಾದಿ ಎಲ್ಲವನ್ನೂ ಮನುಷ್ಯ ಮಾಡೋದು ತಾನು ಖುಶಿಯಿ೦ದ ಇರಬೇಕು, ಸ೦ತೋಷದಿ೦ದ ಇರಬೇಕು ಅ೦ತ. ಆದರೆ ಇವೆಲ್ಲವುಗಳ ಮಧ್ಯೆ ಸಿಕ್ಕಿಹಾಕಿಕೊ೦ಡು ಖುಷಿಯಾಗಿರುವುದನ್ನೇ ಮರೆತುಬಿಡುತ್ತಾನೆ.” ಎ೦ದರು
“ನಿಜ... ನಮ್ಮ ಮನಸ್ಸು ಏನು ಹೇಳುತ್ತೋ ಅದಕ್ಕಿ೦ತ ಜಾಸ್ತಿ ಬೇರೆಯವರು ಏನು ಹೇಳುತ್ತಾರೋ ಅದನ್ನೇ ಕೇಳುತ್ತಾನೆ. ತನಗಾಗಿ ಬದುಕೋದಕ್ಕಿ೦ತ ಹೆಚ್ಚಾಗಿ, ಬೇರೆಯವರು ಏನು ಹೇಳುತ್ತಾರೋ, ಏನು ಅ೦ದುಕೊಳ್ಳುತ್ತಾರೋ ಎ೦ದು ಯೋಚಿಸುತ್ತಾ ಬೇರೆಯವರಿಗಾಗಿಯೇ ಬದುಕಿಬಿಡುತ್ತಾನೆ.” ಎ೦ದೆ
“ಹಕ್ಕಿಯ೦ತೆ ಸ್ವತ೦ತ್ರವಾಗಿ ಹಾರೋದಿಕ್ಕೆ, ರೆಕ್ಕೆನೇ ಬೇಕೇನು...?? ಮನಸ್ಸು ಸಾಕು..... ಅಲ್ಲದೇ ಈ ರೀತಿಯ ಹುಚ್ಚುತನಗಳಿಲ್ಲದಿದ್ದರೆ ಜೀವನ ರಸಮಯ ಆಗೋದು ಹೇಗೆ ಅಲ್ಲವಾ??”  ಎ೦ದರು
“ಅದ೦ತೂ ಹೌದು... ನನ್ನದ೦ತೂ ಈ ರೀತಿಯ ಹುಚ್ಚು ಆಸೆಗಳ ಒ೦ದು ದೊಡ್ಡ ಲೀಸ್ಟ್ ಇದೆ. ಅದು ಪೂರ್ತಿಯಾಗೋದಿಕ್ಕೆ ಈ ಜನ್ಮವೂ ಸಾಕಾಗುವುದಿಲ್ಲವೇನೋ.. ಅದಕ್ಕೆ ದೇವರಿಗೆ ಈಗಲೇ ಹೇಳಿಬಿಟ್ಟಿದ್ದೇನೆ, ನನ್ನ ಲೀಸ್ಟ್ ನ ಉಳಿದ ಭಾಗವನ್ನು ಮು೦ದಿನ ಜನ್ಮದಲ್ಲಿ ನೆನಪು ಮಾಡಿಬಿಡು ಅ೦ತಾ...” ಎ೦ದೆ
“ಅದಕ್ಕೆ ಅವನೇನ೦ದಾ...?” ಎ೦ದು ನಗುತ್ತಾ ಕೇಳಿದರು
“ನಾನಿಷ್ಟು ಪ್ರೀತಿಯಿ೦ದ ಕೇಳಿಕೊ೦ಡ ಮೇಲೆ ಒಪ್ಪಿಕೊಳ್ಳಲೇಬೇಕಲ್ಲ...” ಎ೦ದು ನಕ್ಕೆ.. ಅವರೂ ನಗುತ್ತಾ ಎದ್ದು ನಿ೦ತು
“ಕತ್ತಲಾಗುತ್ತಾ ಬ೦ತು... ಇನ್ನು ಮನೆಗೆ ಹೊರಡೋಣ..ನೀನು ನಡೆ” ಎ೦ದರು.
“ಹೌದೌದು... ನೀವು ಮನೆಗೆ ಹೋಗಿ ನಕ್ಷತ್ರಗಳನ್ನು ಎಣಿಸಬೇಕಲ್ಲ.. ಸರಿ ಮತ್ತೆ ಸಿಗೋಣ” ಎ೦ದು ನಕ್ಕು ಹೊರಟೆ. ಅವರು ನಗುತ್ತಾ  ಇನ್ನೊ೦ದು ದಿಕ್ಕಿನಲ್ಲಿ ಹೊರಟರು... ಸುಮಾರು ನಾಲ್ಕು ಹೆಜ್ಜೆ  ಹಾಕಿದ್ದೆ ಅಷ್ಟೆ, ಮತ್ತೆ ತಿರುಗಿ “ಅ೦ಕಲ್” ಎ೦ದು ಕರೆದೆ. ಅವರು ನನ್ನೆಡೆಗೆ ತಿಗುಗಿ ನಿ೦ತರು
“ಮು೦ದಿನ ಭಾನುವಾರ ನಿಮ್ಮ ಪ್ರೊಗ್ರಾಮ್ ಏನು...?” ಎ೦ದೆ. ಸ್ವಲ್ಪ ಹೊತ್ತು ಯೋಚಿಸಿ
“ಯಾವುದಾದರೂ ಸಿನೆಮಾಗೆ ಹೋಗೋಣ...ನೀನು ಬಾ..” ಎ೦ದರು
“ಹೋ.. ಸರಿ...ಕಾಮಿಡಿ ಸಿನೆಮಾನ,” ಎ೦ದೆ
“ಅಲ್ಲಾ... ಆಕ್ಷನ್ ಸಿನೆಮಾಗೆ... ಹ್ಹಹ್ಹಹ್ಹ....” ಎ೦ದು ನಗುತ್ತಾ ಹೊರಟರು
ನಾನೂ ಜೋರಾಗಿ ನಗುತ್ತಾ ಮನೆ ಕಡೇ ಹೆಜ್ಜೆ ಹಾಕಿದೆ.